ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಆರಿಸುವಾಗ ಮಹಿಳೆಯ ಶವ ಪತ್ತೆ
ಮೈಸೂರು, ಮಾರ್ಚ್ 9: ಕಿಡಿಗೇಡಿಗಳ ಕೃತ್ಯವೋ, ಬಿಸಿಲಿನ ಧಗೆಯೋ, ಆಕಸ್ಮಿಕವೋ ಚಾಮುಂಡಿ ಬೆಟ್ಟಕ್ಕೆ ಬೆಂಕಿಯ ಕಾಟ ಆರಂಭವಾಗಿದ್ದು, ನಿನ್ನೆ ತಡರಾತ್ರಿಯವರೆಗೂ ಕಾಣಿಸಿಕೊಂಡು ಬೆಂಕಿ ಹೊತ್ತಿ ಉರಿದ ಪರಿಣಾಮ ಸುಮಾರು 60 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ.
ಇನ್ನು ಬೆಂಕಿಯ ಕೆನ್ನಾಲಿಗೆಗೆ ಬೆಟ್ಟದ ಕುರುಚಲು ಗಿಡಗಳು, ಸಣ್ಣಪುಟ್ಟ ಮರಗಿಡಗಳು ಸುಟ್ಟು ಕರಕಲಾಗಿವೆ. ಇದನ್ನು ಕಂಡು ನೆರೆದಿದ್ದ ಜನರು ಮಮ್ಮಲ ಮರಗುತ್ತಿದ್ದದ್ದು ಒಂದೆಡೆಯಾದರೆ ಮತ್ತೊಂದೆಡೆ ಅಗ್ನಿಶಾಮಕದಳ, ಅರಣ್ಯ ಇಲಾಖೆ ಹಾಗೂ ಪೊಲೀಸರು ಬೆಂಕಿಯನ್ನು ಆರಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು.
ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ನಂಜನಗೂಡು-ಮೈಸೂರು ರಸ್ತೆಯ ಬಂಡಿಪಾಳ್ಯದ ಹಿಂಭಾಗ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸಣ್ಣ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಎಪಿಎಂಸಿ ಆವರಣದ ವ್ಯಾಪಾರಸ್ಥರು ಕೂಡಲೇ ಅಗ್ನಿಶಾಮಕದಳ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಚಾರ ಮುಟ್ಟಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಡಿಎಸ್ಎಫ್ ಪ್ರಶಾಂತ್ ಕುಮಾರ್, ಅಗ್ನಿಶಾಮಕದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರಲ್ಲದೆ ಸುಮಾರು80ಕ್ಕೂ ಹೆಚ್ಚು ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದರು.
ಬೆಂಕಿ ಆವರಿಸಿದ್ದ ಪ್ರದೇಶಕ್ಕೆ ತೆರಳಿದ ಅಗ್ನಿಶಾಮಕದಳದ ಸಿಬ್ಬಂದಿ ನೀರಿನ ಮೂಲಕ ಬೆಂಕಿ ನಂದಿಸಲು ಮುಂದಾದರೆ, ಅರಣ್ಯ ಇಲಾಖೆಯ ಸಿಬ್ಬಂದಿ ಹಸಿ ಸೊಪ್ಪು ಬಳಸಿ ಬೆಂಕಿಯನ್ನು ಆರಿಸಲು ಮುಂದಾದರು. ನಂತರ ಬೆಂಕಿ ಆರಿಸಲು ಒಟ್ಟು 10 ಟ್ಯಾಂಕರ್ ಗಳನ್ನು ಬಳಸಲಾಯಿತು.
ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಕೊನೆಗೂ ಸಫಲರಾದರು. ಅಷ್ಟರಲ್ಲಿ ಆದಿಚುಂಚನಗಿರಿಮಠದ ಖಾಲಿ ನಿವೇಶನ ಹಿಂಭಾಗದಲ್ಲಿರುವ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಲ್ಲಿಗೆ ತೆರಳಿದ 50 ಹೆಚ್ಚು ಮಂದಿ ಸೊಪ್ಪುಗಳನ್ನು ಬಳಸಿ ಬೆಂಕಿಯನ್ನು ನಂದಿಸಿದ್ದರು.

ಇನ್ನು ಚಾಮುಂಡಿ ಬೆಟ್ಟದಲ್ಲಿ ಬೆಂಕಿ ನಂದಿಸುವ ವೇಳೆ ಅಪರಿಚಿತ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದಿಚುಂಚನಗಿರಿ ಮಠದ ಹಿಂಭಾಗದಲ್ಲಿನ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ನಂದಿಸುವ ವೇಳೆಗೆ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಕೂಡಲೇ ಕೆ. ಆರ್ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು.












Click it and Unblock the Notifications