ಇದೆಂಥಾ ನ್ಯಾಯ: ಪ್ರಿಯಕರನ ಜೊತೆ ಪತ್ನಿ ಎಸ್ಕೇಪ್ ಆಗಿದ್ದಕ್ಕೆ ಪತಿಗೆ 2 ವರ್ಷ ಜೈಲು ಶಿಕ್ಷೆ: ನಡೆದಿದ್ದೇನು?
ಮೈಸೂರು, ಏಪ್ರಿಲ್ 04: ಕೆಲವೊಮ್ಮೆ ಯಾರದೋ ಯಡವಟ್ಟಿಗೆ ಯಾರಿಗೋ ಶಿಕ್ಷೆಯಾಗುತ್ತದೆ. ಯಾರದೋ ತಪ್ಪಿಗೆ ಯಾರೋ ಕಂಬಿ ಹಿಂದೆ ನಿಲ್ಲುವಂತಾಗುತ್ತದೆ. ಇದೀಗ ಮೈಸೂರಿನಲ್ಲಿಯೂ ಇಂತಹದ್ದೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯನ್ನು ಕೊಲೆಗೈದ ಆರೋಪದಡಿ ಪತಿಯನ್ನು ಪೊಲೀಸರು ಜೈಲಿಗೆ ಕಳಿಸಿ ಆತ ಎರಡು ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸಿ ಬಂದಿದ್ದಾನೆ. ಆದರೆ ಈಗ ಪತ್ನಿ ಏಕಾಏಕಿ ಪ್ರಿಯಕರನೊಂದಿಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ್ದು, ಪೊಲೀಸರ ಕಾರ್ಯವೈಖರಿಯನ್ನು ಜನ ಪ್ರಶ್ನೆ ಮಾಡುವಂತಾಗಿದೆ.
ಇದು ಪೊಲೀಸರು ಮಾಡಿದ ಎಡವಟ್ಟು ಎಂಬುದನ್ನು ಯಾರು ಬೇಕಾದರೂ ಹೇಳಬಹುದಾಗಿದ್ದು, ವ್ಯಕ್ತಿಯೊಬ್ಬ ತಾನು ಮಾಡದ ತಪ್ಪಿಗೆ ಹೆಂಡತಿ ಕೊಂದ ಹಂತಕನ ಪಟ್ಟಕಟ್ಟಿಗೊಂಡು ಜೈಲು ಸೇರಿದ್ದಲ್ಲದೇ, ಆತನ ಸಂಪೂರ್ಣ ಕುಟುಂಬ ಸಮಾಜದ ಮುಂದೆ ತಲೆ ತಗ್ಗಿಸುವಂತಹ ಸ್ಥಿತಿಗೆ ತಳ್ಳಿದ ಪೊಲೀಸರು ಮಾಡಿರುವ ತಪ್ಪಿಗೆ ಶಿಕ್ಷೆ ಏನು ಎನ್ನುವುದೇ ಇಲ್ಲಿ ಮುಖ್ಯವಾಗಿದೆ.

ಇಲ್ಲಿ ತಪ್ಪೇ ಮಾಡದ ವ್ಯಕ್ತಿಯೋರ್ವ ಪತ್ನಿ ಹತ್ಯೆ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಹಾಗೆಯೇ ಮೃತಪಟ್ಟಿದ್ದ ಮಹಿಳೆ ಮಡಿಕೇರಿಯಲ್ಲಿ ಪ್ರತ್ಯಕ್ಷವಾಗಿರುವುದು ಇಡೀ ಪ್ರಕರಣವನ್ನೇ ಬುಡಮೇಲು ಮಾಡಿದೆ. ಇದರಿಂದ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ.
ಬದುಕಿರುವ ಮಹಿಳೆಗೆ ಮೃತಪಟ್ಟಿರುವುದಾಗಿ ಪ್ರಕರಣ ದಾಖಲು ಮಾಡಿ ನಿರಪರಾಧಿ ಗಂಡನಿಗೆ ಜೈಲು ಶಿಕ್ಷೆ ಕೊಡಿಸಿ ತನಿಖೆಯ ಹಾದಿ ತಪ್ಪಿಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿ ತನಿಖೆ ಹಾದಿ ತಪ್ಪಿಸಿದ ಪೊಲೀಸರು ಇದೀಗ ಆರೋಪಿಗಳ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಯಾವುದೋ ಅಸ್ಥಿಪಂಜರಕ್ಕೆ ಕೊಲೆ ಕೇಸಿನ ಪಟ್ಟ ಕಟ್ಟಿ ಜೈಲಿಗೆ ಸೇರಿಸಿದ ಪೊಲೀಸರು ಇದೀಗ ಆ ಅಸ್ಥಿಪಂಜರ ಯಾರದ್ದು ಎಂಬುದರ ತನಿಖೆ ನಡೆಸುವುದು ಅನಿವಾರ್ಯವಾಗಿದೆ.
ಸತ್ತವಳು ಪ್ರಿಯಕರನ ಜೊತೆ ಕಾಣಿಸಿಕೊಂಡು ಪೊಲೀಸ್ ಇಲಾಖೆಗೆ ಮಾತ್ರವಲ್ಲದೇ ನ್ಯಾಯಾಲಯಕ್ಕೂ ಶಾಕ್ ನೀಡಿದ್ದಾಳೆ. ಇತ್ತ ತಪ್ಪೇ ಮಾಡದೇ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ವ್ಯಕ್ತಿ ಅಸಹಾಯಕನಾಗಿದ್ದಾನೆ. ಇಷ್ಟಕ್ಕೂ ಆಗಿದ್ದೇನು..? ಮೃತಪಟ್ಟಿದ್ಯಾರು? ಕಾಣೆಯಾಗಿದ್ಯಾರು? ಜೈಲು ಸೇರಿದ್ಯಾರು? ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಪ್ರಕರಣದ ಹಿನ್ನೆಲೆ ಏನು?
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನಹಳ್ಳಿ ಗ್ರಾಮದ ನಿವಾಸಿ ಸುರೇಶ್ ಅವರ ಪತ್ನಿ ಮಲ್ಲಿಗೆ ನಾಪತ್ತೆಯಾಗಿದ್ದರು. ಈ ಸಂಬಂಧ ಸುರೇಶ್ ಕುಶಾಲನಗರ ಪೊಲೀಸ್ ಠಾಣೆಗೆ 2020ರ ನವೆಂಬರ್ನಲ್ಲಿ ದೂರು ನೀಡಿರುತ್ತಾರೆ. ಇದೇ ವೇಳೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಪ್ರಕರಣ ದಾಖಲಾಗಿತ್ತು.
ಬೆಟ್ಟದಪುರ ಪೊಲೀಸರು ಮಹಿಳೆ ಶವದ ವಾರಸುದಾರರ ಪತ್ತೆಗೆ ಇಳಿದಾಗ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆಯಾಗಿರುವುದು ತಿಳಿದು, ಮೃತ ಮಹಿಳೆ ಮಲ್ಲಿಗೆ ಎಂದು ಭಾವಿಸಿ ಆತನ ಪತಿ ಸುರೇಶ್ನನ್ನು ವಶಕ್ಕೆ ಪಡೆದು, 2021ರಲ್ಲಿ ಪ್ರಕರಣ ದಾಖಲಿಸಿಕೊಂಡು ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಹತ್ಯೆ ಮಾಡಿದ್ದಾನೆ ಎಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು ಸುರೇಶ್ಗೆ ಕಾರಾಗೃಹ ಶಿಕ್ಷೆ ವಿಧಿಸಿತ್ತು.
ಸತ್ತವಳು ಬದುಕಿ ಬಂದಿದ್ದೇಗೆ?
ಎರಡು ವರ್ಷಗಳ ಶಿಕ್ಷೆ ಅನುಭವಿಸಿದ್ದ ಸುರೇಶ್ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಪ್ರಕರಣ ಸಂಬಂಧ ಮೃತಪಟ್ಟಿದ್ದಾಳೆ ಎನ್ನಲಾಗಿದ್ದ ಮಲ್ಲಿಗೆ ಇದೇ ಏಪ್ರಿಲ್1ರಂದು ಮಡಿಕೇರಿ ಹೋಟೆಲ್ ಒಂದರಲ್ಲಿ ತನ್ನ ಪ್ರಿಯಕರನೊಂದಿಗೆ ಇರುವುದು ತಿಳಿದುಬಂದಿದೆ. ಈ ಸಂಬಂಧ ಆರೋಪಿ ಸುರೇಶ್ ಕೊಡಗು ಪೊಲೀಸರಿಗೆ ಮಾಹಿತಿ ನೀಡಿದ್ದು, ಎಚ್ಚೆತ್ತ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಕುಶಾಲನಗರ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ.
ಈ ನಡುವೆ ಆರೋಪಿ ಪರ ವಕೀಲರು ಈ ಎಲ್ಲಾ ಬೆಳವಣಿಗೆಯನ್ನು ನ್ಯಾಯಾಲಯದ ಗಮಕ್ಕೆ ತಂದಿದ್ದರು. ಈ ಸಂಬಂಧ ಮೈಸೂರಿನ ನ್ಯಾಯಾಲಯ, ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕುಶಾಲನಗರ ಪೊಲೀಸರು ಹಾಗೂ ಅವರ ವಶದಲ್ಲಿದ್ದ ಮಲ್ಲಿಗೆಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿತ್ತು.
ಅದರಂತೆ ಗುರುವಾರ ಮೈಸೂರಿನ 5ನೇ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ನಾಪತ್ತೆಯಾಗಿದ್ದ ಮಹಿಳೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ಹಲವರು ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರ ವಿಚಾರಣೆ ನಡೆಸಿದ ನ್ಯಾಯಾಲಯ, ಏಪ್ರಿಲ್ 17ರ ಒಳಗೆ ಪ್ರಕರಣದ ಸಂಪೂರ್ಣ ಮಾಹಿತಿ ನೀಡುವಂತೆ ಪೊಲೀಸರಿಗೆ ಆದೇಶಿಸಿದೆ.
ಬೆಟ್ಟದಪುರದಲ್ಲಿ ಶವವಾಗಿ ಸಿಕ್ಕ ಮಹಿಳೆ ಯಾರು?
ಬೆಟ್ಟದಪುರದಲ್ಲಿ ಸಿಕ್ಕಿದ್ದ ಮಹಿಳೆ ಶವದ ಡಿಎನ್ಎ ಮತ್ತು ಮಲ್ಲಿಗೆ ತಾಯಿಯ ಡಿಎನ್ಎಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ, ತನಿಖಾಧಿಕಾರಿಗಳು ವರದಿ ಬರುವ ಮುಂಚೆಯೇ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆದರೆ, ವರದಿಯಲ್ಲಿ ಸತ್ತ ಮಹಿಳೆಯ ಡಿಎನ್ಎ ಮತ್ತು ಮಲ್ಲಿಗೆಯ ತಾಯಿಯ ಡಿಎನ್ಎ ಬೇರೆ ಬೇರೆ ಎಂದು ಹೇಳಲಾಗಿತ್ತು. ಈ ಆಧಾರದ ಮೇಲೆ ಆರೋಪಿ ಸುರೇಶ್ ಪರ ವಕೀಲರು ಜಾಮೀನು ಕೊಡಿಸಿದ್ದರು.
ಸದ್ಯ ಮಲ್ಲಿಗೆಯನ್ನು ಮೈಸೂರು ಐದನೇ ಹೆಚ್ಚುವರಿ ಜಿ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಇದೀಗ ಸುಳ್ಳು ಆರೋಪ ಪಟ್ಟಿ ದಾಖಲಿಸಿದ ಬೆಟ್ಟದಪುರ ಠಾಣೆಯ ತನಿಖಾಧಿಕಾರಿ, ಮೈಸೂರು ಎಸ್ ಸೇರಿದಂತೆ ಹಲವು ಅಧಿಕಾರಿಗಳ ವಿಚಾರಣೆ ನಡೆಸಿದೆ. ಹಾಗೆಯೇ ಕುಶಾಲನಗರ ಗ್ರಾಮಾಂತರ ಠಾಣೆ ಪೊಲಿಸರು ಯಾಕೆ ಮಲ್ಲಿಗೆಯನ್ನು ಹುಡುಕಲಿಲ್ಲ? ಇತ್ತ ಬೆಟ್ಟದಪುರ ಠಾಣೆ ಪೊಲೀಸರು ಯಾವುದೋ ಮಹಿಳೆಯ ಮೃತದೇಹವನ್ನು ಮಲ್ಲಿಗೆಯ ಮೃತದೇಹ ಎಂದು ಏಕೆ ಕೇಸ್ ದಾಖಲಿಸಿದ್ದರು? ಹಾಗೆಯೇ ಅಂದು ಪತ್ತೆಯಾದ ದೇಹ ಯಾರದ್ದು? ಆಕೆಯನ್ನು ಯಾರು ಕೊಲೆ ಮಾಡಿದ್ದು? ಈ ಎಲ್ಲಾ ವಿಚಾರಗಳು ಇದೀಗ ಹೊಸ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಅಲ್ಲದೇ ಈ ವಿಚಾರದಲ್ಲಿ ಪೊಲೀಸರ ಕಾರ್ಯವೈಖರಿಯಲ್ಲಿನ ವಿಫಲತೆ ಎದ್ದು ಕಾಣುತ್ತಿದ್ದು ಅಮಾಯಕನಿಗಾದ ಅನ್ಯಾಯಕ್ಕೆ ಹೊಣೆ ಯಾರು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.












Click it and Unblock the Notifications