Mysuru: ಹೆಣ್ಣು ಭ್ರೂಣ ಹತ್ಯೆ ಪ್ರಕರಣ; 17 ಮಂದಿ ವಿರುದ್ಧ ದೂರು ದಾಖಲು
ಮೈಸೂರು: ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ರಾಜ್ಯದಲ್ಲೇ ದೊಡ್ಡ ಸದ್ದು ಮಾಡಿತ್ತು. ಈ ಸಂಬಂಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಆದೇಶದ ಮೇರೆಗೆ ಮೈಸೂರು ಜಿಲ್ಲೆಯಲ್ಲಿ 17 ಮಂದಿ ವಿರುದ್ಧ ದೂರು ದಾಖಲಾಗಿದೆ.
ಉದಯಗಿರಿ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂತಾನೋತ್ಪತ್ತಿ ಮಕ್ಕಳ ಆರೋಗ್ಯಾಧಿಕಾರಿ ಡಾ.ಎಸ್.ಗೋಪಿನಾಥ್ ಅವರು 5 ಮಹಿಳೆಯರನ್ನೂ ಒಳಗೊಂಡಂತೆ 17 ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಯನ್ ಕುಮಾರ್, ಸುನಂದ, ಶಿವನಂಜೇಗೌಡ, ಡಾ.ತುಳಸೀರಾಮ್, ಸಿದ್ದೇಶ್, ಪುಟ್ಟರಾಜು, ಎ.ಎಲ್.ಸತ್ಯ, ಧನಂಜಯ್ ಗೌಡ, ಡಾ.ಚಂದನ್ ಬಲ್ಲಾಳ್, ಅಭಿಷೇಕ್ ಗೌಡ, ನವೀನ್ಕುಮಾರ್, ವಿರೇಶ್, ಮೀನ, ರಿಜ್ಞಾ ಖಾನಂ, ನಿಸಾರ್ ಅಹಮದ್, ಮಂಜುಳ, ಉಷಾರಾಣಿ ವಿರುದ್ಧ ದೂರು ದಾಖಲಾಗಿದೆ.
ಗರ್ಭಪಾತ ಮಾಡಿಸಿಕೊಳ್ಳಲು ಒಪ್ಪಿದ ಗರ್ಭಿಣಿಯರಿಗೆ ಉಷಾರಾಣಿ ಮುಖಾಂತರ ಮೈಸೂರಿನ ಚಾಮುಂಡೇಶ್ವರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಮತ್ತು ಮಾಲೀಕರಿಗೆ ಅನುಮಾನ ಬಾರದ ರೀತಿಯಲ್ಲಿ ಗರ್ಭಪಾತ ಮಾಡಿಸುತ್ತಿದ್ದರು. ನಂತರ ಕಮೀಷನ್ ಹಣವನ್ನು ಮಧ್ಯವರ್ತಿಗಳ ಅಕೌಂಟ್ಗೆ ಅಥವಾ ನಗದು ರೂಪದಲ್ಲಿ ಪಾವತಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ಕ್ಯಾನಿಂಗ್ನಲ್ಲಿ ಹೆಣ್ಣುಮಗುವೆಂದು ತಿಳಿದು ಬಂದರೆ ಡಾ.ಚಂದನ್ ಬಲ್ಲಾಳ್ ಅವರಿಗೆ ಸೇರಿದ ಮೈಸೂರಿನ ಮಾತ ಆಸ್ಪತ್ರೆ ಮತ್ತು ಆಯುರ್ವೇದಿಕ್ ಪೈಲ್ಸ್ ಡೇ ಕೇರ್ ಸೆಂಟರ್ಗಳಲ್ಲಿ ಮೀನ, ರಿಜ್ಞಾ ಖಾನಂ, ನಿಸಾರ್ ಅಹಮದ್, ಮಂಜುಳ ಅವರ ಮೂಲಕ ಗರ್ಭಪಾತ ಮಾಡಿಸಲಾಗುತ್ತಿತ್ತು. ಗರ್ಭಪಾತ ಮಾಡಿದ ಭ್ರೂಣಗಳನ್ನು ನಿಸಾರ್ ಅಹಮದ್ ವಿಲೇವಾರಿ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಿವನಂಜೇಗೌಡ, ನಯನ್ ಕುಮಾರ್, ಸುನಂದ ಎಂಬುವರು ಲ್ಯಾಬ್ಗಳಿಗೆ ಪರೀಕ್ಷೆಗೆ ಬರುತ್ತಿದ್ದ ಗರ್ಭಿಣಿಯರು ಹಾಗೂ ಮಧ್ಯವರ್ತಿಗಳಾದ ಡಾ.ತುಳಸೀರಾಮ್, ಸಿದ್ದೇಶ್, ಪುಟ್ಟರಾಜು, ಎ.ಎಲ್.ಸತ್ಯ, ಅಭಿಷೇಕ್ ಗೌಡ, ಧನಂಜಯ್ ಗೌಡ ಅವರು ಕರೆತರುತ್ತಿದ್ದ ಗರ್ಭಿಣಿಯರನ್ನು ತಮ್ಮ ಸಂಬಂಧಿಕರಿಗೆ ಸೇರಿದ ಮಂಡ್ಯ ಜಿಲ್ಲೆಯ ಹಾಡ್ಯ ಗ್ರಾಮದ ಜಮೀನಿನಲ್ಲಿರುವ ಆಲೆಮನೆಗೆ ಕಳುಹಿಸಿ ಸ್ಕ್ಯಾನಿಂಗ್ ಮಾಡಿಸುತ್ತಿದ್ದರು ಎಂದು ದೂರಿನಲ್ಲಿ ದಾಖಲಾಗಿದೆ.












Click it and Unblock the Notifications