ಭೂ ವಿವಾದ: ಸುಪ್ರೀಂ ಮೆಟ್ಟಿಲೇರಿದ ಮೈಸೂರು ಜಿಲ್ಲಾಡಳಿತ
ಮೈಸೂರು, ಫೆಬ್ರವರಿ 21 : ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ 23 ಎಕರೆ ವಿವಾದಾತ್ಮಕ ಭೂಮಿಯ ಮೂಲ ದಾಖಲೆಗಳನ್ನು ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ನೇತೃತ್ವದ ಅಧಿಕಾರಿಗಳ ತಂಡ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಭೂ ವಿವಾದದ ವಿಚಾರಣೆ ಸಂದರ್ಭದಲ್ಲಿ ವಿವಾದಾತ್ಮಕ ಭೂಮಿಯ ಮೂಲ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲವಾಗಿರುವ ಕರ್ನಾಟಕ ಸರ್ಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯ ಫೆ.12ರಂದು ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ನೇತೃತ್ವದಲ್ಲಿ ದಿಲ್ಲಿಗೆ ತೆರಳಿದ್ದ ಅಧಿಕಾರಿಗಳ ತಂಡ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದೆ. ತಹಸಿಲ್ದಾರ್ ಟಿ.ರಮೇಶ್ ಬಾಬು, ವಿವಿ ಕುಲಸಚಿವರಾದ ಡಿ.ಭಾರತಿ ಮತ್ತು ತಹಸಿಲ್ದಾರ್ ಕಚೇರಿಯ ಕೇಸ್ ವರ್ಕರ್ ಹಾಗೂ ಜಿಲ್ಲಾಧಿಕಾರಿ ಜತೆ ದಿಲ್ಲಿಗೆ ತೆರಳಿದ್ದಾರೆ.
ಏನಿದು ವಿವಾದ?
ಸರ್ವೆ ನಂ 4ರ 1600 ಎಕರೆ ಪೈಕಿ 23 ಎಕರೆ ಪದೇಶವನ್ನು 1965ರಲ್ಲಿ ಲೋಗೋಪೆಡಿಕ್ಸ್ ಸಂಸ್ಥೆ ಸ್ಥಾಪಿಸಲು ರಾಷ್ಟ್ರಪತಿ ಅವರ ಹೆಸರಿಗೆ ಅಂದಿನ ಮೈಸೂರು ಮಹಾರಾಜರು ದಾನ ನೀಡಿದ್ದರು. ಆದರೆ, ದಡದಳ್ಳಿಯ ರಾಜಯ್ಯ ಮತ್ತು ನಂಜಯ್ಯ ಎಂಬವರು ಕರ್ನಾಟಕ ಭೂ ಸುಧಾರಣಾ ಕಾಯಿದೆ-1961 ಜಾರಿಗೊಂಡ ಬಳಿಕ 1974ರಲ್ಲಿ ಮೈಸೂರು ತಾಲ್ಲೂಕು ಕುರಬಾರಹಳ್ಳಿ ಗ್ರಾಮದ ಸರ್ವೆ ನಂ.4ರಲ್ಲಿನ 8 ಎಕರೆ ಭೂಮಿ 1950ರಿಂದ ತಮ್ಮ ಸ್ವಾಧೀನದಲ್ಲಿದ್ದು, ಇಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ. ಇದನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದ್ದರು. ಇದು ವಿವಾದಕ್ಕೆಡೆ ಮಾಡಿತ್ತು.
ರಾಜಯ್ಯ ಮತ್ತು ನಂಜಯ್ಯ 2004ರಲ್ಲಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ನಂಬಿಸಿದ್ದರು. ಹಾಗಾಗಿ ನ್ಯಾಯಾಲಯ ಅರ್ಜಿದಾರರ ಪರ ತೀರ್ಪು ನೀಡಿತ್ತು.

ನಂತರ ಮೈಸೂರು ವಿವಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ಈ ಮಧ್ಯೆ 1960ರಲ್ಲಿ ರಾಷ್ಟ್ರಪತಿಗಳ ಸೂಚನೆ ಮೇರೆಗೆ ಮೈಸೂರು ವಿವಿಗೆ ಸೇರಿದ ಭೂಮಿಯ ಕೆಲವು ಭಾಗವನ್ನು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಅಷ್ಟೇ ಪ್ರಮಾಣದ ಭೂಮಿಗೆ ಪರ್ಯಾಯವಾಗಿ ನೀಡಲಾಗಿತ್ತು. ಈ ಬಗ್ಗೆ ಎರಡೂ ಸಂಸ್ಥೆ ನಡುವೆ ಒಪ್ಪಂದವಾಗಿ ಭೂದಾಖಲೆಗಳನ್ನು ಹಸ್ತಾಂತರ ಮಾಡಿಕೊಳ್ಳಲಾಗಿತ್ತು. ಕುರಬಾರಹಳ್ಳಿ ಸರ್ವೆ ನಂ.4ರಲ್ಲಿ 23 ಎಕರೆ ಜಾಗ ನಿಗದಿ ಮಾಡಲಾಗಿತ್ತು.
ಹೊರವಲಯ ಎಂಬ ಕಾರಣಕ್ಕೆ ಮೈಸೂರು ವಿವಿಗೆ ಸೇರಿದ ಜಾಗದಲ್ಲಿ ಬದಲಿ ಸ್ಥಳ ಪಡೆದು ಕಟ್ಟಡ ಕಟ್ಟಿತು. ಕರಾರಿನಂತೆ ಸರ್ವೆ ನಂ.4ರ ಜಾಗವನ್ನು ಮೈಸೂರು ವಿವಿಗೆ ಹಸ್ತಾಂತರಿಸಿತ್ತು. ಆದರೆ ನಕಲಿ ದಾಖಲೆ ಸೃಷ್ಟಿಸಿ ಉಚ್ಚ ನ್ಯಾಯಾಲಯವನ್ನೇ ಮರಳು ಮಾಡಿ ಮೈಸೂರು ವಿವಿಯ 8 ಎಕರೆ ಜಾಗವನ್ನು ಲಪಟಾಯಿಸಿದ್ದರು. ಬಳಿಕ ವಿವಿ ಈ ಇಬ್ಬರು ವ್ಯಕ್ತಿಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೇಟ್ಟಿಲೇರಿತು.
ಈ ಹಿನ್ನೆಲೆಯಲ್ಲಿ ಪೂರಕ ದಾಖಲಾತಿಗಳೊಂದಿಗೆ ಕಂದಾಯ ಕಾರ್ಯದರ್ಶಿಗಳ ಪರವಾಗಿ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು, ದಿಲ್ಲಿಗೆ ತೆರಳಿ ಮೂಲ ದಾಖಲೆಗಳನ್ನು ಸಲ್ಲಿಸಿದ್ದಾರೆ.












Click it and Unblock the Notifications