ನರಭಕ್ಷಕ ಹುಲಿಗೆ ಹೆದರಿದ ನಂಜನಗೂಡು ಗ್ರಾಮಸ್ಥರು
ಮೈಸೂರು, ಅಕ್ಟೋಬರ್, 26: ಕೆಲವು ದಿನಗಳಿಂದ ಹುಲಿಯ ಉಪಟಳ ಮುಂದುವರೆದಿದ್ದು, ನಂಜನಗೂಡು ತಾಲೂಕಿನ ಸುತ್ತಮುತ್ತಲ ಗ್ರಾಮದ ಜನರು ಸದಾ ಭಯದಲ್ಲಿಯೇ ದಿನಕಳೆಯುತ್ತಿದ್ದಾರೆ. ಅಲ್ಲದೇ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಕಟಾವು ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಹೆಡಿಯಾಲ ಸಮೀಪವಿರುವ ಹಾಒಡೆಯನಪುರ ಗ್ರಾಮದ ಕೊಸೇಗೌಡ ಎಂಬುವರು ಅಪ್ಪಾಜಿಕೊರೆ ಸಮೀಪದ ತಮ್ಮ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುವ ಸಂದರ್ಭದಲ್ಲಿ ಹುಲಿ ಕಾಣಿಸಿಕೊಂಡಿದೆ. ನರಭಕ್ಷಕ ಹುಲಿ ಕಂಡು ಗಾಬರಿಗೊಂಡ ಜಾನುವಾರುಗಳು ಏಕಾಏಕಿ ಓಡಿಬಂದ ಪರಿಣಾಮ ಕೊಸೇಗೌಡ ಜಮೀನಿನ ಸುತ್ತ ಕಣ್ಣು ಹಾಯಿಸಿದ್ದಾರೆ. ಆಗ ಹುಲಿಯೊಂದು ಕಾಡಿನತ್ತ ತೆರಳುತ್ತಿರುವುದು ಕಂಡು ಬಂದಿದೆ.[ಮೈಸೂರು : ನಂಜನಗೂಡಿನಲ್ಲಿ ಹುಲಿ ದಾಳಿಗೆ ರೈತ ಬಲಿ]
ಹುಲಿಯ ಹೆದರಿಕೆಯಿಂದ ಕಂಗಾಲಾದ ಗ್ರಾಮಸ್ಥರಿಗೆ ಪ್ರತಿಕ್ರಿಯಿಸಿರುವ ಹೆಡಿಯಾಲ ಅರಣ್ಯ ಇಲಾಖೆಯ ಎಸಿಎಫ್ ವೆಂಕಟೇಶ್ ಅವರು,'ನಾವು ಈಗಾಗಲೇ ಮೂರು ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಮಾಡುತ್ತಿದ್ದೇವೆ. ಹೆಡಿಯಾಲ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಕೇವಲ 15 ಹುಲಿಗಳು ವಾಸ ಮಾಡುತ್ತಿವೆ. ಒಟ್ಟಾರೆ 35ಕ್ಕೂ ಹೆಚ್ಚು ಹುಲಿಗಳು ಇದ್ದು, ಕೆಲವು ವಯಸ್ಸಾದ ಹುಲಿಗಳು ಕಾಡಂಚಿನಲ್ಲಿ ಅಡ್ಡಾಡುತ್ತಿರುತ್ತವೆ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು' ಎಂದು ಹೇಳಿದ್ದಾರೆ.[ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]
ಹುಲಿಗೆ ರೈತ ಬಲಿ :
ಕಳೆದ ಕೆಲವು ದಿನಗಳ ಹಿಂದೆ ಹೆಡಿಯಾಲ ಗ್ರಾಮದ ನಾಗರಾಜು ಎಂಬ ರೈತನನ್ನು ಹುಲಿ ಬಲಿ ತೆಗೆದುಕೊಂಡಿತ್ತು. ರೈತ ನಾಗರಾಜು ಹುಲಿಯ ಬಾಯಿಗೆ ಬಲಿಯಾದ ರೈತ. ಇವರು ಶಿವಣ್ಣ ಮತ್ತು ವೆಂಕಟೇಶ ಎಂಬುವರೊಂದಿಗೆ ದನ ಮೇಯಿಸುತ್ತಿದ್ದ ಸಂದರ್ಭದಲ್ಲಿ ಹುಲಿ ದಾಳಿ ಮಾಡಿತ್ತು.
ಹುಲಿಯ ಬಾಯಿಯಿಂದ ನಾಗರಾಜನನ್ನು ಬಿಡಿಸಲು ಆತನ ಸ್ನೇಹಿತರು ಸಾಕಷ್ಟು ಪ್ರಯತ್ನ ಪಟ್ಟರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟರಲ್ಲೇ ಆತ ಮೃತಪಟ್ಟಿದ್ದರು. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಹುಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೃತ ರೈತರಿಗೆ 5 ಲಕ್ಷ ಪರಿಹಾರ ನೀಡಿದ್ದರು.