ತುಂಬಿರುವ ಕಪಿಲೆಗೆ ಧುಮುಕಿದ ಯುವಕರು : ಓರ್ವ ಕಣ್ಮರೆ
ಮೈಸೂರು, ಆಗಸ್ಟ್ 11 : ಅಪಾಯದ ಎಲ್ಲೆ ಮೀರಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಯುವಕರು ಹುಚ್ಚು ಸಾಹಸ ಮೆರೆದು ಈಜಲು ಮುಂದಾಗಿದ್ದು, ಓರ್ವ ಯುವಕ ನಾಪತ್ತೆಯಾದ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ಕಾವೇರಿಯಲ್ಲಿ ಮುಳುಗಿ ಮೂವರು ಜಲಸಮಾಧಿ
ಅಕ್ಷರಶಃ ನಡುಗಡ್ಡೆಯಂತಾದ ನಂಜನಗೂಡಿನ ಕಪಿಲಾ ನದಿಯ ಸುತ್ತಮುತ್ತಲ ಪ್ರದೇಶದಲ್ಲಿ ಯುವಕರು ಹುಚ್ಚು ಸಾಹಸ ಮಾಡಿದ್ದಾರೆ. ನಂಜನಗೂಡಿನ ದೊಡ್ಡಸೇತುವೆ ಬಳಿ ಘಟನೆ ನಡೆದಿದ್ದು, ಇದೇ ಸೇತುವೆಯಿಂದ ಜಿಗಿದು ಈಜುತ್ತ ಸಾಗಿದ್ದ ಯುವಕ ಕಣ್ಮರೆಯಾಗಿದ್ದಾನೆ. ಅಲ್ಲದೇ ಅದೇ ಪ್ರದೇಶದ ಹೆಜ್ಜಿಗೆ ಬಳಿ ಸುಸ್ತಾಗಿದ್ದ ಯುವಕನನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನ ಪಟ್ಟರೂ ಸಾಧ್ಯವಾಗದೆ ಕಪಿಲಾ ನದಿಯಲ್ಲಿ ಏಕಾಏಕಿ ರಭಸದಿಂದ ನೀರು ಬಂದ ಪರಿಣಾಮ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.
ಪೊಲೀಸರು ಹಾಗೂ ಸ್ಥಳೀಯರು ಎಚ್ಚರಿಕೆ ನೀಡಿದರೂ ಕಪಿಲಾ ನದಿಯಲ್ಲಿ ಈಜಲು ಸೇತುವೆ ಮೇಲಿಂದ ಧುಮುಕಿದ್ದು ಈ ಘಟನೆಗೆ ಕಾರಣವಾಗಿದೆ. ಪೊಲೀಸರು ಎಚ್ಚರಿಕೆ ನೀಡಿದರೂ ಲೆಕ್ಕಿಸದ ಯುವಕರು ನದಿಗೆ ಹಾರಿದ್ದು, ಅಲ್ಲಿದ್ದವರು ಮೊಬೈಲ್ ನಲ್ಲಿ ದೃಶ್ಯ ಸೆರೆಹಿಡಿದ್ದಾರೆ. ಕಪಿಲಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ನಂಜನಗೂಡಿನಲ್ಲಿರುವ ಮಲ್ಲನ ಮೂಲೆ ಮಠ ಜಲಾವೃತವಾಗಿದೆ. ಇನ್ನು ಕಪಿಲಾ ನದಿ ನೀರು ನುಗ್ಗಿ ನಂಜನಗೂಡಿನ ಬಡಾವಣೆಗಳು ಸಹ ಮುಳುಗಿದ್ದು ಜನತೆ ಕಂಗಾಲಾಗಿದ್ದಾರೆ.