ಶಾಸಕ ಸಾ.ರಾ.ಮಹೇಶ್ ವಿರುದ್ಧ ಅಶ್ಲೀಲ ಸ್ಟೇಟಸ್ ಹಾಕಿದವನ ಮೇಲೆ ದೂರು
ಮೈಸೂರು, ಸೆಪ್ಟೆಂಬರ್ 11: ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಕುರಿತು ಫೇಸ್ಬುಕ್ನಲ್ಲಿ ಅಶ್ಲೀಲ ಪದ ಬಳಸಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪಿಯ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೇರ್ಯ ಬಳಿಯ ಕಾವಲ್ಹೊಸೂರು ಗ್ರಾಮದ ಜವರೇಗೌಡ ಎಂಬುವರ ಪುತ್ರ ಮಹದೇವ್ ಎಂಬಾತನೇ ಶಾಸಕ ಸಾ.ರಾ.ಮಹೇಶ್ ವಿರುದ್ಧ ಅಶ್ಲೀಲ ಪದ ಪ್ರಯೋಗಿಸಿ ತನ್ನ ಫೇಸ್ ಬುಕ್ನಲ್ಲಿ ಸ್ಟೇಟಸ್ ಹಾಕಿದವನಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಈತ ಪರಾರಿಯಾಗಿದ್ದಾನೆ.

ಈ ಸ್ಟೇಟಸ್ ಈ ವ್ಯಾಪ್ತಿಯಲ್ಲಿ ಸಂಚಲನವನ್ನುಂಟು ಮಾಡಿತ್ತು. ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಮಹದೇವ್ ತನ್ನ ಫೇಸ್ಬುಕ್ ಆಕೌಂಟ್ನಲ್ಲಿ ಶಾಸಕ ಸಾ.ರಾ.ಮಹೇಶ್ ಕಂಡ್ರೆ ನನಗೆ ಆಗೋದಿಲ್ಲ ಮತ್ತು ಅಶ್ಲೀಲ ಪದವನ್ನು ಬಳಸಿ ಸ್ಟೇಟಸ್ ಹಾಕಿ ಶಾಸಕರ ವಿರುದ್ಧ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದನು.
ಇದನ್ನು ನೋಡಿದ ಶಾಸಕರ ಅಭಿಮಾನಿಗಳು ಗರಂ ಆಗಿದ್ದು, ಈ ಸಂಬಂದ ಜೆಡಿಎಸ್ ಯುವ ಮುಖಂಡ ಗುಳುವಿನ ಅತ್ತಿಗುಪ್ಪೆ ಗ್ರಾಮದ ಅನೀಫ್ಗೌಡ ಅವರು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಮಹದೇವನ ವಿರುದ್ಧ ದೂರು ದಾಖಲಿಸಿದ್ದಾರೆ. ಇದೆಲ್ಲ ಆಗುತ್ತಿದ್ದಂತೆ ಆರೋಪಿ ಮಹದೇವ್ ತಲೆಮರೆಸಿ ಕೊಂಡಿದ್ದಾನೆ ಎನ್ನಲಾಗಿದೆ.












Click it and Unblock the Notifications