ಮತ್ತೆ ನಾಡಿಗೆ ಬಂದ ಒಂಟಿ ಸಲಗ, ಕಾಡಿಗೆ ಅಟ್ಟಲು ಹರಸಾಹಸ
ಮೈಸೂರು, ನವೆಂಬರ್ 2: ಎಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ. ನಾಡಿಗೆ ಬಂದ ಕಾಡಾನೆಗಳನ್ನು ಕಾಡಿಗೆ ಅಟ್ಟಿ ನೆಮ್ಮದಿಯುಸಿರು ಬಿಡುವ ವೇಳೆಗೆ ಮತ್ತೊಂದು ಕಡೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ರೈತರು ತಾವು ಬೆಳೆದ ಬೆಳೆಯನ್ನು ಮನೆಗೆ ಕೊಂಡೊಯ್ಯುವುದು ಹೇಗೆ ಎಂಬ ಆತಂಕದಲ್ಲಿದ್ದಾರೆ.
ಬೆಳ್ಳಂಬೆಳಿಗ್ಗೆ ಮೂಡಿಗೆರೆಯಲ್ಲಿ ರಾಜಾರೋಷವಾಗಿ ಓಡಾಡಿ ಆತಂಕ ತಂದ ಆನೆ
ಕಷ್ಟಪಟ್ಟು ಬೆಳೆದ ಬೆಳೆ ಫಸಲಿಗೆ ಬರುತ್ತಿದ್ದಂತೆಯೇ ಅರಣ್ಯದಿಂದ ಜಮೀನಿನತ್ತ ಬರುವ ಕಾಡಾನೆ ಹಿಂಡು ಎಲ್ಲವನ್ನು ತಿಂದು, ತುಳಿದು ನಾಶ ಮಾಡುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರದ್ದು. ಇದೀಗ ಹಂಪಾಪುರ-ಹೊಮ್ಮರಗಳ್ಳಿ ಗ್ರಾಮಗಳ ನಡುವೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಕಾಣಿಸಿಕೊಂಡಿರುವ ಒಂಟಿ ಸಲಗ ಜನರಲ್ಲಿ ಭೀತಿಯುಂಟು ಮಾಡಿದೆ. ಇದು ಎಲ್ಲೆಂದರಲ್ಲಿ ಅಲೆಯುತ್ತಿರುವುದರಿಂದ ಯಾವಾಗ ತಮ್ಮ ಗ್ರಾಮದತ್ತ ಬಂದು ಬಿಡುತ್ತೋ ಎಂಬ ಭಯ ಗ್ರಾಮಸ್ಥರದ್ದು.
ಮೈಸೂರು ಮಾನಂದವಾಡಿ ಮುಖ್ಯರಸ್ತೆಯಲ್ಲಿ ಈ ಸಲಗವನ್ನು ಕಂಡ ವಾಯುವಿಹಾರಿಗಳು ಅಕ್ಕಪಕ್ಕದ ಜನರಿಗೆ ಮತ್ತು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಇದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅಂಚಿನ ಚಿಕ್ಕದೇವಮ್ಮಬೆಟ್ಟದ ಕಡೆಯಿಂದ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಸಲಗ ನಾಡಿಗೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆಯೇ ಜನ ಸಾಲು ಸಾಲಾಗಿ ಅದನ್ನು ನೋಡಲು ಆಗಮಿಸುವುದರಿಂದಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅದನ್ನು ಕಾಡಿಗೆ ಅಟ್ಟುವುದು ಕಷ್ಟವಾಗಿ ಪರಿಣಮಿಸುತ್ತಿದೆ.
ಯಾವುದೇ ರೀತಿಯಲ್ಲಿ ಭಯಪಡದ ಒಂಟಿ ಸಲಗ ದಾಸನಕೆರೆ, ಕಪಿಲಾ ನದಿಯಲ್ಲಿ ನೀರಾಟವಾಡುತ್ತಾ ರೈತರ ಜಮೀನಿಗೆ ನುಗ್ಗಿ ಬಾಳೆ, ಕಬ್ಬು, ತೊಗರಿ ಬೆಳೆಯನ್ನು ತಿಂದು ತುಳಿದು ನಾಶಪಡಿಸುತ್ತಾ ಸಾಗುತ್ತಿದೆ. ಇನ್ನು ಹಂಪಾಪುರ ಗ್ರಾಮದ ಬಳಿಯ ನಿಂಗಯ್ಯ ಎಂಬುವರ ಜಮೀನಿಗೆ ನುಗ್ಗಿದ ಇದು ಅವರ ಜಮೀನಿನಲ್ಲಿದ್ದ ಬೆಳೆಯನ್ನು ತಿಂದು ತುಳಿದು ನಾಶ ಮಾಡಿದೆ. ಅರಣ್ಯಾಧಿಕಾರಿಗಳು ಕಾಡಿಗೆ ಅಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ.