ನಾಗರಹೊಳೆಯಲ್ಲಿ ಆರು ಹೊಸ ಜಾತಿಯ ಪಕ್ಷಿಗಳು ಪತ್ತೆ
ಮೈಸೂರು, ಜನವರಿ 28; ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಿದ ಪಕ್ಷಿ ಸಮೀಕ್ಷೆಯಲ್ಲಿ 6 ಹೊಸ ಜಾತಿಯ ಪಕ್ಷಿಗಳು ಪತ್ತೆಯಾಗಿದೆ. ವಿಶೇಷವಾಗಿದೆ. ನಾಲ್ಕು ದಿನಗಳ ಕಾಲ ನಡೆಸಿದ ಪಕ್ಷಿ ಸಮೀಕ್ಷೆಯಲ್ಲಿ ಒಟ್ಟು 270 ಪ್ರಬೇಧಗಳನ್ನು ಗುರುತಿಸಲಾಗಿದೆ.
ಬ್ಲಾಕ್ ರೆಡ್ ಸ್ಟಾರ್ಟ್, ಗ್ರೀನಿಷ್ ವಾರ್ಬ್ಲರ್, ಗ್ರೇಟರ್ ಸ್ಪಾಟೆಡ್ ಈಗಲ್, ಸ್ಪಾಟ್ ಬೆಲ್ಲಿಡ್ ಈಗಲ್ ಔಲ್, ನೀಲಗಿರಿ ಫ್ಲವರ್ ಪಿಕ್ಕರ್, ಮಾಂಟಾಗೂ ಹ್ಯಾರಿಯರ್ ಹೊಸದಾಗಿ ಪತ್ತೆಯಾದ ಪಕ್ಷಿಗಳು. ನಾಗರಹೊಳೆ ಉದ್ಯಾನದ 8 ವಲಯಗಳ 91 ಬೀಟ್ಗಳಲ್ಲಿ 75 ಮಂದಿ ಪಕ್ಷಿ ಪ್ರಿಯ ಸ್ವಯಂಸೇವಕರು ಹಾಗೂ ಪೊನ್ನಂಪೇಟೆ ಅರಣ್ಯ ಕಾಲೇಜಿನ 36 ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಪಕ್ಷಿ ಸಮೀಕ್ಷೆಯಲ್ಲಿ ನವಿಲು, ಚುಕ್ಕೆ ಬೆಳವ, ಕಾಡು ಕೋಳಿ, ನೀಲಕಂಠ, ಗ್ರೇ ಹಾರ್ನ್ಬಿಲ್, ಬುಲ್ ಬುಲ್, ರಣಹದ್ದುಗಳು, ಉಲಿ ನೆಕ್ಲ್ನ್ಸ್ ಸಾರ್ಪ್, ಹೆರಾನ್ಸ್ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಇವುಗಳೊಂದಿಗೆ ಅಪರೂಪದ ಮಲಬಾರ್ ಪಾರಾಕೀಟ್, ಮಲಬಾರ್ ಗ್ರೇ ಹಾರ್ನ್ಬಿಲ್ ಕೂಡ ಕಂಡು ಬಂದಿವೆ.

ಕಲ್ಲಹಳ್ಳವಲಯ 224, ಡಿ. ಬಿ. ಕುಪ್ಪೆ 215, ಹುಣಸೂರು 209, ಆನೆಚೌಕೂರು 194, ಮೇಟಿಕುಪ್ಪೆ 191, ನಾಗರಹೊಳೆ 165, ಅಂತರಸಂತೆ 142, ವೀರನಹೊಸಹಳ್ಳಿ 191 ವಿವಿಧ ಜಾತಿಯ ಪಕ್ಷಿಗಳು ಕಾಣಿಸಿವೆ. ಮೊದಲ ಬಾರಿಗೆ ನಡೆದ ಪಕ್ಷಿ ಸಮೀಕ್ಷೆಗೆ ಸ್ವಯಂ ಸೇವಕರು ಉತ್ಸಾಹದಿಂದಲೇ ಆಗಮಿಸಿದ್ದರಲ್ಲದೆ, ಕಾಡಿನಲ್ಲಿ ಅಡ್ಡಾಡುವ ಮೂಲಕ ಪಕ್ಷಿಗಳನ್ನು ಗುರುತಿಸಿದ್ದಾರೆ.
ನಾಗರಹೊಳೆ ಉದ್ಯಾನವು ಕುರುಚಲಕಾಡು, ತೇವಾಂಶದ ಕಾಡು, ಎಲೆ ಉದುರುವಕಾಡು, ನಿತ್ಯಹರಿದ್ವರ್ಣದ ಕಾಡುಗಳನ್ನು ಹೊಂದಿರುವುದರಿಂದ ಪಕ್ಷಿಗಳಿಗೆ ಇಲ್ಲಿನ ಅರಣ್ಯ ವಾಸಸ್ಥಾನವಾಗಿದೆ. ಹೀಗಾಗಿ ಇಲ್ಲಿ ಹವಾಮಾನಕ್ಕೆ ತಕ್ಕಂತೆ ಹಲವು ಪಕ್ಷಿಗಳು ಕಾಣಿಸಿಕೊಳ್ಳುತ್ತವೆ.
ಇನ್ನು ಸಮೀಕ್ಷೆಯಲ್ಲಿ ಅತೀ ಹೆಚ್ಚು ಜಾತಿಯ ಪಕ್ಷಿಗಳನ್ನು ದಾಖಲಿಸಿದ ಬಂಡೀಪುರದ ಎಸ್. ಸಂಜಯ್ ಹಾಗೂ ಮೈಸೂರಿನ ಬಿ. ಎಸ್. ರೇವತ್ ಅವರಿಗೆ ಬಹುಮಾನ ನೀಡಿ ಗೌರವಿಸಲಾಗಿದೆ. ಇದೇ ವೇಳೆ ವಿವಿಧ ರಾಜ್ಯಗಳಿಂದ ಬಂದಿದ್ದ ಹಲವಾರು ಸ್ವಯಂಸೇವಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಮೀಕ್ಷೆ ನಮಗೆ ವಿಶೇಷ ಅನುಭವ ನೀಡಿರುವುದಾಗಿ ಹೇಳಿದ್ದಾರೆ. ಪಕ್ಷಿ ಸಮೀಕ್ಷೆಯಿಂದ ಸಂತತಿ ನಾಶವಾಗುತ್ತಿರುವ ಪಕ್ಷಿಗಳ ಸಂರಕ್ಷಣೆಗೆ ಕಾರ್ಯಕ್ರಮ ರೂಪಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾಗರಹೊಳೆ ಉದ್ಯಾನದ ಮುಖ್ಯಸ್ಥ ಡಿ. ಮಹೇಶ್ಕುಮಾರ್ ಮಾತನಾಡಿ, "ಮೊದಲ ಬಾರಿಗೆ ಇ-ಬರ್ಡ್ ಆಪ್ ಮೂಲಕ ಎಕೋ ವಾಲೆಂಟರಿ ಇಂಡಿಯಾ ಟ್ರಸ್ಟ್ನ ಸಹಕಾರದಿಂದ ಅರ್ಹ ಸ್ವಯಂ ಸೇವಕರ ಮೂಲಕ ಪಕ್ಷಿ ಸಮೀಕ್ಷೆ ನಡೆಸಲಾಗಿದ್ದು, ನಾಗರಹೊಳೆಯಲ್ಲಿ ವಿವಿಧ ಬಗೆಯ ಪಕ್ಷಿ ಪ್ರಭೇಧಗಳಿವೆ. ಅವುಗಳ ಬಗ್ಗೆ ತಿಳಿದು ಇತರರಿಗೆ ಅರಿವು ಮೂಡಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.
"ಹುಲಿ ಸಂರಕ್ಷಣೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನಪಡೆದಿರುವ ಉದ್ಯಾನವನ ಇದೀಗ ಪಕ್ಷಿ ಸಮೀಕ್ಷೆಯಿಂದ ಆಹಾರ ಸರಪಳಿಯ ಹಿನ್ನೆಲೆಯಲ್ಲಿ ಉದ್ಯಾನ ನಿರ್ವಹಣೆಗೆ ಸಾಕಷ್ಟು ಅನುಕೂಲವಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಚಿಟ್ಟೆಗಳ ಸಮೀಕ್ಷೆ ನಡೆಸಲಾಗುವುದೆಂದು" ಎಂದು ಹೇಳಿದ್ದಾರೆ.












Click it and Unblock the Notifications