ಮೈಸೂರಲ್ಲಿ ಭೀಕರ ಅಪಘಾತ : 12 ಸಾವು
ಮೈಸೂರು, ಮೇ 13 : ಗೂಡ್ಸ್ ಟೆಂಪೋಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ 12 ಜನರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ- ಭೇರ್ಯ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ಸುಷ್ಮಾ (35), ಶಾಂತಮ್ಮ (40), ಶಾಂತಾ (30), ಸ್ಪಂದನಾ (10), ಕಾವ್ಯಾ (10), ರಕ್ಷಿತಾ (11), ಮನೋಜ್ ಕುಮಾರ್ (10), ರಂಜಿತಾ (9), ವರದನಾಯಕ (50) ಎಂದು ಗುರುತಿಸಲಾಗಿದೆ. ನಾಲ್ವರ ಗುರುತು ಇನ್ನೂ ಪತ್ತೆಯಾಗಬೇಕಾಗಿದೆ.

ಮೃತರು ಕೆ.ಆರ್.ನಗರ ತಾಲೂಕಿನ ಮುಂಜನಹಳ್ಳಿಯವರು ಎಂದು ತಿಳಿದುಬಂದಿದೆ. ಮುಂಜನಹಳ್ಳಿ ಗ್ರಾಮದ ರಾಮನಾಯಕ ಎಂಬುವವರ ಮಗಳನ್ನು ಚೆನ್ನಂಗೆರೆ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಅಲ್ಲಿಗೆ ತೆರಳಿ ಬೀಗರೂಟ ಮುಗಿಸಿಕೊಂಡು ಗ್ರಾಮಕ್ಕೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. [ಎಣ್ಣೆ ಏಟಿನಲ್ಲಿ ಮಗು ಸೇರಿ ಐವರನ್ನು ಕೊಚ್ಚಿದ ದುಷ್ಕರ್ಮಿ]
ಅಪಘಾತದಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಳೆ ಮತ್ತು ಕತ್ತಲು ಇದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಯಿತು ಎಂದು ಸ್ಥಳೀಯರು ಹೇಳಿದ್ದಾರೆ.
ಈ ಅಪಘಾತದಿಂದಾಗಿ ಸಾಲಿಗ್ರಾಮ-ಭೇರ್ಯ ಗ್ರಾಮದ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸುಮಾರು 3 ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಮಹೇಶ್ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications