ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ 2 ಕೋಟಿ ದಾಖಲೆ ರಹಿತ ಹಣ ವಶ
ಮೈಸೂರು, ನವೆಂಬರ್ 30: ದಾಖಲೆಯಿಲ್ಲದೇ ನಿಯಮ ಬಾಹಿರವಾಗಿ ಸಾಗಿಸುತ್ತಿದ್ದ 2 ಕೋಟಿ ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದು, ಅದಕ್ಕೆ ಕಾರಣರಾದ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸೀನಿಯರ್ ಅಸಿಸ್ಟೆಂಟ್ ಚೇತನ್ ಬಾಬು ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅಮಾನತು ಮಾಡಿದ್ದಾರೆ.
ಮದ್ದೂರಿನ ನಿಡಘಟ್ಟ ಚೆಕ್ ಪೋಸ್ಟ್ನಲ್ಲಿ ಸಿಕ್ತು 52 ಲಕ್ಷ ರೂ
ರಿಸರ್ವ್ ಬ್ಯಾಂಕ್ ನಿಯಮಾನುಸಾರ ಬ್ಯಾಂಕಿನ ಒಂದು ಬ್ರಾಂಚ್ ನಿಂದ ಮತ್ತೊಂದು ಬ್ರಾಂಚ್ ಗೆ ಬೃಹತ್ ಮೊತ್ತದ ಹಣವನ್ನು ಕೊಂಡೊಯ್ಯುವಾಗ ಅನುಸರಿಸಬೇಕಾದ ಕ್ರಮ ಕೈಗೊಂಡಿರದ ಕಾರಣ ಮಾರ್ಗಮಧ್ಯೆ ಮನುಗನಹಳ್ಳಿ ಚೆಕ್ ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದರು.
ಈ ಕುರಿತು ಬ್ಯಾಂಕ್ ಅಧ್ಯಕ್ಷರಿಗಾಗಲಿ ಅಥವಾ ಬ್ಯಾಂಕಿನ ಹಿರಿಯ ಅಧಿಕಾರಿಗಳಿಗಾಗಲೀ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ. ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳೂ ಅವರ ಬಳಿ ಇರಲಿಲ್ಲ ಎನ್ನಲಾಗಿದ್ದು, ನಿಯಮ ಉಲ್ಲಂಘಿಸಿ ಎರಡು ಕೋಟಿ ನಗದು ಹಣವನ್ನು ಎಂಸಿಡಿಸಿಸಿ ಬ್ಯಾಂಕ್ ಪಿರಿಯಾಪಟ್ಟಣ ಶಾಖೆಗೆ ಬ್ಯಾಂಕ್ ಸೀನಿಯರ್ ಅಸಿಸ್ಟೆಂಟ್ ಚೇತನ್ ಬಾಬು ಸಾಗಿಸುತ್ತಿದ್ದು, ಅವರು ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ. ಈ ಆಧಾರದ ಮೇಲೆ ಅವರ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ.