ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮನಗೆದ್ದಿದ್ದ ಬಾಲಕ ದಾರುಣ ಸಾವು
ಮಡಿಕೇರಿ, ಮೇ 20: ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ತನ್ನ ಕುತ್ತಿಗೆಗೆ ವೇಲು ಸುತ್ತಿಕೊಂಡ ಪರಿಣಾಮ ಎಂಟು ವರ್ಷದ ಬಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ಮಡಿಕೇರಿಯ ಹೊರವಲಯದಲ್ಲಿ ನಡೆದಿದೆ.
ಮಡಿಕೇರಿಯಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮನೆಯನ್ನು ಕಳೆದುಕೊಂಡಿದ್ದ ಈ ಬಾಲಕ ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ. ಈ ವೇಳೆ ಚಿತ್ರಕಲೆಯ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನವನ್ನು ಸೆಳೆದಿದ್ದ.
ಮಡಿಕೇರಿಯ ಹೊರವಲಯದ ಗ್ರಾಮದಲ್ಲಿದ್ದ ಎಂಟು ವರ್ಷದ ಈ ಬಾಲಕ ಮನೆಯಲ್ಲಿ ಒಬ್ಬಂಟಿಯಾಗಿ ಮೇಲ್ಛಾವಣಿಗೆ ವೇಲ್ ಕಟ್ಟಿಕೊಂಡು ಆಟವಾಡುತ್ತಿದ್ದ. ಈ ಸಂದರ್ಭ ವೇಲ್ ಬಾಲಕನ ಕುತ್ತಿಗೆ ಬಿಗಿದುಕೊಂಡಿದ್ದು ಅದನ್ನು ಬಿಡಿಸಿಕೊಳ್ಳಲಾಗದೆ, ಸ್ಥಳದಲ್ಲಿ ಒದ್ದಾಡಿದ್ದಾನೆ ಎನ್ನಲಾಗಿದೆ. ಮಧ್ಯಾಹ್ನದ ವೇಳೆಗೆ ಬಾಲಕನ ತಂದೆ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಮಗನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ಹೊತ್ತಿಗಾಗಲೇ ಬಾಲಕನ ಪ್ರಾಣಪಕ್ಷಿ ಹಾರಿಹೋಗಿತ್ತು.

ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ವಿಷಯ ತಿಳಿದು ಸಾರ್ವಜನಿಕರು, ಸಂಬಂಧಿಕರು ಆಸ್ಪತ್ರೆಯ ಶವಾಗಾರದ ಮುಂದೆ ಜಮಾಯಿಸಿದ್ದರು.
ಪ್ರತಿಭಾವಂತನಾಗಿದ್ದ ಈ ಬಾಲಕ ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾಗಿ ಕುಟುಂಬದವರೊಂದಿಗೆ, ಮಡಿಕೇರಿಯ ಪೊಲೀಸ್ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದ. ಈ ಸಂದರ್ಭ ಸಮುದಾಯದ ಭವನಕ್ಕೆ ಆಗಮಿಸಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತನ್ನ ಗ್ರಾಮದಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದ ನೈಜ ಘಟನೆಗಳನ್ನು ಚಿತ್ರ ರೂಪದಲ್ಲಿ ಬಿಡಿಸಿ ಅದನ್ನು ಸಚಿವರಿಗೆ ವಿವರಿಸುವ ಮೂಲಕ ಕರಾಳತೆಯನ್ನು ಮನವರಿಕೆ ಮಾಡಿಕೊಟ್ಟಿದ್ದ.
ನಿರಾಶ್ರಿತರ ಕೇಂದ್ರದಲ್ಲಿ ಪಾದರಸದಂತೆ ಎಲ್ಲರೊಂದಿಗೂ ಬೆರೆಯುತ್ತಿದ್ದ ಬಾಲಕನ ಸಾವು ಮನೆ ಮಂದಿಯನ್ನಷ್ಟೇ ಅಲ್ಲ, ಗ್ರಾಮಸ್ಥರಲ್ಲಿ ಶೋಕದ ಮಡುವಿನಲ್ಲಿ ಮುಳುಗುವಂತೆ ಮಾಡಿದೆ.












Click it and Unblock the Notifications