ಪಾಕ್ ಮೇಲೆ ದಾಳಿ ಬೇಡ ಎಂದಿತ್ತು ಯುಪಿಎ ಸರ್ಕಾರ: ವಾಯುಪಡೆ ಮಾಜಿ ಮುಖ್ಯಸ್ಥ
ಮುಂಬೈ, ಡಿಸೆಂಬರ್ 28: ಮುಂಬೈನಲ್ಲಿ ಪಾಕಿಸ್ತಾನದಿಂದ ಬಂದ ಉಗ್ರರು ನಡೆಸಿದ್ದ 26/11ರ ಭೀಕರ ದಾಳಿಗೆ ಪ್ರತೀಕಾರವಾಗಿ ದಾಳಿ ನಡೆಸೋಣ ಎಂಬ ಭಾರತೀಯ ವಾಯುಪಡೆಯ (ಐಎಎಫ್) ಪ್ರಸ್ತಾವನೆಯನ್ನು ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ತಿರಸ್ಕರಿಸಿತ್ತು ಎಂದು ಐಎಎಫ್ ಮಾಜಿ ಮುಖ್ಯಸ್ಥ ಬಿಎಸ್ ಧನೋವಾ ಶುಕ್ರವಾರ ಆರೋಪಿಸಿದರು.
ವಿದೇಶಿ ನೆಲದ ಮೇಲೆ ದಾಳಿ ನಡೆಸುವುದು ರಾಜಕೀಯ ನಿರ್ಧಾರವಾಗಿದೆ. ಆಗಿನ ಕಾಂಗ್ರೆಸ್ ಸರ್ಕಾರವು ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸದೆ ಇರಲು ನಿರ್ಧರಿಸಿತ್ತು ಎಂದು ಹೇಳಿದರು.
ಮುಂಬೈನ ಟೆಕ್ನೋವಾಂಜಾದಲ್ಲಿನ ವಿಜೆಟಿಐ ವಾರ್ಷಿಕ ಉತ್ಸವದಲ್ಲಿ ಮಾತನಾಡಿದ ಧನೋವಾ, ಪಾಕಿಸ್ತಾನದಲ್ಲಿ ಉಗ್ರರ ಶಿಬಿರಗಳು ಎಲ್ಲೆಲ್ಲಿ ಇವೆ ಎಂಬುದು ಐಎಎಫ್ಗೆ ತಿಳಿದಿತ್ತು. ಅದರ ಮೇಲೆ ಬಾಂಬ್ ದಾಳಿ ನಡೆಸಲು ಕೂಡ ಸಿದ್ಧವಾಗಿತ್ತು. ಆದರೆ ದಾಳಿ ನಡೆಸಬೇಕೇ ಅಥವಾ ಬೇಡವೇ ಎನ್ನುವುದು ರಾಜಕೀಯ ನಿರ್ಧಾರವಾಗಿರುತ್ತದೆ ಎಂದು ಅವರು ಹೇಳಿದರು.

2001ರ ಡಿಸೆಂಬರ್ನಲ್ಲಿ ಸಂಸತ್ ಮೇಲೆ ದಾಳಿ ನಡೆದಾಗಲೂ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿಗಳನ್ನು ನಡೆಸುವ ಪ್ರಸ್ತಾಪವನ್ನು ಐಎಎಫ್ ಮುಂದಿರಿಸಿತ್ತು. ಪಾಕಿಸ್ತಾನವು ಭಾರತದಿಂದ ತನಗೆ ಬೆದರಿಕೆ ಇದೆ ಎಂದೇ ಯಾವಾಗಲೂ ಪ್ರತಿಪಾದಿಸಲು ಪ್ರಯತ್ನಿಸುತ್ತದೆ ಎಂದರು.
ಪಾಕಿಸ್ತಾನವು ಶಾಂತಿ ಸ್ಥಾಪನೆಯ ಪ್ರಯತ್ನಕ್ಕೆ ಮುಂದಾದರೆ ಅದು ಅನೇಕ ಲಾಭದ ಅಂಶಗಳನ್ನು ಕಳೆದುಕೊಳ್ಳುತ್ತದೆ. ಕಾಶ್ಮೀರದಲ್ಲಿನ ಕುದಿಯನ್ನು ಶಮನಗೊಳಿಸದೆ ಅದು ಮತ್ತಷ್ಟು ಉರಿಯುತ್ತಲೇ ಇರುವಂತೆ ಅದು ನೋಡಿಕೊಳ್ಳುತ್ತದೆ. ಪಾಕಿಸ್ತಾನವು ಯುದ್ಧದ ತಂತ್ರಗಳಲ್ಲಿ ಮಗ್ನವಾಗಿರುತ್ತದೆ ಮತ್ತು ದಾಳಿ ನಡೆಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.
ಐಎಎಫ್ ಯಾವುದೇ ರೀತಿಯ ಭೂ, ವಾಯು ಅಥವಾ ಜಲ ಯುದ್ಧಗಳನ್ನು ಎದುರಿಸಲು ಸದಾ ಸನ್ನದ್ಧವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications