ಸ್ಕೂಟರ್ ನಲ್ಲೇ ಭಾರತ ಯಾತ್ರೆ ಮಾಡಿಸಿದ ಮಗನಿಗೆ ಮಹೀಂದ್ರಾ ಕಾರ್ ಗಿಫ್ಟ್
ಮೈಸೂರು, ಸೆಪ್ಟೆಂಬರ್ 19: ತನ್ನ ಅಮ್ಮನ ಆಸೆಯಂತೆ ಅಪ್ಪನ ಹಳೆಯ ಬಜಾಜ್ ಸ್ಕೂಟರ್ ನಲ್ಲೇ ದೇಶದ ಎಲ್ಲ ಪುಣ್ಯ ಕ್ಷೇತ್ರಗಳ ದರ್ಶನವನ್ನು ತಾಯಿಗೆ ಮಾಡಿಸಿದ ಆಧುನಿಕ ಶ್ರವಣ ಕುಮಾರ, ಬೋಗಾದಿ ನಿವಾಸಿ ಕೃಷ್ಣ ಕುಮಾರ್ ಅವರಿಗೆ ಮಹೀಂದ್ರ ಕಂಪೆನಿಯು ನಿನ್ನೆ ಕಾರ್ ಒಂದನ್ನು ಕೊಡುಗೆಯಾಗಿ ನೀಡಿದೆ.
ಕೃಷ್ಣ ಕುಮಾರ್ ಅವರು ಭಾರತ ದರ್ಶನ ಯಾತ್ರೆಯಲ್ಲಿದ್ದಾಗಲೇ ಈ ಕುರಿತು ತಿಳಿದುಕೊಂಡಿದ್ದ ಮಹೀಂದ್ರ ಅಂಡ್ ಮಹೀಂದ್ರ ಕಂಪೆನಿಯ ಮಾಲೀಕ ಆನಂದ್ ಮಹೀಂದ್ರ ಅವರು ಕಾರನ್ನು ಗಿಫ್ಟ್ ಆಗಿ ನೀಡುವುದಾಗಿ ತಿಳಿಸಿದ್ದರು.
ಅದರಂತೆ ತಾಯಿ ಮಗ ಮೈಸೂರಿಗೆ ಆಗಮಿಸಿದ ಎರಡೇ ದಿನಕ್ಕೆ ಮಹೀಂದ್ರ ಕೆಯುವಿ 100 ಕಾರನ್ನು ಗಿಫ್ಟ್ ಆಗಿ ಶೋರೂಂ ಸಿಬ್ಬಂದಿ ನೀಡಿದ್ದಾರೆ. ಕೃಷ್ಣಕುಮಾರ್ ತಮ್ಮ ತಾಯಿ ಚೂಡಾಮಣಿಯವರ ಅಪೇಕ್ಷೆಯಂತೆ ಅವರಿಗೆ ಇಡೀ ಭಾರತವನ್ನು ಸ್ಕೂಟರ್ ನಲ್ಲಿ ಸುತ್ತಿಸಿ, ತಾಯಿ ಜೊತೆ ತೀರ್ಥಯಾತ್ರೆ ಕೈಗೊಂಡಿದ್ದರು. 55 ಸಾವಿರ ಕಿಲೋ ಮೀಟರ್ ತೀರ್ಥಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದರು. ಮೂರು ನೆರೆ ರಾಷ್ಟ್ರ ಸೇರಿದಂತೆ ಭಾರತದ ಎಲ್ಲಾ ತೀರ್ಥ ಕ್ಷೇತ್ರಗಳನ್ನು ತಾಯಿಗೆ ತೋರಿಸಿರುವ ಮಗ ಆಧುನಿಕ ಶ್ರವಣಕುಮಾರ ಎಂದೇ ಖ್ಯಾತಿ ಗಳಿಸಿದ್ದಾರೆ.

ತಮ್ಮ ತಾಯಿಗಾಗಿ, ಆಕೆಯ ಆಸೆಯನ್ನು ಪೂರೈಸಬೇಕೆಂದು ಬರೋಬ್ಬರಿ 2 ವರ್ಷ 9 ತಿಂಗಳ ನಿರಂತರ ಪ್ರಯಾಣ ಮಾಡಿದ್ದಾರೆ. ಭಾರತದ ನೂರಾರು ತೀರ್ಥ ಕ್ಷೇತ್ರಗಳ ದರ್ಶನವನ್ನು ಮಾಡಿಸಿದ್ದರು.












Click it and Unblock the Notifications