ಮೈಸೂರಿನಲ್ಲಿ ಅಜ್ಜಿ-ತಾತನ ಕೊಲ್ಲಲು ಮನೆಗೆ ಬೆಂಕಿಯಿಟ್ಟ ಮೊಮ್ಮಗಳು!
ಮೈಸೂರಿನಲ್ಲಿ 22 ವರ್ಷದ ಯುವತಿ ತನಗೆ ಆಶ್ರಯ ನೀಡಿದ್ದ ತಾತ-ಅಜ್ಜಿಯನ್ನು ಕೊಲ್ಲಲು ಮನೆಗೆ ಬೆಂಕಿ ಇಟ್ಟಿದ್ದಾಳೆ. ಸಮಯಕ್ಕೆ ಅಕ್ಕಪಕ್ಕದವರು ಪೊಲೀಸರು, ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದರಿಂದ ಬೆಂಕಿ ನಂದಿಸಲಾಗಿದೆ
ಮೈಸೂರು, ಮಾರ್ಚ್ 16: ಮೊಮ್ಮಗಳೇ ತಾತ- ಅಜ್ಜಿಯ ಮೇಲೆ ಹಲ್ಲೆ ನಡೆಸಿ, ಮನೆಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಹುನ್ನಾರ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹೆಬ್ಬಾಳದಲ್ಲಿರುವ ಲಕ್ಷ್ಮಿಕಾಂತ ನಗರದ ಮೊದಲನೇ ಹಂತದಲ್ಲಿ ವಾಸಿಸುತ್ತಿರುವ ಸೋಮಸುಂದರ್ ಹಾಗೂ ಲೀಲಾವತಿ ದಂಪತಿಯ ಮೊಮ್ಮಗಳು ಪ್ರಿಯದರ್ಶಿನಿ (22) ಈ ದುಷ್ಕೃತ್ಯ ಎಸಗಿದವಳು.
ಮನೆಯ ಮುಂದೆ ಇದ್ದ ಉಯ್ಯಾಲೆಗೆ ಗುರುವಾರ ಮಧ್ಯಾಹ್ನದ ವೇಳೆ ಬೆಂಕಿ ಹಚ್ಚಿ, ಅಕ್ಕಪಕ್ಕದವರಿಗೆ ವಿಷಯ ಮುಟ್ಟಿಸಿದ್ದಾಳೆ. ಬೆಂಕಿ ಮನೆಯನ್ನೆಲ್ಲ ಆವರಿಸುವುದಕ್ಕೆ ಮೊದಲೇ ಅಕ್ಕಪಕ್ಕದವರು ಪೊಲೀಸರಿಗೆ ಹಾಗೂ ಅಗ್ನಿಶಾಮಕದಳದವರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಹೆಬ್ಬಾಳ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.[ಮೈಸೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ]
ಪ್ರತಿ ದಿನ ಈಕೆ ಅಜ್ಜಿ-ತಾತನಿಗೆ ಹೊಡೆದು ಬಡಿದು ಮಾಡುತ್ತಿದ್ದಳು. ಇಂದು ನಿಮ್ಮನ್ನು ಸಾಯಿಸುತ್ತೇನೆ ಎಂದು ಹೇಳಿ ಬೆಂಕಿ ಹಚ್ಚಿದ್ದಾಳೆ. ಆಕೆಯ ತಂದೆ ವಿಚ್ಛೇದನ ಪಡೆದ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ಪ್ರಿಯದರ್ಶಿನಿಯ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಯುಸಿಯಲ್ಲಿ ಅನುತ್ತೀರ್ಣಳಾದ ಈಕೆ, ಅಜ್ಜಿ-ತಾತನ ಜೊತೆ ವಾಸವಿದ್ದಳು.[ಸಾಲ ಮನ್ನಾ ಘೋಷಣೆ ನಿರೀಕ್ಷೆ ಹುಸಿ, ಮಂಡ್ಯದಲ್ಲಿ ಇಬ್ಬರು ರೈತರ ಆತ್ಮಹತ್ಯೆ!]
ಈಕೆ ಪ್ರತಿ ದಿನ ಅರೆಬೆತ್ತಲೆಯಾಗಿ ತಿರುಗುತ್ತಾಳೆ. ಸಂಜೆ ವೇಳೆ ಹುಡುಗರನ್ನು ಕರೆತಂದು ದಾಂಧಲೆ ನಡೆಸುತ್ತಾಳೆ. ಕುಡಿತ, ಡ್ರಗ್ಸ್ ಎಲ್ಲ ಚಟಗಳನ್ನೂ ಮೈಗೂಡಿಸಿಕೊಂಡಿದ್ದು, ತೊಂದರೆ ನೀಡುತ್ತಾಳೆ ಎಂದು ಸ್ಥಳೀಯರು ದೂರಿದ್ದಾರೆ. ಹೆಬ್ಬಾಳ ಠಾಣೆ ಇನ್ ಸ್ಪೆಕ್ಟರ್ ತಿಮ್ಮೇಗೌಡ ಸ್ಥಳಕ್ಕೆ ಭೇಟಿ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.