ಸೊಹ್ರಾಬುದ್ದಿನ್ ಕೇಸ್ : ಸಿಬಿಐನ ಬೆವರಿಳಿಸಿದ ವಿಶೇಷ ನ್ಯಾಯಾಧೀಶ
ಮುಂಬೈ, ಡಿಸೆಂಬರ್ 04 : ಸೊಹ್ರಾಬುದ್ದಿನ್ ಅನ್ವರ್ ಶೇಖ್ ಮತ್ತು ತುಳಸಿರಾಮ್ ಪ್ರಜಾಪತಿ ಎನ್ಕೌಂಟರ್ ನಕಲಿ ಎಂದು ಹೇಳಿ, ಸಮಗ್ರ ತನಿಖೆ ನಡೆಸದೆ ಎರಡು ಗಂಟೆಗಳ ಅಂತಿಮ ವಾದ ಮಂಡಿಸಿ ಕೈತೊಳೆದುಕೊಂಡ ಸಿಬಿಐ ಅನ್ನು ಸಿಬಿಐ ವಿಶೇಷ ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಸಿಬಿಐ ನಡೆಸಿದ ತನಿಖೆಯಲ್ಲಿ ಸಾಕಷ್ಟು ಲೋಪದೋಷಗಳಿರುವುದು ಮಾತ್ರವಲ್ಲ, 2010ರಲ್ಲಿ ತನಿಖೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಮುನ್ನ, ಗುಜರಾತ್ ಉಗ್ರ ನಿಗ್ರಹ ದಳ ಮತ್ತು ಸಿಐಡಿ ನಡೆಸಿದ ತನಿಖೆಗಳಲ್ಲಿ ಕೂಡ ಸಾಕಷ್ಟು ಲೋಪದೋಷಗಳಿರುವುದರ ಬಗ್ಗೆ ನ್ಯಾಯಮೂರ್ತಿ ಎಸ್ ಜೆ ಶರ್ಮಾ ಅವರು ಪಬ್ಲಿಕ್ ಪ್ರಾಸಿಕ್ಯುಟರ್ ಬಿಪಿ ರಾಜು ಅವರನ್ನು ವಿಚಾರಿಸಿದರು.
ಸೊಹ್ರಾಬುದ್ದಿನ್, ಪ್ರಜಾಪತಿ ಎನ್ಕೌಂಟರ್ ನಕಲಿ : ಸಿಬಿಐ ವಾದ ಅಂತಿಮ
ಒಟ್ಟು 210 ಸಾಕ್ಷಿಗಳಲ್ಲಿ 92 ಸಾಕ್ಷಿಗಳು ಪ್ರತಿಕೂಲವಾಗಿವೆ. ಅಷ್ಟು ಮಾತ್ರವಲ್ಲ, ಹತ್ಯೆಯ ಸಂಚು ನಡೆಸಿದ ಆರೋಪ ಹೊತ್ತಿರುವ ಪ್ರಮುಖ ಆರೋಪಿಗಳಾದ ಅಂದಿನ ಗೃಹ ಖಾತೆ ರಾಜ್ಯ ಸಚಿವ ಅಮಿತ್ ಶಾ, ಅಂದಿನ ಎಟಿಎಸ್ ಮುಖ್ಯಸ್ಥ ಡಿಜಿ ವಂಜಾರಾ, ಅಂದಿನ ಎಟಿಎಸ್ ಡಿವೈಎಸ್ಪಿ ರಾಜಕುಮಾರ್ ಪಾಂಡಿಯನ್ ಮತ್ತು ಉದಯಪುರ ಎಸ್ಪಿ ದಿನೇಶ್ ಎಂಎನ್ ಅವರ ಹೆಸರುಗಳನ್ನು ಪಬ್ಲಿಕ್ ಪ್ರಾಸಿಕ್ಯುಟರ್ ಪ್ರಸ್ತಾಪಿಸದಿರುವುದನ್ನು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಸಾಕ್ಷಿಗಳೇ ತಿರುಗಿಬಿದ್ದಿರುವುದರಿಂದ ಈ ಎಲ್ಲ ಪ್ರಮುಖ ಆರೋಪಿಗಳು ದೋಷಮುಕ್ತರಾಗಿದ್ದಾರೆ.
ಎನ್ಕೌಂಟರ್ ಮಾಡಿ ಸೊಹ್ರಾಬುದ್ದಿನ್ ಹತ್ಯೆ
2005ರ ನವೆಂಬರ್ 26ರಂದು ಮಧ್ಯ ಪ್ರದೇಶದ ಸ್ಥಳೀಯ ರೌಡಿ ಸೊಹ್ರಾಬುದ್ದಿನ್ ಅನ್ವರ್ ಶೇಖ್ ನನ್ನು ಗುಜರಾತ್ ಎಟಿಎಸ್ ಮತ್ತು ರಾಜಸ್ಥಾನದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಎನ್ಕೌಂಟರ್ ಮಾಡಿ ಅಹ್ಮದಾಬಾದ್ ನಲ್ಲಿ ಹತ್ಯೆಗೈದಿದ್ದರು. ಸೊಹ್ರಾಬುದ್ದಿನ್, ಪಾಕಿಸ್ತಾನಿ ಇಂಟಿಲಿಜೆನ್ಸ್ ಏಜೆನ್ಸಿ ಐಎಸ್ಐ ಮತ್ತು ಉಗ್ರ ಸಂಘಟನೆ ಲಷ್ಕರ್-ಇ-ತೈಬಾ ಜೊತೆ ಸಂಪರ್ಕ ಹೊಂದಿದ್ದು, ಪ್ರಮುಖ ರಾಜಕಾರಣಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಬಂದಿದ್ದ ಎಂದು ಎಟಿಎಸ್ ಅಧಿಕಾರಿಗಳು ಆರೋಪಿಸಿದ್ದರು.
ನಕಲಿ ಎನ್ಕೌಂಟರ್ ನಲ್ಲಿ ಶೇಖ್ ಬಲಿ
ಈ ಆರೋಪವನ್ನು ಸಿಬಿಐ ಅಲ್ಲಗಳೆದಿದೆ. ಪ್ರಮುಖ ನಾಯಕರ ಹತ್ಯೆ ಮಾಡಲು ಸಂಚು ಹೂಡಿದ್ದಕ್ಕಾಗಿ ಸೊಹ್ರಾಬುದ್ದಿನ್ ನ ಹತ್ಯೆ ಮಾಡಲಾಗಿಲ್ಲ. ಬದಲಿಗೆ, ಅತ್ಯಂತ ನಿಯೋಜಿತ ಪ್ಲಾನ್ ಪ್ರಕಾರ, ಮಹಾರಾಷ್ಟ್ರದ ಸಾಂಗ್ಲಿಯಿಂದ ಬಸ್ಸಿನಲ್ಲಿ ಹೋಗುತ್ತಿದ್ದಾಗ ತೆಲಂಗಾಣದ ಗಡಿಯಿಂದ ಆತನನ್ನು ಮತ್ತು ಆತನ ಹೆಂಡತಿ ಕೌಸರ್ ಬಿಯನ್ನು ಅಪಹರಿಸಿಕೊಂಡು ಬಂದು, ಮೂರು ದಿನಗಳ ನಂತರ ಅಹ್ಮದಾಬಾದ್ ಬಳಿ ಆತನನ್ನು ನಕಲಿ ಎನ್ಕೌಂಟರ್ ನಲ್ಲಿ ಕೊಲ್ಲಲಾಯಿತು. ಆತನ ಹತ್ಯೆಯ ನಂತರ ಕೌಸರ್ ಬಿ ಕೂಡ ನಾಪತ್ತೆಯಾದಳು.
ಗುಜರಾತ್ ಪೊಲೀಸ್ ಅಧಿಕಾರಿಗಳ ವೈಷಮ್ಯ, ಸೊಹ್ರಾಬುದ್ದೀನ್ ಎನ್ ಕೌಂಟರ್
ಅದೇ ರೀತಿ ಸಹಚರ ಪ್ರಜಾಪತಿ ಹತ್ಯೆ
ಈ ಘಟನೆಗೆ ಸಾಕ್ಷಿಯಾಗಿದ್ದ ಸೊಹ್ರಾಬುದ್ದಿನ್ ನಿಕಟವರ್ತಿ ತುಳಸಿರಾಮ್ ಪ್ರಜಾಪತಿಯನ್ನು ಕೂಡ 2006ರ ಡಿಸೆಂಬರ್ 28ರಂದು ನಕಲಿ ಎನ್ಕೌಂಟರ್ ನಲ್ಲಿ ಹತ್ಯೆಗೈಯಲಾಯಿತು ಎಂದು ಸಿಬಿಐ ತಿಳಿಸಿದೆ. ಆತನನ್ನು 2006ರ ನವೆಂಬರ್ 27ರಂದು ಅಹ್ಮದಾಬಾದ್ ನಿಂದ ಉದಯಪುರ ಸೆಂಟ್ರಲ್ ಜೈಲಿಗೆ ಕರೆತರುತ್ತಿದ್ದಾಗ, ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ಆರೋಪಿಸಿದ್ದರು. ಮರುದಿನ ಬೆಳಿಗ್ಗೆಯೇ, ಅಂದರೆ 2006ರ ನವೆಂಬರ್ 28ರಂದು ನಕಲಿ ಎನ್ಕೌಂಟರ್ ನಲ್ಲಿ ಹತ್ಯೆ ಮಾಡಲಾಯಿತು ಎಂದು ಸಿಬಿಐ ವಾದ ಮಂಡಿಸಿದೆ.
ತನಿಖೆಯಲ್ಲಿ ಲೋಪದೋಷ ಎತ್ತಿಹಿಡಿದ ಜಡ್ಜ್
ಸೊಹ್ರಾಬುದ್ದಿನ್ ಮತ್ತು ಆತನ ಹೆಂಡತಿ ಇರುವ ತಾಣವನ್ನು ಎಟಿಎಸ್ ಚೀಫ್ ಡಿಜಿ ವಂಜಾರಾ ಅವರ ಒತ್ತಾಯಕ್ಕೆ ಮಣಿದು ಪ್ರಜಾಪತಿ ತಿಳಿಸಿದ ಎಂದು ಸಿಬಿಐ ತಿಳಿಸಿದೆ. ಆತ ನೀಡಿದ ಸುಳಿವಿನ ಮೇರೆಗೆ ಸೊಹ್ರಾಬುದ್ದಿನ್ ಮತ್ತು ಆತನ ಹೆಂಡತಿಯನ್ನು ಅಪಹರಿಸಿ ಅಹ್ಮದಾಬಾದಿಗೆ ತರಲಾಯಿತು ಎಂದು ಹೇಳಿದೆ. ಈ ವಿವರಗಳನ್ನು ಎಟಿಎಸ್ ಚೀಫ್ ವಂಜಾರಾ ಅವರಿಗೆ ತುಳಸಿರಾಮ್ ನೀಡಿರುವ ಬಗ್ಗೆ ಏನಾದರೂ ಸಾಕ್ಷ್ಯವಿದೆಯೆ? ಆತ ಸೊಹ್ರಾಬುದ್ದಿನ್ ಜೊತೆ ಪ್ರಯಾಣಿಸುತ್ತಿರಲಿಲ್ಲವಾದರೆ ಆತ ಅಹ್ಮದಾಬಾದ್ ನಿಂದ ಎಲ್ಲಿಗೆ ಹೋಗಿದ್ದ? ಎಂಬ ಪ್ರಶ್ನೆಗಳ ಬಾಣಗಳನ್ನು ನ್ಯಾಯಾಧೀಶರು ಎಸೆದಿದ್ದಾರೆ.
ಸೊಹ್ರಾಬುದ್ದೀನ್ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಸೋದರನ ಹೇಳಿಕೆ
ನ್ಯಾಯಾಧೀಶರ ಪ್ರಶ್ನೆಗೆ ಪಿಪಿ ಬಳಿ ಉತ್ತರವಿಲ್ಲ
ಇದಕ್ಕೆ ಪಬ್ಲಿಕ್ ಪ್ರಾಸಿಕ್ಯುಟರ್ ರಾಜು ಅವರು, ಪೊಲೀಸರೇ ಟಿಕೆಟ್ ಸೃಷ್ಟಿಸಿ ಸೊಹ್ರಾಬುದ್ದಿನ್ ನ ಜೇಬಿನಲ್ಲಿ ಇಟ್ಟು ಎನ್ಕೌಂಟರ್ ನಕಲಿ ಅಲ್ಲ ಎನ್ನುವ ಹಾಗೆ ಪ್ಲಾಟ್ ಮಾಡಿದ್ದಾರೆ ಎಂದು ವಾದಿಸಿದರು. ಸೊಹ್ರಾಬುದ್ದಿನ್ ಬಳಿಯಿದ್ದ ಇತರ ದಾಖಲೆಗಳಿಗೆ ರಕ್ತ ಸೊಂಕಿದ್ದರೂ ಟಿಕೆಟ್ಟಿಗೆ ರಕ್ತದ ಕಲೆ ಅಂಟಿರಲಿಲ್ಲ ಎಂಬುದು ಪ್ರಾಸಿಕ್ಯುಷನ್ ವಾದ. ಟಿಕೆಟ್ ನಕಲಿಯೇ ಆಗಿದ್ದರೆ, ಆ ಟಿಕೆಟ್ ಅನ್ನು ಯಾರು ಸೃಷ್ಟಿಸಿದರು? ಎಂಬ ಪ್ರಶ್ನೆಯನ್ನು ನ್ಯಾಯಾಧೀಶರು ಎಸೆದರು. ನಿಮ್ಮ ಆರೋಪ ಪಟ್ಟಿಯಲ್ಲಿ 38 ಆರೋಪಿಗಳಿದ್ದಾರೆ, ಈ ಬಗ್ಗೆ ಅವರ ವಿಚಾರಣೆ ಮಾಡಲಾಗಿದೆಯಾ, ಅವರಿಂದ ಸರಿಯಾದ ಮಾಹಿತಿ ಸಂಗ್ರಹಿಸಲಾಗಿದೆಯಾ? ಎಂದೂ ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದರು. ಇದಾವುದಕ್ಕೂ ಪಿಪಿ ಬಳಿ ಸೂಕ್ತ ಉತ್ತರವಿರಲಿಲ್ಲ.
ರುಬಾಬುದ್ದಿನ್ ಬಗ್ಗೆ ಪ್ರಸ್ತಾಪವಿರಲಿಲ್ಲ ಏಕೆ?
ಆಗ ಸೊಹ್ರಾಬುದ್ದಿನ್ ನ ಸಹೋದರ ರುಬಾದುದ್ದಿನ್ ಕಥೆಯನ್ನು ಪಬ್ಲಿಕ್ ಪ್ರಾಸಿಕ್ಯುಟರ್ ತೆರೆದಿಟ್ಟರು. ರುಬಾಬುದ್ದಿನ್ ನನ್ನು ತುಳಸಿರಾಮ್ ಉಜ್ಜೈನ್ ಜೈಲಿನಲ್ಲಿ 2006ರಲ್ಲಿ ಭೇಟಿಯಾಗಿದ್ದಾಗ, ಸೊಹ್ರಾಬುದ್ದಿನ್ ಅಪಹರಣವಾದಾಗ ಅವರೊಂದಿಗೆ ತಾನೂ ಇದ್ದೆ ಎಂಬುದನ್ನು ಬಾಯಿಬಿಟ್ಟಿದ್ದನಂತೆ. ಆದರೆ, ಈ ಯಾವ ಸಂಗತಿಯೂ ಸಿಬಿಐ ಪ್ರಕರಣವನ್ನು ತೆಗೆದುಕೊಳ್ಳುವವರೆಗೆ ಪ್ರಸ್ತಾಪವಾಗಿರಲೇ ಇಲ್ಲ ಎಂದು ನ್ಯಾಯಾಧೀಶರು ಮತ್ತೆ ಪ್ರಶ್ನಿಸಿದರು. ರುಬಾಬುದ್ದಿನ್ ಸುಪ್ರೀಂ ಕೋರ್ಟಿನಲ್ಲಿ ಹೂಡಿದ ಕೇಸನ್ನೇ ಸಿಬಿಐಗೆ ವರ್ಗಾಯಿಸಲಾಗಿದ್ದರೂ, ರುಬಾಬುದ್ದಿನ್ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದರ ಬಗ್ಗೆ ಯಾವುದೇ ವಿವರಣೆ ಇಲ್ಲ ಎಂದು ರಾಜು ತಿಳಿಸಿದರು.
ಸೊಹ್ರಾಬುದ್ದೀನ್ ಎನ್ ಕೌಂಟರ್: ಅನುಮಾನ ಮೂಡಿಸಿದ ಇನ್ಸ್ಪೆಕ್ಟರ್ ಹೇಳಿಕೆ
ಸೊಹ್ರಾಬುದ್ದಿನ್ ಹತ್ಯೆ ಮಾಡಿದವರು ಯಾರು?
ಇಷ್ಟಲ್ಲದೆ, ಸೊಹ್ರಾಬುದ್ದಿನ್ ಹತ್ಯೆಯ ಪ್ರಮುಖ ಆರೋಪಿ ಧಾಬಿ ಎಂಬುವವರ ಸರ್ವೀಸ್ ರಿವಾಲ್ವರ್ ನಿಂದಲೇ ಗುಂಡು ಹಾರಿದೆ ಎಂದು ವಿಧಿವಿಜ್ಞಾನ ಇಲಾಖೆಯ ಪ್ರಯೋಗದಿಂದ ತಿಳಿದುಬಂದಿದೆ. ಆದರೆ, ಧಾಬಿ ಬಳಿ ಆ ರಿವಾಲ್ವರ್ ಇರಲೇ ಇಲ್ಲ, ಇಲ್ಲಿ ಯಾವುದೇ ಸಂಚೂ ನಡೆದಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದಾರೆ. ಧಾಬಿ ಅವರಿಗೆ ಸೇರಿದ್ದೆನ್ನಲಾದ ರಿವಾಲ್ವರ್ ನ ತಪಾಸಣೆಯನ್ನೂ ಸಿಬಿಐ ಮಾಡಿಲ್ಲ ಎಂದು ಅವರು ವಾದಿಸಿದ್ದಾರೆ. ಅಪಹರಣ, ಸಂಚು, ಹತ್ಯೆಯ ಬಗ್ಗೆ ಯಾವುದೇ ಸಾಕ್ಷ್ಯ ಸಿಬಿಐ ಬಳಿಯಿಲ್ಲ ಎಂದು ವಾದ ಮಂಡಿಸಲಾಗಿದೆ. ಈ ವಾದವಿವಾದ ಇನ್ನೂ ಮುಂದುವರಿಯಲಿದೆ. ಆದರೆ, ಸದ್ಯಕ್ಕೆ ಕಂಡುಬಂದಿರುವ ಲೋಪದೋಷಗಳ ಬಗ್ಗೆ ನಿಖರವಾದ ಮಾಹಿತಿ ಸಿಬಿಐ ಬಳಿ ಇದ್ದಂತಿಲ್ಲ.