Breaking; ಮೈಸೂರು ದಸರಾ 2022; ಗಜಪಯಣಕ್ಕೆ ಚಾಲನೆ
ಮೈಸೂರು, ಆಗಸ್ಟ್ 07; 2022ರ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಮೊದಲ ತಂಡದ ಗಜಯಪಯಣ ಭಾನುವಾರ ಆರಂಭವಾಗಿದೆ.
ಭಾನುವಾರ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ಕನ್ಯಾ ಲಗ್ನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವುದರ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಗಿದೆ. ಸಂಜೆ ವೇಳೆಗೆ ಆನೆಗಳು ಲಾರಿಗಳ ಮೂಲಕ ಮೈಸೂರು ನಗರ ತಲುಪಲಿವೆ.
ಅರಣ್ಯ ಸಚಿವ ಉಮೇಶ್ ಕತ್ತಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಮೈಸೂರು ಜಿಲ್ಲಾಧಿಕಾರಿ ಡಾ. ಬಗಾಗಿ ಗೌತಮ್, ಎಸ್ಪಿ ಚೇತನ್ ಸೇರಿದಂತೆ ಹಲವು ಗಣ್ಯರು ಆನೆಗಳಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

'ಅಭಿಮನ್ಯು' ನೇತೃತ್ವದ ಮೊದಲ ತಂಡದಲ್ಲಿ ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಚೈತ್ರಾ, ಗೋಪಾಲಸ್ವಾಮಿ, ಕಾವೇರಿ, ಲಕ್ಷ್ಮೀ ಆನೆಗಳು ಗಜಪಯಣ ಆರಂಭಿಸಿದವು. ಗಜಪಯಣದ ಮೂಲಕ ಮೈಸೂರು ದಸರಾ 2022ಕ್ಕೆ ವಿದ್ಯುಕ್ತ ಆರಂಭ ಸಿಕ್ಕಿದೆ.
ಭಾನುವಾರ ಸಂಜೆ ಮೈಸೂರು ತಲುಪಲಿರುವ ಗಜಪಡೆಗಳು ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯಲಿವೆ. ಆಗಸ್ಟ್ 10ರಂದು ಮೈಸೂರು ಅರಮನೆಗೆ ಗಜಪಡೆಗಳು ಆಗಮಿಸಲಿವೆ. ಅಂದು ಬೆಳಗ್ಗೆ 9.20ರಿಂದ 10ರ ಕನ್ಯಾ ಲಗ್ನದಲ್ಲಿ ಗಜಪಡೆಗಳನ್ನು ಬರಮಾಡಿಕೊಳ್ಳಲಾಗುತ್ತದೆ.
ಒಟ್ಟು ಎರಡು ಹಂತದಲ್ಲಿ ಗಜಪಡೆಗಳು ಮೈಸೂರಿಗೆ ಆಗಮಿಸಲಿವೆ. ಎರಡನೇ ಆನೆಗಳ ತಂಡ ಸೆಪ್ಟೆಂಬರ್ನಲ್ಲಿ ಆಗಮಿಸಲಿವೆ. ಮೈಸೂರು ಅರಮನೆಯಲ್ಲಿ ಆನೆಗಳ ವಾಸ್ತವ್ಯಕ್ಕೆ, ಗಜಪಡೆಗಳ ಜೊತೆ ಆಗಮಿಸುವ ಮಾವುತರು, ಕಾವಾಡಿಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ಎರಡು ವರ್ಷಗಳ ಕಾಲ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸರಳವಾಗಿ ಮೈಸೂರು ದಸರಾ ಆಚರಣೆ ಮಾಡಲಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡಲು ತೀರ್ಮಾನಿಸಲಾಗಿದೆ.












Click it and Unblock the Notifications