ಮೈಸೂರು: 11 ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ 30 ಆಕಾಂಕ್ಷಿಗಳು, ನಂಜನಗೂಡಿಗೆ ಭಾರಿ ಪೈಪೋಟಿ
ಮೈಸೂರು, ನವೆಂಬರ್ 24: ಮುಂದಿನ ವಿಧಾನಸಭೆ ಚುನಾವಣೆ ಕಾವು ಸಾಂಸ್ಕೃತಿಕ ನಗರದಲ್ಲಿ ಈಗಾಗಲೇ ಶುರುವಾಗಿದೆ. ಎಲ್ಲಾ ಪಕ್ಷಗಳಿಂದಲೂ ಆಕಾಂಕ್ಷಿಗಳ ದಂಡೇ ಇದೆ. ಕಾಂಗ್ರೆಸ್ನಲ್ಲಿ ಹಾಲಿ, ಮಾಜಿ ಶಾಸಕರು ಹಾಗೂ ಯುವ ಕಾರ್ಯಕರ್ತರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಸೂಚಿಸಿತ್ತು.
ನವೆಂಬರ್ 21 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. 2 ಲಕ್ಷ ಡಿಡಿ ಸೇರಿದಂತೆ ತಮ್ಮ ಸ್ವವಿವರಗಳನ್ನು ಸಲ್ಲಿಸುವಂತೆ ಹೇಳಿತ್ತು. ಅದರಂತೆ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ 30 ಕಾಂಗ್ರೆಸ್ ಆಕಾಂಕ್ಷಿಗಳು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಸಿಎಂ ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮತ್ತೊಮ್ಮೆ ವರುಣ ಕ್ಷೇತ್ರದಿಂದ ಹಾಗೂ ಹಾಲಿ ಎಂಎಲ್ಎ ಎಚ್.ಪಿ.ಮಂಜುನಾಥ್ ಮತ್ತೆ ಟಿಕೆಟ್ ಬಯಸಿ ಹುಣಸೂರಿನಿಂದಲೇ ಅರ್ಜಿ ಸಲ್ಲಿಸಿದ್ದಾರೆ. ಉಳಿದಂತೆ ಹೈವೋಲ್ಟೇಜ್ ಕ್ಷೇತ್ರವಾದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅತಿ ಹೆಚ್ಚು ಮಂದಿ ಕೈ ಪಾಳಯದಿಂದ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಕೂಡ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಯಾವ ಕ್ಷೇತ್ರ ಎಂದು ನಮೂದಿಸದ ಕಾರಣ ಕ್ಷೇತ್ರ ಕುತೂಹಲ ಮುಂದುವರಿದಿದೆ.

ನಂಜನಗೂಡಿಗೆ ಭಾರಿ ಪೈಪೋಟಿ
ಹಾಗೆ ನೋಡಿದರೆ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಫೈಟ್ ಜೋರಾಗಿದೆ. ಸದ್ಯ ಸಂಸದ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಶ್ರೀನಿವಾಸ ಪ್ರಸಾದ್ ಅಳಿಯ ಹರ್ಷವರ್ದನ್ ಕಳೆದ ಬಾರಿ ಶಾಸಕರಾಗಿದ್ದಾರೆ. ಈ ವರ್ಷ ಬಿಜೆಪಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ತೀರ್ಮಾನಿಸಿದ್ದು, ಮಾಜಿ ಸಂಸದ ಆರ್.ಧ್ರುವನಾರಾಯಣ್ ಟಿಕೆಟ್ ಬಯಸಿದ್ದಾರೆ.
ಸಂಸದರಾಗಿ ಕಾರ್ಯ ನಿರ್ವಹಿಸಿರುವ ಧ್ರುವನಾರಾಯಣ್ ಮತ್ತೆ ರಾಜ್ಯ ರಾಜಕೀಯಕ್ಕೆ ಬರಲು ಮನಸ್ಸು ಮಾಡಿದ್ದು, ನಂಜನಗೂಡು ಕ್ಷೇತ್ರದತ್ತ ಕಣ್ಣಿಟ್ಟಿದ್ದಾರೆ. ಇವರ ನಡುವೆ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಕೂಡ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಯಾರಿಗೆ ಟಿಕೆಟ್ ನೀಡಬೇಕೆಂಬ ತಲೆನೋವು ಹೈಕಮಾಂಡ್ಗೆ ಬಂದಿದೆ.

ಕೆಆರ್ ಕ್ಷೇತ್ರಕ್ಕೆ 4 ಅರ್ಜಿ
ಬಿಜೆಪಿ ಹಾಲಿ ಶಾಸಕ ಎಸ್.ಎ.ರಾಮದಾಸ್ ಸದ್ಯ ಕೆ.ಆರ್.ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಸ್ಪರ್ಧೆ ನೀಡಲು ಕಾಂಗ್ರೆಸ್ನಿಂದ ನಾಲ್ವರು ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕೆಪಿಸಿಸಿ ಕಾರ್ಯದರ್ಶಿ ಭಾಸ್ಕರ್, ಪ್ರದೀಪ್ ಕುಮಾರ್, ನವೀನ್ ಕುಮಾರ್ ಆಕಾಂಕ್ಷಿಗಳಾಗಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರಕ್ಕಾಗಿ 9 ಅರ್ಜಿ
ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಜಿಟಿಡಿ ವಿಜಯಶಾಲಿಯಾಗಿದ್ದರು. ಇಡೀ ರಾಜ್ಯದ ಗಮನವನ್ನು ಈ ಕ್ಷೇತ್ರ ಸೆಳೆದಿತ್ತು. ಈ ಬಾರಿ ಈ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದು ಅನುಮಾನ. ಸದ್ಯ ಮೈಸೂರು ಜಿಲ್ಲೆ ಗ್ರಾಮಾಂತರ ಅಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರಿಗೌಡ, ಉದ್ಯಮಿ ಕೃಷ್ಣಕುಮಾರ್ ಸಾಗರ್, ಅರುಣ್ಕುಮಾರ್ ಸೇರಿ 9 ಮಂದಿ ಟಿಕೆಟ್ಗೆ ಅರ್ಜಿ ಸಲ್ಲಿಸಿ ನಾಯಕರನ್ನು ಒಲಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ.

ಹುಣಸೂರು, ಎಚ್ಡಿ ಕೋಟೆಯಿಂದ ತಲಾ ಒಬ್ಬರು
ಉಳಿದಂತೆ ಪಿರಿಯಾಪಟ್ಟಣದಿಂದ ಕೆ.ವೆಂಕಟೇಶ್, ಎಚ್.ಡಿ.ಗಣೇಶ್, ಕೆ.ಆರ್.ನಗರ ಕ್ಷೇತ್ರದಿಂದ ಡಿ.ರವಿಶಂಕರ್, ಐಶ್ವರ್ಯ ಮಹದೇವ, ತಿ.ನರಸೀಪುರ ಕ್ಷೇತ್ರದಿಂದ ಸುನೀಲ್ ಬೋಸ್. ನೂತನ್ ಎಂ, ಎಚ್.ಡಿ.ಕೋಟೆ ಕ್ಷೇತ್ರದಿಂದ ಹಾಲಿ ಶಾಸಕ ಅನಿಲ್ ಚಿಕ್ಕಮಾದು, ದೊಡ್ಡನಾಯಕ ಹುಣಸೂರು ಕ್ಷೇತ್ರದಿಂದ ಎಚ್.ಪಿ.ಮಂಜುನಾಥ್, ಚಾಮರಾಜ ಕ್ಷೇತ್ರದಿಂದ ವಾಸು, ಹರೀಶ್ಗೌಡ, ಎನ್.ಆರ್ ಕ್ಷೇತ್ರದಿಂದ ತನ್ವೀರ್ ಸೇಠ್ ಮತ್ತು ಅಯೂಬ್ ಖಾನ್ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications