ಎಚ್.ಡಿ.ಕೋಟೆ: ಜನರ ನಿದ್ದೆಗೆಡಿಸಿದ್ದ ಹುಲಿರಾಯ ಸೆರೆ
ಎಚ್.ಡಿ.ಕೋಟೆ, ಮಾರ್ಚ್. 23 : ಇಲ್ಲಿನ ಹಲವು ಗ್ರಾಮದ ಜನರಲ್ಲಿ ತಲ್ಲಣ ಮೂಡಿಸಿದ್ದ ಹುಲಿಯನ್ನು ಅರಣ್ಯಾಧಿಕಾರಿಗಳು ಸತತ ಮೂರು ದಿನಗಳ ಕಾರ್ಯಾಚರಣೆಯ ನಂತರ ಬುಧವಾರ ಸೆರೆ ಹಿಡಿದಿದ್ದಾರೆ.
ತಾಲ್ಲೂಕಿನ ನಾಗನಹಳ್ಳಿ, ಹೆಗ್ಗಡಾಪುರ, ಕಟ್ಟೇಮನುಗನಹಳ್ಳಿ ಗ್ರಾಮದ ವ್ಯಾಪ್ತಿಯ ರೈತರ ಜಮೀನಿನಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಎರಡು ವರ್ಷದ ಗಂಡು ಹುಲಿ ಕಾಣಿಸಿಕೊಂಡಿತ್ತು. ಇದರ ಸೆರೆಗೆ ದಸರಾ ಆನೆಗಳಾದ 'ಅಭಿಮನ್ಯು' ಹಾಗೂ 'ಕೃಷ್ಣ'ರನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿದರೂ ಸಿಕ್ಕಿರಲಿಲ್ಲ. [ಪ್ರಾಣಿಗಳು ಮನುಷ್ಯರನ್ನು ತಿನ್ನುವುದೇಕೆ? ಜಂಗಲ್ ಡೈರಿಯ ಪುಟಗಳು]
ಬುಧವಾರ ಕಟ್ಟೇಮನುಗನಹಳ್ಳಿ ಗ್ರಾಮದ ಚೆಲುವಯ್ಯ ಎಂಬುವವರ ಜಮೀನಿನ ಸಮೀಪದ ತಾರಕ ನದಿ ಬಳಿ ಮೇಯುತ್ತಿದ್ದ ಮೇಕೆಯನ್ನು ಬೇಟೆಯಾಡಿ ತಿನ್ನಲು ಹುಲಿ ಮುಂದಾದಾಗ ಸಮೀಪದಲ್ಲೇ ಇದ್ದ ಗ್ರಾಮಸ್ಥರು ಶಬ್ದ ಮಾಡುವ ಮೂಲಕ ಮೇಕೆಯನ್ನು ರಕ್ಷಿಸಿದರು. ನಂತರ, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಬಂದ ಡಿಸಿಎಫ್ ಡಾ.ಕರಿಕಾಳನ್, ಆರ್ಎಫ್ಒ ಮಧು, ಡಾ.ಉಮಾಶಂಕರ್, ನಾಗರಾಜು, ಮದನ್ ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿ ಹುಲಿಯನ್ನು ಸೆರೆ ಹಿಡಿದರು.