ವೀರದೇವನಪುರದ ಬಳಿ ಭಾರೀ ಅವಘಡ ತಪ್ಪಿಸಿದ ಆಂಬುಲೆನ್ಸ್ ಚಾಲಕ, ಶುಶ್ರೂಷಕ
ಮೈಸೂರು, ನವೆಂಬರ್. 2೦: ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ವಾಹನ ರಸ್ತೆ ಮಧ್ಯೆಯೇ ಸುಟ್ಟು ಕರಕಲಾದ ಘಟನೆ ತಾಲೂಕಿನ ಬದನವಾಳು ಪೊಲೀಸ್ ಠಾಣಾ ವ್ಯಾಪ್ತಿಯ ವೀರದೇವನಪುರದ ಬಳಿ ನಡೆದಿದೆ.
ಚಾಮರಾಜನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಾಂತಪ್ಪ ಎಂಬ ರೋಗಿಯನ್ನು ಆಂಬುಲೆನ್ಸ್ ವಾಹನದಲ್ಲಿ ತುರ್ತು ಚಿಕಿತ್ಸೆಗಾಗಿ ಮೈಸೂರಿನ ಇಎಸ್ಐ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.
ಆಂಬುಲೆನ್ಸ್ ವೀರದೇವನಪುರ ಬಳಿ ಹೋಗುತ್ತಿದ್ದಾಗ ವಾಹನದಲ್ಲಿ ಹೊಗೆ ಬರಲಾರಂಭಿಸಿದೆ. ಇದನ್ನು ಚಾಲಕ ಮಹೇಶ್ ಹಾಗೂ ಶುಶ್ರೂಶಕ ಮೂರ್ತಿ ಅವರು ಗಮನಿಸಿದ್ದಾರೆ. ತಕ್ಷಣ ಜಾಗೃತರಾದ ಅವರು, ವಾಹನವನ್ನು ನಿಲ್ಲಿಸಿ ರೋಗಿ ಹಾಗೂ ಅವರ ಜೊತೆಯಲ್ಲಿದ್ದವರನ್ನು ಇಳಿಸಿಕೊಂಡು ಮುಂದಾಗಬಹುದಾದ ಭಾರೀ ಅವಘಡವನ್ನು ತಪ್ಪಿಸಿದ್ದಾರೆ.

ಈ ಘಟನೆಗೆ ವಾಹನದಲ್ಲಿನ ಬ್ಯಾಟರಿಯೇ ಕಾರಣ ಎನ್ನಲಾಗಿದೆ. ಬ್ಯಾಟರಿಯಲ್ಲಿ ಶಾರ್ಟ್ಸರ್ಕ್ಯೂಟ್ ನಿಂದಾಗಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿರಬಹುದು. ಸುದ್ದಿ ತಿಳಿದು ಸ್ಥಳಕ್ಕೆ ಬರುವ ವೇಳೆಗೆ ಆಂಬುಲೆನ್ಸ್ ಪೂರ್ತಿ ಸುಟ್ಟುಹೋಗಿತ್ತು ಎಂದು ಅಗ್ನಿ ಶಾಮಕದಳದ ಸಿಬ್ಬಂದಿ ಬಾಬು ತಿಳಿಸಿದ್ದಾರೆ.
ಈ ಕುರಿತು ನಂಜನಗೂಡು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications