ಶೂನ್ಯ ನೆರಳಿನ ದಿನಕ್ಕೆ ಸಾಕ್ಷಿಯಾದ ಸಾಂಸ್ಕೃತಿಕ ನಗರಿ ಮೈಸೂರು
ಮೈಸೂರು, ಏಪ್ರಿಲ್ 23:ನಮ್ಮ ಹಿಂದೆ ಯಾವಾಗಲೂ ಬೆನ್ನತ್ತಿ ಬರುವುದು ನೆರಳು. ಎಲ್ಲಿ ಹೋದರೂ ಅಲ್ಲಿ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಿರುವ ನೆರಳು ನಿನ್ನೆ ಮೈಸೂರಿಗರಿಗೆ ಕಾಣಲಿಲ್ಲ. ಮಟ- ಮಟ ಮಧ್ಯಾಹ್ನ ನೆತ್ತಿಯ ಮೇಲೆ ಸುಡುವ ಬಿಸಿಲಿನ ನಡುವೆ ಒಂದೇ ಒಂದು ನೆರಳಿರಲಿಲ್ಲ. ಮರಗಳು, ಕಟ್ಟಡಗಳು ಸ್ವತಃ ನಮ್ಮ ನೆರಳೇ ಮೈಸೂರಿನಲ್ಲಿ ಮಾಯವಾದಂತೆ ಇತ್ತು.
ಹೌದು, ಅರಮನೆಗಳ ನಗರಿ ಮೈಸೂರು ನಿನ್ನೆ ಅಪರೂಪದ ಶೂನ್ಯ ನೆರಳು ದಿನಕ್ಕೆ ಸಾಕ್ಷಿಯಾಗಿತ್ತು. 12.22 ಕ್ಕೆ ಸರಿಯಾಗಿ ನೆರಳು ನೇರ ನೆಲದ ಮೇಲೆ ಬೀಳಲಿಲ್ಲ. ಈ ರೀತಿಯ ಪ್ರಾಕೃತಿಕ ಘಟನೆ ವರ್ಷದಲ್ಲಿ ಎರಡು ದಿನಗಳು ಮಾತ್ರ ಸಂಭವಿಸುತ್ತವೆ ಎನ್ನಲಾಗಿದೆ. ನಗರದಲ್ಲಿ ಪ್ರಸಕ್ತ ವರ್ಷ ಏಪ್ರಿಲ್ 22 ಹಾಗೂ ಅಕ್ಟೋಬರ್ 23 ರಂದು ಶೂನ್ಯ ನೆರಳು ದಿನ ಎಂದು ಗುರುತಿಸಲಾಗಿದೆ.
ಏಪ್ರಿಲ್ ನಿಂದ ಜೂನ್ ವರೆಗೆ ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ಚಲಿಸುತ್ತದೆ. ಜೂನ್ 22ರಂದು ಸೂರ್ಯ ಪಥ ಸಂಚಲನ ಗರಿಷ್ಠ ಮಟ್ಟವನ್ನು ಮುಟ್ಟುತ್ತದೆ. ಆ ನಂತರ ದಕ್ಷಿಣ ದಿಕ್ಕಿಗೆ ಹಿಂತಿರುಗುತ್ತದೆ. ಇದೇ ದಕ್ಷಿಣಾಯನ. ಬೇರೆ - ಬೇರೆ ಪ್ರದೇಶಗಳಲ್ಲಿ ಬೇರೆ - ಬೇರೆ ದಿನಗಳಲ್ಲಿ ಶೂನ್ಯ ನೆರಳು ದಾಖಲಾಗುತ್ತದೆ.

ಏ.23ರಂದು ಮಂಡ್ಯ, ಏ.24ರಂದು ಬೆಂಗಳೂರು, ಕೋಲಾರ, ಹಾಸನ, ಏ. 25ರಂದು ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಉಡುಪಿ, ಏ. 27ರಂದು ಶಿವಮೊಗ್ಗ, ಏ. 28ರಂದು ಚಿತ್ರದುರ್ಗ, ಏ. 29ರಂದು ದಾವಣಗೆರೆ, ಏ.30ರಂದು ಕಾರವಾರ, ಹಾವೇರಿ, ಮೇ 1ರಂದು ಬಳ್ಳಾರಿ, ಮೇ 3ರಂದು ಬೆಳಗಾವಿ, ಮೇ 2ರಂದು ಧಾರವಾಡ, ಗದಗ, ಕೊಪ್ಪಳ, ಮೇ 5ರಂದು ಬಾಗಲಕೋಟೆ, ರಾಯಚೂರು, ಮೇ 7ರಂದು ವಿಜಯಪುರ, ಮೇ 9ರಂದು ಕಲಬುರ್ಗಿ, ಮೇ 11ರಂದು ಬೀದರ್ ಶೂನ್ಯ ದಿನಕ್ಕೆ ಸಾಕ್ಷಿಯಾಗಲಿವೆ.












Click it and Unblock the Notifications