ಗುಂಡ್ಲುಪೇಟೆಯಲ್ಲಿ ಹಂದಿ ಕೊಂದಿದ್ದು ಹುಲಿಯೋ, ಚಿರತೆಯೋ?
ಮೈಸೂರು, ಜ. 24: ಗುಂಡ್ಲುಪೇಟೆ ಸಮೀಪದ ಜಮೀನೊಂದರಲ್ಲಿ ಪತ್ತೆಯಾಗಿರುವ ಕಾಡುಹಂದಿಯೊಂದರ ಅರೆಬರೆ ತಿಂದುಳಿದ ಕಳೇಬರ ಈಗ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.
ಈಚೆಗಷ್ಟೇ ಚಿಕ್ಕಮಗಳೂರು ಹಾಗೂ ಬೆಳಗಾವಿಯಲ್ಲಿ ಇಬ್ಬರು ಮಹಿಳೆಯರನ್ನು ಹತ್ಯೆಗೈದ ನರಭಕ್ಷಕ ಹುಲಿ ರಾಜ್ಯಾದ್ಯಂತ ಭೀತಿ ಸೃಷ್ಟಿಸಿತ್ತು. ಈ ಆತಂಕ ಇನ್ನೂ ಜನರಿಂದ ಮರೆಯಾಗಿಲ್ಲ. ಆದ್ದರಿಂದ ಗುಂಡ್ಲುಪೇಟೆ ಸಮೀಪ ಕಂಡುಬಂದಿರುವ ಕಾಡುಹಂದಿಯೊಂದರ ಕಳೇಬರ ಸ್ಥಳೀಯರಲ್ಲಿ ಮತ್ತೆ ವ್ಯಾಘ್ರ ಭೀತಿ ಮೂಡಿಸಿದೆ. [ಕುದುರೆಮುಖ ಹುಲಿ ಸಂರಕ್ಷಿತ ಪ್ರದೇಶವಲ್ಲ]
ಹತ್ತಿರದ ಗ್ರಾಮಸ್ಥರು ಹೇಳುವ ಪ್ರಕಾರ ಶುಕ್ರವಾರ ಮುಂಜೆ ಕ್ರೂರ ಪ್ರಾಣಿಯೊಂದರ ಘರ್ಜನೆ ಜೊತೆಗೆ ಕಾಡುಹಂದಿಯ ಚೀರಾಟವೂ ಕೇಳಿಸಿದೆ. ಬೆಳಗ್ಗೆ ನಿಂಗನಾಯ್ಕ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಗಿಡಗಳ ನಡುವೆ ಕಾಡುಹಂದಿಯ ಅರೆಬರೆ ತಿಂದ ಕಳೇಬರ ಪತ್ತೆಯಾಗಿದೆ. [ಬೆಳಗಾವಿಯಲ್ಲಿ ಮತ್ತೆ ಹುಲಿಗೆ ಹಸು ಬಲಿ]

ಇದು ಹುಲಿಯದ್ದೇ ಕೆಲಸ ಎಂದು ನಂಬಿರುವ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಡಿಸೆಂಬರ್ 30ರಂದು ಕೂಡ ಕಾಡುಹಂದಿಯೊಂದು ಬೇಟೆಗೆ ಬಲಿಯಾಗಿತ್ತು. ಆಗ ಎಚ್ಚೆತ್ತಿದ್ದ ಅರಣ್ಯ ಇಲಾಖೆ ಬೋನಿಟ್ಟಿದ್ದರೂ ಕ್ರೂರ ಪ್ರಾಣಿ ಅತ್ತ ಸುಳಿದಿರಲಿಲ್ಲ. [ಹುಲಿ ಸಂಖ್ಯೆಯಲ್ಲಿ ಕರ್ನಾಟಕವೇ ನಂ. 1]
ಹುಲಿಯಲ್ಲ ಚಿರತೆ : ಕಾಡುಹಂದಿಯನ್ನು ಬೇಟೆಯಾಡಿರುವುದು ಹುಲಿ ಎಂಬ ಊಹೆಯನ್ನು ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯಾಧಿಕಾರಿ ಕೆ. ಪರಮೇಶ್ ಅಲ್ಲಗಳೆದಿದ್ದಾರೆ. ಕಾಡುಹಂದಿಯನ್ನು ಬೇಟೆಯಾಡಿದ್ದು ಹುಲಿಯಲ್ಲ, ಚಿರತೆ. ಸುತ್ತಲಿನ ಹೆಜ್ಜೆ ಗುರುತು ಚಿರತೆಗೆ ಹೋಲುತ್ತದೆ ಎಂದು ತಿಳಿಸಿದ್ದಾರೆ. [ತಾಯಿ ಹಾಲು ಸಿಗದೆ ಹುಲಿ ಮರಿಗಳ ಸಾವು]
ಅದನ್ನು ಹಿಡಿಯಲು ಬೋನು ಇರಿಸಲಾಗಿದೆ. ಅದರೊಳಗೆ ಬೀದಿ ನಾಯಿಯನ್ನು ಕೂಡಿ ಹಾಕಲಾಗಿದೆ ಎಂದು ಕೆ. ಪರಮೇಶ್ ತಿಳಿಸಿದ್ದಾರೆ.












Click it and Unblock the Notifications