ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಹಾಡಹಗಲೇ 23 ಲಕ್ಷ ದೋಚಿದ ಖದೀಮರು
ಮೈಸೂರು, ಜನವರಿ 2 : ಇಂಥ ಘಟನೆಗಳೇ ಅಚ್ಚರಿಗೆ ಕಾರಣವಾಗುತ್ತವೆ. ಏಕೆಂದರೆ, ಹಗಲು ವೇಳೆಯಲ್ಲಿ - ಅದರಲ್ಲೂ ಜನ ಸಂಚಾರ ಇರುವ ಸಮಯದಲ್ಲೇ ಮನೆಯ ಬಾಗಿಲನ್ನು ಮೀಟಿ ಲಕ್ಷಾಂತರ ರುಪಾಯಿ ದೋಚುವುದು ಸುಮ್ಮನೆ ಮಾತಲ್ಲ. ಹಗಲು ಹೊತ್ತಿನಲ್ಲಿ ಮನೆ ಬಾಗಿಲು ಮೀಟಿ ಒಳ ನುಗ್ಗಿದ ಕಳ್ಳರು, 23 ಲಕ್ಷ ರುಪಾಯಿಯಷ್ಟು ನಗದು, 7 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ನಗರದಲ್ಲಿ ನಡೆದಿದೆ.
ಮಂಡಿ ಮೊಹಲ್ಲಾ ನಿವಾಸಿ ಸುನೀಲ್ ಕುಮಾರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಪಾತ್ರೆ ಮಾರಾಟ ಮಳಿಗೆಯನ್ನು ಹೊಂದಿರುವ ಸುನೀಲ್, ಭಾನುವಾರ ಮನೆಗೆ ಬೀಗ ಹಾಕಿ ಪತ್ನಿ ಜೊತೆ ಮೇಲುಕೋಟೆಗೆ ತೆರಳಿದ್ದರು. ಇದೇ ವೇಳೆಯನ್ನು ಬಳಸಿಕೊಂಡ ಖದೀಮರು ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದಾರೆ.

ಸುನೀಲ್ ತಂದೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅವರು ಸುನೀಲ್ ಗೆ ದೂರವಾಣಿ ಮೂಲಕ ಕರೆ ಮಾಡಿ, ವಿಚಾರ ತಿಳಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಮನೆಗೆ ಬಂದ ಸುನಿಲ್ ಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕೂಡಲೇ ಅವರು ಮಂಡಿ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚುತ್ತಿದ್ದು, ನಿತ್ಯವೂ ಒಂದಲ್ಲ ಒಂದು ಕಡೆ ಕಳ್ಳತನ ಆಗುತ್ತಲೇ ಇದೆ. ಈ ಕುರಿತು ಪೊಲೀಸರು ಗಂಭೀರ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.












Click it and Unblock the Notifications