ಮೈಸೂರು ಮೃಗಾಲಯದ ಪ್ರವೇಶ ದರ ಏಕಾಏಕಿ ಏರಿಕೆ
ಮೈಸೂರು, ಜುಲೈ 11: ಮೈಸೂರಿನಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಜಾಗ ಮೃಗಾಲಯದ ಪ್ರವೇಶ ದರ ಹೆಚ್ಚಾಗಿದೆ. ಹೌದು, ಸರ್ಕಾರಿ ರಜೆ ದಿನಗಳಲ್ಲಿ ಹಾಗೂ ವಾರಾಂತ್ಯದಲ್ಲಿ ಮೃಗಾಲಯಕ್ಕೆ ಭೇಟಿ ನೀಡುವವರು 80ರೂ. ಶುಲ್ಕ ಪಾವತಿಸಬೇಕು.
ಉಳಿದ ದಿನಗಳ ಶುಲ್ಕ 60ರೂ.ಗೆ ಏರಿಸಲಾಗಿದೆ. ಪ್ರವೇಶ ದರದಲ್ಲಿ ಏಕಾಏಕಿ 10ರೂ. ಹೆಚ್ಚಳ ಮಾಡಿದ್ದು, ಈ ನೂತನ ದರ ಈಗಾಗಲೇ ಜಾರಿಗೆ ಬಂದಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಪ್ರವೇಶ ದರ ಏರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಪ್ರವಾಸಿಗರನ್ನು ಸೆಳೆದ ಬಿಂಕದಕಟ್ಟಿ ಮೃಗಾಲಯದ ನೂತನ ಅತಿಥಿಗಳು
30 ರೂ.ಹೆಚ್ಚಳ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮವಾಗಿ 10 ರೂ. ಹೆಚ್ಚಿಸಲು ಸಭೆ ಅನುಮೋದನೆ ನೀಡಿದೆ.
ವಯಸ್ಕರಿಗೆ ರೂ. 50ರಿಂದ 60, ಮಕ್ಕಳಿಗೆ (5ರಿಂದ 12 ವರ್ಷ) ರೂ.20ರಿಂದ 30 ಮತ್ತು ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ ರೂ. 70ರಿಂದ 80, ಮಕ್ಕಳಿಗೆ ರೂ.30ರಿಂದ 40ಕ್ಕೆ ಶುಲ್ಕ ಏರಿಸಲಾಗಿದೆ. ಪಾರ್ಕಿಂಗ್ ಶುಲ್ಕದಲ್ಲೂ ಹೆಚ್ಚಳ ಮಾಡಲಾಗಿದೆ.
ಸಿಬ್ಬಂದಿ ವೆಚ್ಚ, ಪ್ರಾಣಿಗಳ ಆಹಾರ ವಸ್ತುಗಳ ಬೆಲೆ ಹೆಚ್ಚಳ, ನಿರ್ವಹಣಾ ವೆಚ್ಚಗಳ ಹೊರೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೃಗಾಲಯಕ್ಕೆ ಬೇರೆಡೆಯಿಂದ ಅನುದಾನ ಬರುವುದಿಲ್ಲ. ನಮ್ಮ ಖರ್ಚನ್ನು ನಾವೇ ಭರಿಸಬೇಕು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದರು.
2017ರ ಅಕ್ಟೋಬರ್ನಲ್ಲಿ ವಾರಾಂತ್ಯ ಹಾಗೂ ಸರ್ಕಾರಿ ರಜೆ ದಿನಗಳ ಪ್ರವೇಶ ಶುಲ್ಕದಲ್ಲಿ 10ರೂ. ಹೆಚ್ಚಿಸಲಾಗಿತ್ತು. ಆದರೆ, ಉಳಿದ ದಿನಗಳ ಶುಲ್ಕದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಮಕ್ಕಳ ಪ್ರವೇಶ ಶುಲ್ಕದಲ್ಲೂ ಯಾವುದೇ ಬದಲಾವಣೆ ಮಾಡಿರಲಿಲ್ಲ. ವಾರಾಂತ್ಯ ಶುಲ್ಕದಲ್ಲಿ ಎಂಟು ತಿಂಗಳಲ್ಲಿ 20ರೂ. ಹೆಚ್ಚಳ ಮಾಡಿದಂತಾಗಿದೆ.
ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕವಾಗಿರುವ ಅಜಿತ್ ಕುಲಕರ್ಣಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಈ ತೀರ್ಮಾನ ಕೈಗೊಳ್ಳಲಾಗಿದೆ.
ಬೆಲೆ
ಏರಿಕೆಗೆ
ಮೈಸೂರಿಗರಿಂದಲೇ
ವಿರೋಧ
ಕರ್ನಾಟಕ
ಮೃಗಾಲಯ
ಪ್ರಾಧಿಕಾರದ
ಆಡಳಿತ
ಮಂಡಳಿ
ಮೈಸೂರಿನ
ಚಾಮರಾಜೇಂದ್ರ
ಮೃಗಾಲಯದ
ಪ್ರವೇಶ
ಶುಲ್ಕವನ್ನು
ವಾರಾಂತ್ಯ
ಮತ್ತು
ರಜಾ
ದಿನಗಳಲ್ಲಿ
ಏರಿಕೆ
ಮಾಡಿರುವುದಕ್ಕೆ
ನಗರದ
ಹೋಟೆಲ್
ಮಾಲೀಕರ
ಸಂಘದಿಂದ
ತೀವ್ರ
ವಿರೋಧ
ವ್ಯಕ್ತವಾಗಿದೆ.
ಮೃಗಾಲಯದ ಪ್ರವೇಶ ಶುಲ್ಕ ಹೆಚ್ಚಳ ಕ್ರಮದಿಂದ ಮೈಸೂರಿಗೆ ವಾರಾಂತ್ಯ ಪ್ರವಾಸಕ್ಕೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಹೊರೆಯಾಗಲಿದೆ. ಯಾವುದೇ ಹೆಚ್ಚುವರಿ ಸೌಲಭ್ಯ ನೀಡದಿದ್ದರೂ ಶುಲ್ಕ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾರಾಂತ್ಯ ಮತ್ತು ರಜಾದಿನಗಳಲ್ಲಿ ಪ್ರವೇಶ ಶುಲ್ಕ ಹೆಚ್ಚಿಸಿರುವುದನ್ನು ಕೂಡಲೇ ಕೈ ಬಿಡಬೇಕು. ವಾರದ ದಿನಗಳಲ್ಲಿನ ಪ್ರವೇಶ ದರ ವಯಸ್ಕರಿಗೆ 60 ರೂ., ಮಕ್ಕಳಿಗೆ 30 ರೂ.ಗಳಲ್ಲೇ ಮುಂದುವರಿದಿದ್ದರೆ, ವಾರಾಂತ್ಯದಲ್ಲಿ ವಯಸ್ಕರಿಗೆ 80 ರೂ., ಮಕ್ಕಳಿಗೆ 40 ರೂ.ಗೆ ಏರಿಕೆಯಾಗಿದೆ.
ಬ್ಯಾಟರಿ ಚಾಲಿತ ವಾಹನದ ಪ್ರಯಾಣಕ್ಕೆ ಹಿರಿಯ ನಾಗರಿಕರಿಗೆ 180 ರೂ. ಹಾಗೂ ಮಕ್ಕಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ. ವಾಹನಗಳ ಪಾರ್ಕಿಂಗ್ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಪ್ರಾಧಿಕಾರದ ಈ ಕ್ರಮ ಪ್ರವಾಸಿಗರಿಗೆ ಹೊರೆಯಾಗಲಿದೆ. ಸರ್ಕಾರವೇ ಶುಲ್ಕ ಹೆಚ್ಚಿಸಿದರೆ, ಖಾಸಗಿಯವರು, ವ್ಯಾಪಾರಸ್ಥರು ಸಹ 4 ಪಟ್ಟು ದರ ಏರಿಸುತ್ತಾರೆ ಎಂದು ಸೂಚಿಸಿದರು.