438 ನಮ್ಮ ಕ್ಲಿನಿಕ್ ಶೀಘ್ರವೇ ಆರಂಭ; ಡಾ. ಸುಧಾಕರ್
ಮೈಸೂರು, ಅಕ್ಟೋಬರ್, 28: ಜನೋಪಯೋಗಿ 'ನನ್ನೂರ ನಮ್ಮ ಕ್ಲಿನಿಕ್' ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮೈಸೂರಿನಲ್ಲಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, "438 ನಮ್ಮ ಕ್ಲಿನಿಕ್ ಪ್ರಾರಂಭಕ್ಕೆ ಚಿಂತನೆ ನಡೆಸಲಾಗಿದೆ. ನಗರಸಭೆ ಹಾಗೂ ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆರ್ಥಿಕವಾಗಿ ಹಿಂದುಳಿದ, ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಹಾಗೂ ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನರ ಆರೋಗ್ಯದ ಹಿತರಕ್ಷಣೆ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ. ಬೆಂಗಳೂರಿನಲ್ಲಿ ಚಾಲನೆ ನೀಡಿದ ಬಳಿಕ ಎಲ್ಲಾ ಕಡೆ ಪ್ರಾರಂಭವಾಗಲಿದೆ" ಎಂದು ತಿಳಿಸಿದರು.
ಬಡ ಮಧ್ಯಮ ವರ್ಗದವರಲ್ಲಿ ಬಿಪಿ, ಶುಗರ್ ಹೆಚ್ಚು; ಇದು ಎಲ್ಲಾ ದೇಶಗಳ ಸವಾಲು- ಸುಧಾಕರ್
ಮಕ್ಕಳಲ್ಲಿ ಅನಿಮೀಯ ಹೆಚ್ಚಳ; ಪೋಷಕರಲ್ಲಿ ಅರಿವಿನ ಕೊರತೆ ಹಾಗೂ ಬಡತನದಿಂದ ಮಕ್ಕಳಲ್ಲಿ ಅನಿಮೀಯತೆ ಹೆಚ್ಚಾಗಿ ಕಂಡುಬರುತ್ತಿದೆ. ರೋಗ ನಿಯಂತ್ರಣಕ್ಕಾಗಿ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಲಿದ್ದೇವೆ. ಶಾಲೆಗಳಲ್ಲಿ ಶಿಬಿರ ಏರ್ಪಡಿಸುತ್ತೇವೆ. ಅಲ್ಲದೆ 128 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು. ವಾರದಲ್ಲಿ ಒಂದೊಂದು ದಿನ ವಿಬಿಧ ಕಾಯಿಲೆಗೆ ಸಂಬಂಧಿಸಿದ ತಜ್ಞ ವೈದ್ಯರು ಮಹಿಳೆಯರನ್ನು ತಪಾಸಣೆ ನಡೆಸಲಿದ್ದಾರೆ. ಮಹಿಳೆಯರು ಹೆರಿಗೆ ಸಮಯದಲ್ಲಿ ಎದುರಿಸುವ ಸಮಸ್ಯೆಗಳನ್ನು ತಪ್ಪಿಸಲು ಇದರಿಂದ ಅನುಕೂಲವಾಗಲಿದೆ ಎಂದರು.
ಕ್ಷಯ ನಿರ್ಮೂಲನೆಗೆ ಸೂಕ್ತ ಕ್ರಮ; ''ಪ್ರಧಾನಿ ನರೇಂದ್ರ ಮೋದಿ ಅವರು 2030ರೊಳಗೆ ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡುವ ಪಣ ತೊಟ್ಟಿದ್ದಾರೆ. ಕರ್ನಾಟಕದಲ್ಲಿ 2025ರ ಮೊದಲೇ ಕ್ಷಯ ಮುಕ್ತ ರಾಜ್ಯ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ. ಕ್ಷಯ ನಿಯಂತ್ರಣಕ್ಕೆ ಬೇಕಾದ ಎಲ್ಲ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತೇವೆ. ಜಿಲ್ಲಾವಾರು ಔಷಧಿ ದಾಸ್ತಾನು ಮಾಡಲಾಗುವುದು. ಕೆಎಸ್ಎಂಸಿ ಮೂಲಕ ಔಷಧಗಳನ್ನು ಇ-ಟೆಂಡರ್ನಲ್ಲಿ ನೇರ ಖರೀದಿಗೆ ಅವಕಾಶ ಕೊಡಲಾಗಿದೆ. ಕರ್ನಾಟಕದಲ್ಲಿ ಮೈಸೂರು, ಬೆಳಗಾವಿ ಜಿಲ್ಲೆಗೆ ಎನ್ಎಬಿಎಲ್ ಮಾನ್ಯತೆ ದೊರಕಿದೆ,'' ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ಇಂದುಮತಿ, ವಿಭಾಗೀಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಎಚ್. ಪ್ರಸಾದ್ ಉಪಸ್ಥಿತರಿದ್ದರು.
ವೈದ್ಯರ ಖಾಸಗಿ ಅಭ್ಯಾಸದ ವಿರುದ್ಧ ಕ್ರಮ; ಸರ್ಕಾರಿ ವೈದ್ಯರು ತಮ್ಮ ಕರ್ತವ್ಯದ ಆವಧಿಯಲ್ಲಿ ಖಾಸಗಿಯಾಗಿ ಅಭ್ಯಾಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ವೈದ್ಯರ ದಕ್ಷತೆ ಹಾಗೂ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ವೈದ್ಯರ ಖಾಸಗಿ ಅಭ್ಯಾಸವನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಶೇಕಡಾ 10ರಿಂದ 15ರಷ್ಟು ಜನ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇದು ಕೇವಲ ಮೈಸೂರಿಗೆ ಸೀಮಿತವಾಗಿಲ್ಲ. ಎಲ್ಲಾ ಜಿಲ್ಲೆಗಳಲ್ಲಿಯೂ ಈ ರೀತಿ ನಡೆಯುತ್ತಿದೆ. ಹೀಗಾಗಿ ಮೊದಲ ಹಂತದಲ್ಲಿ ವೈದ್ಯರಿಗೆ ಎಚ್ಚರಿಕೆ ನೀಡಲಾಗುವುದು. ಆದರೂ ಕೇಳದಿದ್ದರೆ ಬೇರೆ ಆಲೋಚನೆ ಮೂಲಕ ಕ್ರಮ ಕೈಗೊಳ್ಳಲಾಗುವುದು. ಜನರಿಗೆ ಸೇವೆ ಒದಗಿಸುವುದು ಮುಖ್ಯ ಎಂದು ಹೇಳಿದರು.