ವೈದ್ಯರ ಎಡವಟ್ಟಿನಿಂದ 37 ಮಂದಿಗೆ ಎಚ್ ಸಿವಿ ಸೋಂಕು
ಮೈಸೂರು, ಜೂನ್ 27: ಮೈಸೂರಿನ ಕೆ.ಆರ್ ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಮಾಡಿರುವ ಎಡವಟ್ಟಿನಿಂದ ಎಚ್ ಸಿವಿ (hetatitis c) ಎಂಬ ವೈರಸ್ ಸೋಂಕು ತಗುಲಿ ಒಬ್ಬರು ಮೃತಪಟ್ಟಿದ್ದು, ಸುಮಾರು 37 ಮಂದಿ ರೋಗಿಗಳು ನರಳಬೇಕಾದ ಪರಿಸ್ಥಿತಿ ಉಂಟಾಗಿದೆ.
ಕೆಲ ದಿನಗಳ ಹಿಂದೆ ಎಚ್ ಸಿವಿ ವೈರಸ್ ಸೋಂಕುಳ್ಳ ವ್ಯಕ್ತಿಯೊಬ್ಬರು ಡಯಾಲಿಸಿಸ್ ಕೇಂದ್ರದಲ್ಲಿ ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ. ಆ ರೋಗಿಗೆ ಡಯಾಲಿಸಿಸ್ ಮಾಡಿದ ನಂತರ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ಸ್ವಚ್ಛಗೊಳಿಸಿಲ್ಲ. ಅದರಲ್ಲಿಯೇ ಆನಂತರ ಬಂದ ರೋಗಿಗಳಿಗೂ ಡಯಾಲಿಸಿಸ್ ಮಾಡಿದ್ದು, ಈಗ ಸುಮಾರು 37ಕ್ಕೂ ಹೆಚ್ಚು ಮಂದಿಗೆ ಎಚ್ ಸಿವಿ ವೈರಸ್ ಹರಡಿದೆ.
ಹತ್ತು ದಿನದ ಹಿಂದೆ ಡಯಾಲಿಸಿಸ್ ಮಾಡಿಸಿರುವ ವ್ಯಕ್ತಿಯಲ್ಲಿ ಈ ಸಮಸ್ಯೆ ಕಂಡುಬಂದಿದ್ದು, ಈ ವಿಷಯವನ್ನು ಡಯಾಲಿಸಿಸ್ ಪರೀಕ್ಷೆಯ ವರದಿ ಬಂದ ತಕ್ಷಣವೇ ಸಂಬಂಧಪಟ್ಟ ರೋಗಿಗಳಿಗೆ ತಿಳಿಸಬೇಕಿತ್ತು. ಆದರೆ ವಿಷಯ ದೊಡ್ಡದಾಗಬಹುದು ಎಂಬ ಕಾರಣಕ್ಕೆ ಮುಚ್ಚಿಟ್ಟಿದ್ದರು ಎನ್ನಲಾಗಿದೆ.

ಜೂನ್ 24ರ ಸೋಮವಾರ ಡಯಾಲಿಸಿಸ್ ಗೆ ಬಂದಿದ್ದ ಚಂದ್ರ ಎಂಬ ರೋಗಿಯು ಈ ವೈರಸ್ ನಿಂದ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ತಕ್ಷಣ ಎಚ್ಚೆತ್ತ ಅಲ್ಲಿನ ಸಿಬ್ಬಂದಿ ರಾತ್ರೋರಾತ್ರಿ, ಡಯಾಲಿಸಿಸ್ ಮಾಡಿಸಿಕೊಂಡು ಎಚ್ ಸಿವಿ ವೈರಸ್ ತಗುಲಿರುವ ರೋಗಿ ಕಡೆಯವರಿಗೆ ವಿಷಯ ತಿಳಿಸಿ, ಬೇರೆಡೆಗೆ ಹೋಗಿ ಡಯಾಲಿಸಿಸ್ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿ ಕಳುಹಿಸಿದ್ದಾರೆ.
ಹೇಗೋ ವಿಷಯ ತಿಳಿಯುತ್ತಿದ್ದಂತೆ ಗಾಬರಿಯಾದ ಸುಮಾರು 37 ರೋಗಿಗಳು ನಮಗೆ ಈ ರೀತಿಯ ವೈರಸ್ ಇದೆ ಎಂದು ಏಕೆ ಇಲ್ಲಿಯವರೆಗೂ ತಿಳಿಸಿಲ್ಲ, ಅಲ್ಲದೆ ನಮಗಿರುವುದು ಕಿಡ್ನಿ ಸಮಸ್ಯೆ ಮಾತ್ರ. ಹಲವು ಬಾರಿ ಡಯಾಲಿಸಿಸ್ ಪರೀಕ್ಷೆ ಮಾಡಿಸಿಕೊಂಡಿದ್ದೇವೆ. ಈ ರೋಗ ನಮಗೆ ಹರಡಲು ಕಾರಣವೇನು ಎಂದು ಪ್ರಶ್ನಿಸಿ ಸಾರ್ವಜನಿಕ ಆಸ್ಪತ್ರೆ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆಗ ಸಿಬ್ಬಂದಿ ಮಾಡಿರುವ ಎಡವಟ್ಟು ಬಯಲಿಗೆ ಬಂದಿದೆ.
ಆಸ್ಪತ್ರೆ ಸಿಬ್ಬಂದಿ ಮಾಡಿರುವ ಈ ಎಡವಟ್ಟಿನಿಂದ 37 ಮಂದಿ ಎಚ್ ಸಿವಿ ವೈರಸ್ ಗೆ ತುತ್ತಾಗಿದ್ದು, ಚಿಕಿತ್ಸೆಗಾಗಿ ಸುಮಾರು 2 ರಿಂದ 3 ಲಕ್ಷದ ಹಣದ ಖರ್ಚಾಗುತ್ತದೆ. ನಮಗೆ ನೀವೇ ಹಣ ಭರಿಸಿ ಚಿಕಿತ್ಸೆ ಕೊಡಿಸಿ ಎಂದು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಎಚ್ ಸಿವಿ ವೈರಸ್ ಗೆ ತುತ್ತಾದ ರೋಗಿಗಳಿಗೆ ಕಿಡ್ನಿ ಸಮಸ್ಯೆ ಜೊತೆಗೆ ಈಗ ತುರಿಕೆ, ಮೈ ಕೈ ಮತ್ತು ಕಾಲು ಕಡಿತದಂತಹ ತೊಂದರೆ ಕಾಣಿಸಿಕೊಳ್ಳುತ್ತಿದ್ದು, ಅವರ ಪಾಡು ಹೇಳತೀರದಾಗಿದೆ.












Click it and Unblock the Notifications