ಮೈಸೂರಲ್ಲಿ ಶತಾಯುಷಿ ಬೋರಜ್ಜಿಯ ಶೌಚಾಲಯ ಅಭಿಯಾನ...!
ಚಾಮರಾಜನಗರ,ಮಾರ್ಚ್,28: ಇವರು ಶತಾಯುಷಿ, ಆದರೂ ಈ ಇಳಿವಯಸ್ಸಿನಲ್ಲಿಯೂ ಸಮಾಜ ಸೇವೆ ಇವರ ಆದ್ಯತಾ ಕ್ಷೇತ್ರ. ಅಲ್ಲದೇ ತಮ್ಮ ಊರಿನ ಜನರಲ್ಲಿ ಶೌಚಾಲಯ ಕುರಿತಾದ ಅರಿವು ಮೂಡಿಸುತ್ತಾ ತಮ್ಮ ಹಳ್ಳಿಯನ್ನು ಸ್ಚಚ್ಛತಾ ಹಳ್ಳಿ ಎಂಬ ನಾಮಫಲಕ ಹಾಕಿಕೊಳ್ಳಬೇಕೆಂಬ ಹೆಬ್ಬಯಕೆ ಇವರದು.
ಚಾಮರಾಜನಗರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 209ಕ್ಕೆ ಹೊಂದಿಕೊಂಡಿರುವ, ಜಿಲ್ಲಾ ಕೇಂದ್ರದಿಂದ 4 ಕಿಲೋ ಮೀಟರ್ ದೂರವಿರುವ ಮಸಗಾಪುರ ಗ್ರಾಮದ ನಿವಾಸಿ 108 ವರ್ಷದ ಬೋರಮ್ಮ ಅವರೇ ಶೌಚಾಲಯದ ಅರಿವು ಮೂಡಿಸುತ್ತಿರುವ ಶತಾಯುಷಿ.[ಇ-ಟಾಯ್ಲೆಟ್ ಹುಡುಕಲು ಬಂತು ಮೊಬೈಲ್ ಅಪ್ಲಿಕೇಶನ್]

ಇಂದಿನವರೆಗೂ ಶತಾಯುಷಿ ಬೋರಮ್ಮ ನೆಲೆ ನಿಂತಿರುವ ಊರಿನ ಹಲವು ಮನೆಗಳಲ್ಲಿ ಶೌಚಾಲಯವಿಲ್ಲ. ಹೀಗಾಗಿ ಮಕ್ಕಳು, ಮಹಿಳೆಯರಾದಿಯಾಗಿ ಬಹಿರ್ದೆಸೆಗೆ ಬಯಲನ್ನು ಅವಲಂಬಿಸಿದ್ದಾರೆ. ಮಹಿಳೆಯರ ಪರದಾಟ ಅರ್ಥಮಾಡಿಕೊಂಡ ಮಂದಿ ಕೆಲವರು ಈಗಾಗಲೇ ಶೌಚಾಲಯ ನಿರ್ಮಿಸಿಕೊಂಡಿದ್ದರೆ, ಮತ್ತೆ ಕೆಲವರು ಉದಾಸೀನತೆ ತಾಳಿದ್ದಾರೆ.
ಈ ಎಲ್ಲಾ ಸಂದರ್ಭಗಳನ್ನು ಹತ್ತಿರದಿಂದ ನೋಡಿದ ಮತ್ತು ಶೌಚಾಲಯವಿಲ್ಲದೆ ಕಷ್ಟವನ್ನು ಅನುಭವಿಸಿದ ಶತಾಯುಷಿ ಬೋರಮ್ಮ ಅವರು ಚಾಮರಾಜನಗರದ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಶೌಚಾಲಯದ ಅರಿವು ಮೂಡಿಸುತ್ತಿದ್ದಾರೆ.[ಮೈಸೂರಲ್ಲಿ ಮಂಗಳಮುಖಿಯರ ಶೌಚಾಲಯ, ದೇಶದಲ್ಲೇ ಪ್ರಥಮ?]
ತಮ್ಮ ಜೀವಿತಾವಧಿಯನ್ನು ನೂರಾರು ರೀತಿಯ ಕಷ್ಟ, ನಷ್ಟ, ನೋವು, ನಲಿವುಗಳನ್ನು ಕಂಡಿರುವ ಬೋರಮ್ಮಜ್ಜಿ ಶೌಚಾಲಯದಿಂದ ಪರಿಸರಕ್ಕೆ ಆಗುವ ಅನುಕೂಲ ಮತ್ತು ಅನಾನುಕೂಲದ ಬಗ್ಗೆ ಸಲಹೆ ನೀಡುತ್ತಿದ್ದಾರೆ. ಹಿರಿಯಜ್ಜಿಯ ಮಾತನ್ನು ತಳ್ಳಿಹಾಕದ ಜನ ಸ್ಪಂದಿಸಿ ಶೌಚಾಲಯ ನಿರ್ಮಾಣದತ್ತ ಮುಖ ಮಾಡಿದ್ದಾರೆ.

ಶೌಚಾಲಯದ ಬಗ್ಗೆ ಅರಿವು ಮೂಡಿಸುವ ಮನಸ್ಸು ಮೂಡಿದ್ದು ಹೇಗೆ?
ಬೋರಮ್ಮಜ್ಜಿ ತಮ್ಮ ಸ್ವಗ್ರಾಮ ಮಸಗಾಪುರದಲ್ಲಿಯೇ ಹೆಚ್ಚಿನ ಜನರು ಬಹಿರ್ದೆಸೆಗೆ ಬಯಲನ್ನು ಅವಲಂಬಿಸಿದ್ದರು. ಈ ಸಂದರ್ಭ ಗ್ರಾಮದಲ್ಲೆಲ್ಲ ಅಡ್ಡಾಡಿದ ಬೋರಮ್ಮಜ್ಜಿ ಶೌಚಾಲಯ ನಿರ್ಮಿಸುವ ಮತ್ತು ಅದರಿಂದಾಗುವ ಅನುಕೂಲಗಳ ಬಗ್ಗೆಯೂ ತಿಳಿ ಹೇಳಿದರು.
ಸರ್ಕಾರದಿಂದ ಸಿಗುವ ಅನುದಾನದ ಬಗ್ಗೆಯೂ ತಿಳಿಸತೊಡಗಿದರು. ಅಜ್ಜಿ ಮಾತು ಕೇಳಿದ ಜನ ಶೌಚಾಲಯ ನಿರ್ಮಿಸುವುದಾಗಿಯೂ ವಾಗ್ದಾನ ನೀಡಿದರು. ಇದೀಗ ಬಹಳಷ್ಟು ಜನರ ಮನೆಯಲ್ಲಿ ಶೌಚಾಲಯ ಕಾಣುವಂತಾಗಿದೆ.[ಶಾಲೆ ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮವಿತ್ತ ಬಾಲಕಿ]
ತಮ್ಮ ಇಳಿ ವಯಸ್ಸಿನಲ್ಲೂ ಮನೆ ಮನೆಗೆ ತೆರಳಿ ಶೌಚಾಲಯ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಬೋರಮ್ಮಜ್ಜಿಯ ಸಮಾಜಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ಬೋರಮ್ಮಜ್ಜಿಯಂತವರು ಎಲ್ಲಡೆಯಿದ್ದರೆ ನಮ್ಮ ದೇಶ ಬಯಲು ಶೌಚ ಮುಕ್ತ ಭಾರತ ಆಗುವುದರಲ್ಲಿ ಸಂಶಯವಿಲ್ಲ.












Click it and Unblock the Notifications