ಮಹಾರಾಷ್ಟ್ರದಲ್ಲಿ ಗರಿಷ್ಠ ಮಟ್ಟ ತಲುಪಿದ ತಾಪಮಾನ, ಜನರ ಜೀವಕ್ಕೆ ಕುತ್ತು
ಪುಣೆ, ಮೇ 30: ಮುಂಗಾರು ವಿಳಂಬವಾಗುತ್ತಿದ್ದು, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಬಿಸಿಲ ಧಗೆ ಹೆಚ್ಚಾಗಿದೆ. ಜನರು ಸಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಗರಿಷ್ಠ ಉಷ್ಣಾಂಶ 48 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ.
ಇದೇ ರೀತಿ ಏರಿಕೆಯಾಗುತ್ತಾ ಹೋದರೆ ಮಂದಿ, ಪ್ರಾಣಿಗಳೂ ಕೂಡ ಬದುಕುವುದು ಕಷ್ಟವಾಗುತ್ತದೆ, ನೀರಿನ ಅಭಾವವೂ ಕೂಡ ತುಂಬಾ ಕಾಡುತ್ತಿದೆ. ಬ್ರಹ್ಮಪುರಿಯಲ್ಲಿ 47.5 ಡಿಗ್ರಿ ಸೆಲ್ಸಿಯಸ್, ಅಮರಾವತಿಯಲ್ಲಿ 46.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಚಂದ್ರಾಪುರವು ವಿಶ್ವದ ನಾಲ್ಕನೇ ಬಿಸಿಲ ನಗರ ಎಂದು ಕರೆಸಿಕೊಂಡಿತ್ತು. 2018 ರಲ್ಲೂ 47.3 ಡಿಗ್ರಿ ಸೆಲ್ಸಿಯಸ್ನಷ್ಟು ಗರಿಷ್ಠ ತಾಪಮಾನ ದಾಖಲಾಗಿತ್ತು. ಇನ್ನು ಕರ್ನಾಟಕದ ಕಲಬುರಗಿಯಲ್ಲಿ 44.3 ಡಿಗ್ರಿ ಸೆಲ್ಸಿಯಸ್ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ.

ಕರ್ನಾಟಕದ ಕಲಬುರಗಿ ಹಾಗೂ ಯಾದಗಿರಿಯಲ್ಲಿ ಬಿಸಿಲ ಧಗೆ ಹೆಚ್ಚಾಗಿರುವ ಪರಿಣಾಮ ಬೇಸಿಗೆ ರಜೆಯನ್ನೂ ಕೂಡ ಜೂನ್ 15ರವರೆಗೆ ವಿಸ್ತರಿಸಲಾಗಿದೆ.
ವಿಜಯವಾಡ, ಕರ್ನಾಟಕ, ದೆಹಲಿಯ ಕೆಲವು ಪ್ರದೇಶಗಳಲ್ಲಿ ಮಾತ್ರ ಮುಂಗಾರು ಪೂರ್ವ ಮಳೆಯಾಗಿದೆ. ಇನ್ನುಳಿದ ಕಡೆಗಳಲ್ಲಿ ಬಿಸಿಲ ಧಗೆ ಮುಂದುವರೆದು ಜನರ ಜೀವಕ್ಕೆ ಕುತ್ತು ತಂದಿದೆ.
ಮಂಡ್ಯದಲ್ಲಿ 5 ಸೆಂ.ಮೀ, ಚಾಮರಾಜನಗರದ ಯೆಳಂದೂರಿನಲ್ಲಿ 4 ಸೆಂ.ಮೀ, ಮಳವಳ್ಳಿ, ಮದ್ದೂರು, ಮೈಸೂರು, ಟಿ ನರಸೀಪುರ, ಚಿತ್ರದುರ್ಗ, ಚಿಕ್ಕನಹಳ್ಳಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಹಾಸನ, ಎಚ್ಡಿ ಕೋಟೆ, ಶ್ರೀರಂಗಪಟ್ಟಣ, ಶಿರಾ, ಪನ್ನಂಪೇಟೆ, ಕೊಟ್ಟಿಗೆಹಾರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.












Click it and Unblock the Notifications