ಮೈಸೂರು ಮೇಯರ್ ಚುನಾವಣೆ: ಮತ್ತೆ ಸಿದ್ದರಾಮಯ್ಯ ಮೇಲುಗೈ..!
ಮೈಸೂರು, ನವೆಂಬರ್. 17:ಬಹು ನಿರೀಕ್ಷಿತ ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಹಾಗೂ ಉಪಮೇಯರ್ ಆಗಿ ಶಫಿ ವಿಜಯ ಸಾಧಿಸಿದ್ದಾರೆ.
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪುಷ್ಪಲತಾ ಜಗನ್ನಾಥ್ 48 ಮತಗಳನ್ನು ಪಡೆದು ಮೇಯರ್ ಪಟ್ಟದ ಗದ್ದುಗೆಗೆ ಏರಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರಗೆ 24 ಮತಗಳು ಲಭಿಸಿವೆ.
ನೂತನ ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಗೆಲುವು ಸಾಧಿಸುತ್ತಿದ್ದಂತೆ ಕೌನ್ಸಿಲ್ ಸಭಾಂಗಣದಲ್ಲಿ ಎಲ್ಲಾ ಸದಸ್ಯರ ಬಳಿಗೆ ಹೋಗಿ ಕೈ ಮುಗಿದು ಧನ್ಯವಾದ ಅರ್ಪಿಸಿದರು. ಚುನಾವಣಾ ಅಧಿಕಾರಿ ವಿ.ಯಶ್ವಂತ್ ನೇತೃತ್ವದಲ್ಲಿ ಕೈ ಎತ್ತುವ ಮೂಲಕ ಚುನಾವಣೆ ನಡೆಯಿತು.
ಇನ್ನು ಬೆಳಗಿನಿಂದಲೂ ಕೇಸರಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಪುಷ್ಪಲತಾ ಜಗನ್ನಾಥ್ ಅವರಿಗೆ ಮತ ಚಲಾಯಿಸಿದ್ದು ವಿಶೇಷ. ಈಗಾಗಲೇ ಜೆಡಿಎಸ್ ತೊರೆದಿದ್ದ ಸಂದೇಶ್ ಈಗ ಜೆಡಿಎಸ್ ನಿಂದ ವಿಪ್ ಉಲ್ಲಂಘನೆಯಾಗುವ ಭೀತಿಯಿಂದಲೇ ಪುಷ್ಪಲತಾ ಜಗನ್ನಾಥ್ ಅವರಿಗೆ ಮತ ಹಾಕಿದ್ದಾರೆ ಎನ್ನಲಾಗಿದೆ.
ಇತ್ತ ಮೇಯರ್ ಹಾಗೂ ಉಪಮೇಯರ್ ಆಯ್ಕೆಯ ಮುನ್ನ ಮಹಾನಗರ ಪಾಲಿಕೆಯ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಸದಸ್ಯರು ಇಂದು ಪ್ರಮಾಣವಚನ ಸ್ವೀಕರಿಸಿದರು.ಪ್ರಾದೇಶಿಕ ಪ್ರಭಾರ ಆಯುಕ್ತ ಯಶ್ವಂತ್ ಹಾಗೂ ಅಪರ ಜಿಲ್ಲಾಧಿಕಾರಿ ಟಿ.ಯೋಗೀಶ್ , ಪಾಲಿಕೆ ಆಯುಕ್ತ ಜಗದೀಶ್ ನೇತೃತ್ವದಲ್ಲಿ ಚುನಾವಣೆ ನಡೆಯಿತು.

ಸಿದ್ದರಾಮಯ್ಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಇದೇ ವೇಳೆ ಪಾಲಿಕೆ ಸದಸ್ಯೆಯಾಗಿ ನೂತನವಾಗಿ ಆಯ್ಕೆಯಾಗಿರುವ ಶೋಭಾ ಸುನೀಲ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಮತ್ತೊಂದು ವಿಶೇಷವಾಗಿತ್ತು.

ಮಾತುಕತೆ ನಡೆಸಿದ ಮೂರೂ ಪಕ್ಷದ ಶಾಸಕರು
ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಮೂರೂ ಪಕ್ಷದ ಶಾಸಕರು ಮಾತುಕತೆ ನಡೆಸಿ ಕುಶಲೋಪರಿಯಲ್ಲಿ ತೊಡಗಿದ ಪ್ರಸಂಗ ಕಂಡು ಬಂತು. ಸಚಿವ ಜಿಟಿ ದೇವೇಗೌಡ , ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ , ಬಿಜೆಪಿ ಶಾಸಕರಾದ ರಾಮದಾಸ್, ನಾಗೇಂದ್ರ ಮಾತುಕತೆ ನಡೆಸುತ್ತಿದ್ದದು ಎಲ್ಲರನ್ನು ಅಚ್ಚರಿಗೊಳಿಸಿತು.

ತಟಸ್ಥವಾಗಿ ಉಳಿದ ಮಾ.ವಿ. ಪ್ರಸಾದ್
ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಮಾ.ವಿ. ಪ್ರಸಾದ್ ನಾನು ಯಾವ ಪಕ್ಷಕ್ಕೂ ಬೆಂಬಲ ಕೊಡುವುದಿಲ್ಲ ಎಂದು ತಿಳಿಸಿದರು. ಈ ಹಿಂದೆ ಬಿಜೆಪಿಗೆ ರಾಮ್ ಪ್ರಸಾದ್ ಬೆಂಬಲ ಕೊಡಲಾಗುತ್ತದೆ ಎನ್ನಲಾಗುತ್ತಿತ್ತು. ಆದರೆ "ಬಿಜೆಪಿ ನಾಯಕರಿಂದ ನನಗೆ ಯಾವುದೇ ರೀತಿಯ ಆಹ್ವಾನ ಬಂದಿಲ್ಲ. ಹೀಗಾಗಿ ನಾನು ತಟಸ್ಥನಾಗಿರಲು ನಿರ್ಧಾರ ಮಾಡಿದ್ದೇನೆ" ಎಂದು ಹೇಳಿ ಪಾಲಿಕೆ ಚುನಾವಣೆಯಲ್ಲಿ ಯಾರಿಗೂ ಬೆಂಬಲ ನೀಡದೆ ತಟಸ್ಥವಾಗಿ ಉಳಿದರು.

ವಾಜಪೇಯಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಆಟೋ ಚಿಹ್ನೆ ಮೂಲಕ ಗೆದ್ದಿದ್ದ ರಾಮ್ ಪ್ರಸಾದ್ ಮೈಸೂರು ಪೇಟ ಧರಿಸಿ ಆಟೋದಲ್ಲಿಯೇ ಪಾಲಿಕೆಗೆ ಬಂದರು. ಇವರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಮತ್ತೊಂದು ವಿಶೇಷವಾಗಿತ್ತು.












Click it and Unblock the Notifications