ಮಳೆ ನಿಂತು ಹೋದ ಮೇಲೆ ಕೊಚ್ಚೆಮಯವಾದ ಪ್ರದೇಶಗಳು
ಮೈಸೂರು, ಆಗಸ್ಟ್ 11 : ಕಪಿಲೆಯ ಆರ್ಭಟಕ್ಕೆ ತುತ್ತಾದ ನಂಜನಗೂಡು ಹಾಗೂ ಪಿರಿಯಾಪಟ್ಟಣ, ಹುಣಸೂರು ಸುತ್ತಮುತ್ತಲಿನ ಗ್ರಾಮಗಳು ಭಾನುವಾರ ಸ್ವಲ್ಪ ಚೇತರಿಸಿಕೊಂಡಿವೆ. ನದಿಯಲ್ಲಿ ನೀರಿನ ಪ್ರಮಾಣ ತುಸು ಇಳಿಕೆಯಾಗಿದ್ದು, ಗ್ರಾಮಗಳಿಗೆ ನುಗ್ಗಿದ್ದ ನೀರು ನಿಧಾನವಾಗಿ ಇಳಿಯತೊಡಗಿದೆ. ಈ ಭಾಗದಲ್ಲಿ ಜಲಾವೃತಗೊಂಡಿದ್ದ ನೂರಾರು ಎಕರೆ ಪ್ರದೇಶದ ಜೋಳ, ಕಬ್ಬು, ಶೇಂಗಾ ಬೆಳೆಗಳ ಮೇಲ್ಭಾಗ ಮತ್ತೆ ನೀರಿನ ಮೇಲೆ ಕಾಣಿಸಿಕೊಳ್ಳುತ್ತಿವೆ.
ಕರಾವಳಿಯಲ್ಲಿ ಅಬ್ಬರಿಸುತ್ತಿದೆ ಮಳೆ; ಅಪಾಯದಲ್ಲಿದ್ದ 85 ಜನರ ರಕ್ಷಣೆ
ಮೂರು ದಿನಗಳಿಂದ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ತಮ್ಮ ಮೂಲ ಗ್ರಾಮಗಳಿಗೆ ಹೋಗಲು ಹಾತೊರೆಯುತ್ತಿದ್ದು, ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ನದಿಯಲ್ಲಿ ಸಂಪೂರ್ಣ ನೀರು ಇಳಿದ ನಂತರವೇ ಗ್ರಾಮಕ್ಕೆ ಮರಳಲು ಅವಕಾಶ ನೀಡುವುದಾಗಿ ಹೇಳಿದೆ. ಪ್ರವಾಹ ತಗ್ಗಿದ ನಂತರ ಗ್ರಾಮಗಳು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇಲ್ಲಿನ ನಿವಾಸಿಗಳು ಎರಡು ದಿನಗಳ ಹಿಂದಷ್ಟೇ ಮನೆಯ ಬಾಗಿಲಿಗೇ ಸಮುದ್ರ ಬಂದ ಸ್ಥಿತಿಯನ್ನು ಎದುರಿಸಿದ್ದರು. ಇದೀಗ ರಸ್ತೆಯ ಮೇಲೆ ಕಾಲಿಡಲೂ ಆಗದಷ್ಟು ಕೆಸರು ಆವರಿಸಿಕೊಂಡಿದೆ.
ಕೆಲವೆಡೆ ಮನೆಗಳ ಒಳಗೆ ಕೆಸರು ಮಿಶ್ರಿತ ನೀರು ನುಗ್ಗಿದ್ದು, ಮನೆಗಳನ್ನು ಸ್ವಚ್ಛಗೊಳಿಸಿ, ಮೊದಲಿನ ಸ್ಥಿತಿಗೆ ತರಲು ತಿಂಗಳೇ ಬೇಕು ಎನ್ನುತ್ತಿದ್ದಾರೆ ಮಹಿಳೆಯರು. ಕೆಸರಿನ ದುರ್ನಾತದಿಂದಾಗಿ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಇನ್ನು ಕುಡಿಯಲು ಶುದ್ಧ ನೀರಿನ ಅಭಾವವೂ ಕಾಣಿಸಿಕೊಂಡಿದ್ದು, ನೆರೆ ಸಂತ್ರಸ್ತರಿಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಹೆಚ್ಚಿದೆ.
ಮಹಾ ಮಳೆಗೆ ಚಿಕ್ಕಮಗಳೂರಿನಲ್ಲಿ ಮುಂದುವರಿದ ಸಾವಿನ ಸರಣಿ; ಗುಡ್ಡ ಕುಸಿತ, ಸಂಪರ್ಕ ಕಡಿತ
ಹಲವು ಗ್ರಾಮಗಳಲ್ಲಿ ಬೆಳೆ ಸಂಪೂರ್ಣ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಡುಮಟ್ಟಕ್ಕೆ ಬೆಳೆದಿದ್ದ ಬೆಳೆ ಮಾತ್ರ ಅಲ್ಲಲ್ಲಿ ಉಳಿದಿದೆ. ಆದರೆ ಇಡೀ ಬೆಳೆ, ಜಮೀನು ತುಂಬಾ ಕೆಸರು ಆವರಿಸಿಕೊಂಡಿದೆ. ಈ ಬೆಳೆಯಿಂದ ಇನ್ನೇನೂ ಪ್ರಯೋಜನವಿಲ್ಲ. ಇದರಲ್ಲಿ ಕಾಳು ಕಟ್ಟುವುದಿಲ್ಲ, ಎಲೆಯನ್ನು ಜಾನುವಾರು ಕೂಡ ತಿನ್ನುವುದಿಲ್ಲ. ಪ್ರವಾಹದ ನೀರು ನುಗ್ಗಿದ ಜಮೀನಿನಲ್ಲಿ ಹೊಸ ಬೆಳೆ ಬೆಳೆಯಬೇಕಾದರೆ ಕನಿಷ್ಠ ಎರಡು ವರ್ಷವಾದರೂ ಬೇಕು. ನಮ್ಮ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ ಎಂದು ರೈತ ಮಂಜೇಗೌಡ ಕಣ್ಣೀರು ಸುರಿಸಿದರು.
ಪ್ರವಾಹ ಇಳಿದ ಬೆನ್ನಲ್ಲೇ, ನಂಜನಗೂಡು ಪ್ರವಾಸಿ ತಾಣವಾಗಿ ಬದಲಾಗಿದೆ. ಇಲ್ಲಿ ಮಲಪ್ರಭಾ ನದಿ ಸೃಷ್ಟಿಸಿರುವ ಪ್ರವಾಹದ ಭೀಕರತೆಯನ್ನು ನೋಡಲು ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಮುಗಿ ಬೀಳುತ್ತಿದ್ದಾರೆ. ಇಲ್ಲಿಗೆ ಬರುವ ಜನರು, ನದಿಗಿಳಿದು ಅಪಾಯವನ್ನೂ ಲೆಕ್ಕಿಸದೆ ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದಾರೆ. ಇಲ್ಲಿ ಭದ್ರತೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎನ್ನುತ್ತಾರೆ ಸಾರ್ವಜನಿಕರು.
ವರುಣಾ ಸಮೀಪದ ನಂಜನಗೂಡು ತಾಲ್ಲೂಕಿನ ಬೊಕ್ಕಳ್ಳಿಯಲ್ಲಿ ಕಪಿಲಾ ನದಿ ಪ್ರವಾಹ ಯಥಾಸ್ಥಿತಿಯಲ್ಲಿದೆ. ಗ್ರಾಮದಲ್ಲಿ ಸ್ಥಾಪಿಸಿರುವ ಎರಡು ಪರಿಹಾರ ಕೇಂದ್ರದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಉಪ ತಹಶೀಲ್ದಾರ್ ಬಾಲಸುಬ್ರಮಣ್ಯ ತಿಳಿಸಿದ್ದಾರೆ. ಸುತ್ತೂರು ಕಪಿಲಾ ನದಿಯಲ್ಲಿ ಪ್ರವಾಹ ಕೂಡ ಇಳಿಮುಖವಾಗಿಲ್ಲ. ಸೇತುವೆ ಮೇಲೆ 3 ಅಡಿಗಳಷ್ಟು ನೀರು ಹರಿಯುತ್ತಿದೆ. ಬಸ್ ನಿಲ್ದಾಣ, ಕೆಲವು ತೆಂಗಿನ ತೋಟಗಳು ಇನ್ನೂ ಮುಳುಗಿವೆ. ಹೀಗಾಗಿ ಸೇತುವೆ ಮೇಲಿನ ಸಂಚಾರ ಇನ್ನೂ ಆರಂಭವಾಗಿಲ್ಲ.