ಪೊಲೀಸರು ಸುಳ್ವಾಡಿ ವಿಷಪ್ರಸಾದ ಪ್ರಕರಣ ಭೇದಿಸಿದ್ದು ಹೇಗೆ ?
ಮೈಸೂರು, ಡಿಸೆಂಬರ್ 20 : ಸುಳ್ವಾಡಿ ಮಾರಮ್ಮನ ದೇಗುಲದಲ್ಲಿ ವಿಷ ಪ್ರಸಾದ ಸೇವಿಸಿ 15 ಭಕ್ತರು ಸಾವನ್ನಪ್ಪಿ 100ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ಸೇರಿದ ಪ್ರಕರಣ ಕೆಲವೇ ಗಂಟೆಗಳಲ್ಲಿ ರಾಜ್ಯಾದ್ಯಂತ ಸದ್ದು ಮಾಡಿತು.
ಈ ಪ್ರಕರಣವನ್ನು ಸೂಕ್ಷವಾಗಿ ಗಮನಿಸಿ ತನಿಖೆ ಕೈಗೆತ್ತಿಕೊಂಡಿದ್ದು, ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ. ಘಟನೆ ನಡೆದಾಗಿನಿಂದ ಕೊಳ್ಳೇಗಾಲದಲ್ಲೇ ಬಿಡಾರ ಹೂಡಿ ಚಾಮರಾಜನಗರ ಜಿಲ್ಲೆಯ 22 ಪೊಲೀಸ್ ಅಧಿಕಾರಿಗಳು ಮತ್ತು 40 ಸಿಬ್ಬಂದಿಯ ತಂಡವನ್ನೇ ಕಣಕ್ಕಿಳಿಸಿದರು. ಅದರ ಪರಿಣಾಮ ದುರ್ಘಟನೆ ನಡೆದ ಕೇವಲ ಐದೇ ದಿನದಲ್ಲಿ ಹಂತಕರು ಸೆರೆಸಿಕ್ಕರು.
ಖುದ್ದು ಕಾರ್ಯಾಚರಣೆ ನಡೆಸಿದ ಪೊಲೀಸರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ... ಮೊದಲು ಪೊಲೀಸರಿಗೆ ಅನುಮಾನ ಮೂಡಿದ್ದೆ ರೋಚಕತೆಯಾಗಿದೆ. ಘಟನೆ ನಡೆದ ಸಂಜೆ ವೇಳೆಗಾಗಲೇ ಮೊದಲು ಪೊಲೀಸರಿಗೆ ಇಮ್ಮಡಿ ಮಹದೇವಸ್ವಾಮಿ ಮೇಲೆ ಅನುಮೂನ ಮೂಡಲು ಶುರುವಾಯಿತು.

ದೇವಸ್ಥಾನದಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳಾದರೂ ಹಾಜರಿ ಹಾಕುತ್ತಿದ್ದ ಸ್ವಾಮೀಜಿ ದೊಡ್ಡ ಸಾವು ನೋವು ಉಂಟಾಗಿದ್ದರೂ ಅಲ್ಲಿ ಕಾಲಿಟ್ಟಿರಲಿಲ್ಲ. ತಮ್ಮ ಬದಲಿಗೆ ಹಿರಿಯ ಸ್ವಾಮೀಜಿಯವರನ್ನು ಸ್ಥಳಕ್ಕೆ ಕಳುಹಿಸಿದ್ದರು. ಇದರಿಂದ ದೊಡ್ಡ ಸ್ವಾಮೀಜಿ ಮೇಲೆ ಅನುಮಾನ ಬರುವಂತಾಗಬೇಕೆಂಬ ಯೋಜನೆ ಅವರದ್ದಾಗಿತ್ತು. ಇದು ಮೊದಲ ಅನುಮಾನ.
ನಂತರ ಪ್ರಸಾದದಲ್ಲಿ ಕೀಟನಾಶಕವಿದೆ ಎಂಬ ಅಂಶದ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದಂತೆ ಊರಿನ ಅಕ್ಕಪಕ್ಕ ಹಾಗೂ ಯಾರಿಗೆ ಕೃಷಿಯ ಬಗ್ಗೆ ಮಾಹಿತಿ ಇದೆ ಎಂದು ಕಲೆ ಹಾಕುವಾಗ ಅಂಬಿಕಾ ನೆಂಟರು ಕೃಷಿ ಅಧಿಕಾರಿ ಎಂಬುದು ಎರಡನೇ ದಿನವೇ ಅರಿವಾಯಿತು. ತಕ್ಷಣ ಅವರನ್ನು ವಿಚಾರಿಸಿದಾಗ ಒಂದೊಂದೇ ಸತ್ಯ ಹೊರಬೀಳುತ್ತಾ ಸಾಗಿತು.
ಮತ್ತೊಂದು ಅನುಮಾನ ದಟ್ಟವಾಗಿ ಬಂದದ್ದು ಚಿನ್ನಪ್ಪಿಯೊಂದಿಗೆ ಗಲಾಟೆಯಾದಾಗಿನಿಂದಲೂ ದೇಗುಲಕ್ಕೆ ಕಾಲಿಡದ ದೊಡ್ಡಯ್ಯ ಅಂದು ದೇವಸ್ಥಾನದ ಪ್ರಸಾದದ ಸಮೀಪವೇ ಬಂದಿದ್ದು ಹೆಚ್ಚು ಕಾಡಿತು. ಇದು ಪೊಲೀಸ್ ಇಲಾಖೆಯಿಂದಲೇ ದೃಢಪಟ್ಟ ಅನುಮಾನದಿಂದಾಗಿ ಇಷ್ಟು ದೊಡ್ಡ ಕೇಸನ್ನು ಸುಲಭವಾಗಿ ನಿಭಾಯಿಸುವಂತೆ ಮಾಡಲಾಯಿತು.












Click it and Unblock the Notifications