ಮಹಾಮಾರಿ ಡೆಂಗ್ಯೂಗೆ 6 ವರ್ಷದ ಬಾಲಕಿ ಬಲಿ
ಮೈಸೂರು, ಆಗಸ್ಟ್ 8 : ಮಹಾಮಾರಿ ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿಯಾಗಿದ್ದು, ಈಕೆಯ ತಂಗಿಯ ಸಾವು - ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಕೃಷ್ಣರಾಜಪೇಟೆ ತಾಲ್ಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರವಿಕುಮಾರ್ ಮತ್ತು ರಾಣಿ ದಂಪತಿ ಪುತ್ರಿ ಹೇಮಾವತಿ (6) ಡೆಂಗ್ಯೂಗೆ ಬಲಿಯಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈಕೆಯ ತಂಗಿ ಎಲ್ ಕೆ ಜಿ ವ್ಯಾಸಂಗ ಮಾಡುತ್ತಿರುವ ಪ್ರೇರಣಾ ಕೂಡ ಇದೇ ಜ್ವರದಿಂದ ಬಳಲುತ್ತಿದ್ದು, ಅಪೊಲೋ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸಹೋದರಿಯರನ್ನು ಕಳೆದ ಭಾನುವಾರವಷ್ಟೇ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೊ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಇಬ್ಬರು ಮಕ್ಕಳ ಪೈಕಿ ಹಿರಿಯ ಮಗಳು ಹೇಮಾವತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಕೂಲಿ ಕಾರ್ಮಿಕರಾಗಿರುವ ರಾಣಿ - ರವಿಕುಮಾರ್ ದಂಪತಿ ಹಿರಿಯ ಮಗಳು ಡೆಂಗ್ಯೂಗೆ ಬಲಿಯಾಗಿರುವುದರಿಂದ ದಿಕ್ಕೇ ತೋಚದಂತಾಗಿದ್ದಾರೆ. ಇನ್ನು ಕಿರಿಯ ಮಗಳು ಪ್ರೇರಣಾ ಕೂಡ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಹಣಕಾಸಿನ ತೊಂದರೆಯಿಂದ ಪರಿತಪಿಸುತ್ತಿದ್ದಾರೆ.












Click it and Unblock the Notifications