ಸರ್ಕಾರ ಉರುಳಿಸಲು ದಂಗೆಗೆ ಸಂಚು: ಸ್ಟಾನ್ ಸ್ವಾಮಿಗೆ ಜಾಮೀನು ನಿರಾಕರಣೆ
ಮುಂಬೈ, ಮಾರ್ಚ್ 23: ಎಲ್ಗರ್ ಪರಿಷದ್- ಮಾವೊವಾದಿ ನಂಟಿನ ಪ್ರಕರಣದಲ್ಲಿ 83 ವರ್ಷದ ಹೋರಾಟಗಾರ ಸ್ಟಾನ್ ಸ್ವಾಮಿಗೆ ವಿಶೇಷ ಎನ್ಐಎ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ದೇಶದಲ್ಲಿ ಗಲಭೆ ಸೃಷ್ಟಿಸಲು ಮತ್ತು ಸರ್ಕಾರವನ್ನು ಉರುಳಿಸಲು ನಿಷೇಧಿತ ಮಾವೊವಾದಿ ಸಂಘಟನೆಯ ಸದಸ್ಯರ ಜತೆಗೆ ಸ್ಟಾನ್ ಸ್ವಾಮಿ ಗಂಭೀರ ಸಂಚಿನಲ್ಲಿ ತೊಡಗಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಕೋರ್ಟ್ ಹೇಳಿದೆ.
ವಿಶೇಷ ನ್ಯಾಯಾಧೀಶ ಡಿಇ ಕೊಥಾಲಿಕರ್ ಅವರು ಸ್ಟಾನ್ ಸ್ವಾಮಿಯ ಜಾಮೀನು ಅರ್ಜಿಯನ್ನು ಸೋಮವಾರ ವಜಾಗೊಳಿಸಿದರು. ದಾಖಲೆಗಳ ಪ್ರಕಾರ ಸ್ಟಾನ್ ಸ್ವಾಮಿ ನಿಷೇಧಿತ ಮಾವೋವಾದಿ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಅವರು ತೀರ್ಪಿನಲ್ಲಿ ಹೇಳಿದರು.
'ಸ್ಟಾನ್ ಸ್ವಾಮಿ ಮತ್ತು ಅವರ ಸಹ ಆರೋಪಿಗಳ ನಡುವೆ 140 ಇ-ಮೇಲ್ಗಳು ರವಾನೆಯಾಗಿವೆ. ಸ್ವಾಮಿ ಹಾಗೂ ಇತರರು ತಮ್ಮ ಸಂವಹನದಲ್ಲಿ 'ಕಾಮ್ರೇಡ್' ಎಂದು ಉಲ್ಲೇಖಿಸಿದ್ದಾರೆ. ಮಾವೋವಾದಿ ಚಟುವಟಿಕೆಗಳನ್ನು ಮುಂದುವರಿಸಿದ್ದಕ್ಕಾಗಿ ಸ್ವಾಮಿಗೆ 'ಕಾಮ್ರೇಡ್ ಮೋಹನ್' ಕಡೆಯಿಂದ ಎಂಟು ಲಕ್ಷ ರೂಪಾಯಿ ಸಂದಾಯವಾಗಿದೆ ಎಂದು ಎನ್ಐಎ ವರದಿಯಲ್ಲಿ ತಿಳಿಸಿದೆ.

'ಅರ್ಜಿದಾರ ಹಾಗೂ ನಿಷೇಧಿತ ಸಂಘಟನೆಯ ಇತರೆ ಸದಸ್ಯರು ತೋಳ್ಬಲವನ್ನು ಬಳಸಿಕೊಂಡು ರಾಜಕಿಯವಾಗಿ ಸರ್ಕಾರವನ್ನು ಉರುಳಿಸಲು ಹಾಗೂ ಇಡೀ ದೇಶಾದ್ಯಂತ ಉದ್ವಿಗ್ನತೆ ಸೃಷ್ಟಿಸಲು ಗಂಭೀರ ಸಂಚು ರೂಪಿಸಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ' ಎಂದು ನ್ಯಾಯಾಧೀಶರು ಹೇಳಿದರು.
ಸ್ಟಾನ್ ಸ್ವಾಮಿಯನ್ನು 2020ರ ಅಕ್ಟೋಬರ್ನಲ್ಲಿ ಬಂಧಿಸಲಾಗಿತ್ತು. ಅಂದಿನಿಂದಲೂ ಅವರು ನವಿ ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಲ್ಲಿದ್ದಾರೆ.












Click it and Unblock the Notifications