ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಪುಸ್ತಕದಲ್ಲಿ ಏನಿದೆ? ಮುಖ್ಯಾಂಶಗಳು
ಮೈಸೂರು, ಮಾರ್ಚ್ 22 : "ನಮ್ಮ ಹಿರಿಯರು ರಾಜ- ಮಹಾರಾಜರನ್ನು ಸಿಂಹಾಸನದಿಂದ ಇಳಿಸಿದರೂ, ಸಿಂಹಾಸನವನ್ನು ಅಲ್ಲೇ ಬಿಡುವ ಮೂಲಕ ಬಹುದೊಡ್ಡ ತಪ್ಪು ಮಾಡಿದರು. ನಮ್ಮಿಂದ ಚುನಾಯಿತರಾದವರು ಆ ಸಿಂಹಾಸನದಲ್ಲಿ ಕೂರುವ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಸದ್ಯದ ರಾಜಕಾರಣ ತಲುಪಿರುವ ಹಂತವನ್ನು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿಷಾದದದಿಂದ ವಿವರಿಸಿದ್ದು ಹೀಗೆ.
ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಬರೆದಿರುವ ನಂಜನಗೂಡು ಉಪಚುನಾವಣೆ ಕುರಿತಾದ ಪುಸ್ತಕ "ಸ್ವಾಭಿಮಾನ ರಾಜಕಾರಣದ ಹಿನ್ನೆಲೆ ನಂಜನಗೂಡು ವಿಧಾನಸಭೆ ಉಪಚುನಾವಣೆ ವಿಶ್ಲೇಷಣೆ" ಪುಸ್ತಕವನ್ನು ಬುಧವಾರ ಮೈಸೂರಿನಲ್ಲಿ ಬಿಡುಗಡೆ ಮಾಡಿದ ಸಂತೋಷ್ ಹೆಗ್ಡೆ ಮಾತನಾಡಿದ್ದಾರೆ.
ಉಪಚುನಾವಣೆ ಕಹಿ ಅನುಭವ ಬರೆಯುತ್ತಿದ್ದಾರೆ ಶ್ರೀನಿವಾಸ ಪ್ರಸಾದ್!
ಚುನಾವಣೆಗಳಲ್ಲಿ ಹಣದ ದುರ್ಬಳಕೆಯಾಗುತ್ತಿದ್ದರೂ ಆ ಬಗ್ಗೆ ಎಲ್ಲಿಯೂ ದಾಖಲೆಗಳಿರಲಿಲ್ಲ. ಆದರೆ ನಂಜನಗೂಡು ಉಪಚುನಾವಣೆಯಲ್ಲಿ ಹಣ ದುರ್ಬಳಕೆ ಬಗ್ಗೆ ಶ್ರೀನಿವಾಸ್ ಪ್ರಸಾದ್ ಬರೆದಿರುವ ಕೃತಿಯಲ್ಲಿ ದಾಖಲೆ ಸ್ಪಷ್ಪವಾಗಿದೆ. ಸಂವಿಧಾನ ರಚನೆ ವೇಳೆಯಲ್ಲಿ ಪ್ರಜಾಪ್ರಭುತ್ವದ ಅರ್ಥ, ಜನರಿಂದ ಜನರಿಗಾಗಿ ಅಂತ ಇತ್ತು. ಆದರೆ ಈಗ ಕೆಲವರಿಂದ, ಕೆಲವರಿಗಾಗಿ ಮಾತ್ರ ಮೀಸಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವಿ.ಶ್ರೀನಿವಾಸ್ ಪ್ರಸಾದ್ ಅವರ ಪುಸ್ತಕದಲ್ಲಿನ ಕುತೂಹಲ ಅಂಶಗಳನ್ನು ಇಲ್ಲಿ ನೀಡಲಾಗಿದೆ:
ಎಚ್.ಸಿ.ಮಹದೇವಪ್ಪ ಅಧಿಕಾರಕ್ಕಾಗಿ ಓಲೈಕೆ
ತಳಸಮುದಾಯದ ಹಿನ್ನೆಲೆಯಿಂದ ಬಂದ ಎಚ್.ಸಿ.ಮಹದೇವಪ್ಪ ಮತ್ತು ಆರ್.ಧ್ರುವನಾರಾಯಣ ರಾಜಕೀಯವಾಗಿ ಮೇಲೆ ಬರುತ್ತಿದ್ದಂತೆಯೇ ಅಧಿಕಾರಕ್ಕಾಗಿ ಸಿದ್ದರಾಮಯ್ಯ ಅವರ ಓಲೈಕೆ ಮಾಡುವ ಭರದಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡಿದ್ದಾರೆ. 2004ರ ವಿಧಾನಸಭಾ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಆರ್.ಕೆ ಧ್ರುವನಾರಾಯಣ ಕೇವಲ 1 ಓಟಿನಿಂದ ನೀವು ಜಯಗಳಿಸಿದ್ದಿರಿ. ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಆದಾಗ ಸಂತೇಮರಹಳ್ಳಿ ಕ್ಷೇತವು 3 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿ ಹೋಗಿ, ನಿಮಗೆ ಯಾವ ಕ್ಷೇತ್ರವೂ ಸಿಗದೇ ನಿರಾಶೆಗೊಂಡಿದ್ದಿರಿ. ಪದೇ ಪದೇ ನನ್ನ ಬಳಿ ಬಂದು ಅವಕಾಶಕ್ಕಾಗಿ ಕೇಳಿಕೊಳ್ಳುತ್ತಿದ್ದಿರಿ. 2008ರ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಸಹಾಯ ಮಾಡಬೇಕೆಂದು ಕೇಳಿಕೊಂಡಿರಿ. ಆಗ ನಾನು ನಿಮಗೆ ಸಹಾಯ ಮಾಡಲಿಲ್ಲವೇ?
ಸಿದ್ದರಾಮಯ್ಯ, ರಾಜಕೀಯ ಜೀವನದಲ್ಲಿ ಯಾರ ಮುಂದೆಯೂ ಕೈ ಜೋಡಿಸಿಲ್ಲ
ನನ್ನ ರಾಜಕೀಯ ಜೀವನದಲ್ಲಿ ಅಧಿಕಾರಕ್ಕಾಗಿ ಎಂದೂ, ಯಾರ ಬಳಿಯೂ ಕೈಜೋಡಿಸಿ ನಿಂತವನಲ್ಲ. ಸ್ವಪ್ರತಿಷ್ಠೆ ಮತ್ತು ಸರ್ವಾಧಿಕಾರಿ ಧೋರಣೆ ಹೊಂದಿರುವ ಸಿದ್ದರಾಮಯ್ಯ ಅವರಿಗೆ ಇದೆಲ್ಲ ಹೇಗೆ ಅರ್ಥವಾಗುತ್ತದೆ? ಕೇವಲ ನಂಜನಗೂಡು ಕ್ಷೇತಕ್ಕೆ ಮಾತ್ರ ಸೀಮಿತಗೊಳಿಸಿ 500 ಕೋಟಿ ರುಪಾಯಿ ಬೃಹತ್ ಮೊತ್ತ ಮಂಜೂರು ಮಾ,ಡಿ ಕ್ಷೇತ್ರದ ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನದಲ್ಲಿ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಗಲಿರುಳು ಶ್ರಮಿಸಿದರು.
ವಿಶ್ವಾಸಪೂರ್ವಕವಾಗಿ ಮನೆಗೆ ಬಂದರು ಯಡಿಯೂರಪ್ಪ, ಕುಮಾರಸ್ವಾಮಿ
ಕಾಂಗ್ರೆಸ್ ಪಕ್ಷಕ್ಕೆ ನಾನು ರಾಜೀನಾಮೆ ಕೊಟ್ಟ ಸುದ್ದಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಮತ್ತು ಜಾ.ದಳ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಪತ್ಯೇಕವಾಗಿ ಬೆಂಗಳೂರಿನ ನನ್ನ ಮನೆಗೆ ಬಂದು ವಿಶ್ವಾಸಪೂರ್ವಕವಾಗಿ ಅವರ ಪಕ್ಷವನ್ನು ಸೇರುವಂತೆ ಆಹ್ವಾನಿಸಿದರು.
ಸಿದ್ದರಾಮಯ್ಯ ಅವರು ಹೇಳಿದ್ದ ಮಾತನ್ನು ನೆನಪಿಸಿಕೊಳ್ಳಬೇಕು
ನನ್ನ ರಾಜಕೀಯ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಹಾಗೂ ಕ್ಷೇತ್ರದ ಮತದಾರರ ಅಭಿಪ್ರಾಯ ಪಡೆಯಲು ನಂಜನಗೂಡಿನಲ್ಲಿ 2016ರ ನವೆಂಬರ್ 8ರಂದು ಬೃಹತ್ ಸ್ವಾಭಿಮಾನಿ ಸಮಾವೇಶ ಏರ್ಪಡಿಸಿದೆ. ನನ್ನ ನಿರೀಕ್ಷೆಗೂ ಮೀರಿ, 10 ಸಾವಿರದಷ್ಟು ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ನಂಜನಗೂಡು ಉಪ ಚುನಾವಣೆಗೆ ನನ್ನ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳು ಯಾರೂ ಸಿಗಲೇ ಇಲ್ಲ. 'ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದ ಮಾತನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿದೆ.
ದೇವೇಗೌಡರಿಗೆ ಅವಮಾನ ಮಾಡಿದ್ದ ಸಿದ್ದರಾಮಯ್ಯರನ್ನು ಬೆಂಬಲಿಸಿದರು
ಈ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸದೆ ಕಾಂಗ್ರೆಸ್ ಗೆಲುವಿಗೆ ಕಾರಣಕರ್ತರಾದವರು ಎಚ್.ಡಿ.ದೇವೇಗೌಡರು. ನಾನು ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ನನಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿದ್ದ ಅವರು, ನಾನು ಬಿಜೆಪಿ ಅಭ್ಯರ್ಥಿ ಆಗುತ್ತಿದ್ದಂತೆ ತಮ್ಮ ನಿಲುವನ್ನು ಬದಲಾಯಿಸಿದರು. ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗುವವರೆಗೂ ಎಚ್.ಡಿ.ದೇವೇಗೌಡರ ಸಹಕಾರ ಮತ್ತು ಮಾರ್ಗದರ್ಶನದಿಂದಲೇ ಬೆಳೆದರು. ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನಿಂದ ಉಚ್ಚಾಟಿಸಿದಾಗ ದೇವೇಗೌಡರಿಗೂ ಅವಮಾನಕರವಾದ ರೀತಿಯಲ್ಲಿ ಮಾತನಾಡಿದ್ದರು.
ದಲಿತ ಸಂಘಟನೆಗಳ ದುರುಪಯೋಗ
ಕಾಂಗ್ರೆಸ್ ಪಕ್ಷಕ್ಕೆ ನಾನು ರಾಜೀನಾಮೆ ನೀಡಿದ ನಂತರ ಮತ್ತು ಬಿಜೆಪಿ ಸೇರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಚ್.ಸಿ.ಮಹದೇವಪ್ಪ ಅವರು ನನ್ನ ವಿರುದ್ಧ ದಲಿತ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡಿದರು. ನನ್ನ ಹೆಸರನ್ನು ಪ್ರಸ್ತಾಪಿಸದೆ ದಲಿತರಿಗೆ ಮಾರಕವಾಗಿರುವ ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುತ್ತಿರುವುದು ನಮ್ಮ ಸಮಕಾಲೀನ ಸಂದರ್ಭದ ದುರಂತ ಎಂದು ನನ್ನನ್ನು ಅಪಪ್ರಚಾರಕ್ಕೆ ಗುರಿಪಡಿಸುವ ಪ್ರಯತ್ನಗಳನ್ನು ನಡೆಸಿದರು.
ಉಪ ಚುನಾವಣೆ ಫಲಿತಾಂಶದ ಪಾಠವೇನು?
ಇಷ್ಟೆಲ್ಲಾ ಪ್ರಯತ್ನ ಮಾಡಿದರೂ ಕಾಂಗ್ರೆಸ್ ಅಭ್ಯರ್ಥಿ 86,212 ಮತ ಪಡೆದರು. ಅದರಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇದ್ದುದರಿಂದ ಆ ಪಕ್ಷಕ್ಕೆ ಬರುತ್ತಿದ್ದ 41,843 (2013ರ ಚುನಾವಣೆಯಲ್ಲಿ ಪಡೆದದ್ದು) ಮತಗಳನ್ನು ಕಳೆದರೆ ಕಾಂಗ್ರೆಸ್ ಗಳಿಸಿದ್ದು 44,369 ಮತಗಳನ್ನು ಮಾತ್ರ. ಪ್ರಜ್ಞಾವಂತ ಪ್ರಜೆಗಳಿಂದ ಮಾತ್ರವೇ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಚುನಾವಣೆಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚು ಗಂಡಾಂತರ ಉಂಟು ಮಾಡುವ, ನೈತಿಕತೆಗೆ ಧಕ್ಕೆ ತರುವ ಹಲವು ಚಟುವಟಿಕೆಗಳು ನಡೆಯುತ್ತವೆ.