ಸಿಂಧುರತ್ನ ದುರಂತ: ಇಬ್ಬರು ಅಧಿಕಾರಿಗಳ ಶವ ಪತ್ತೆ
ಮುಂಬೈ, ಫೆ.27: ಐಎನ್ಎಸ್ ಸಿಂಧುರಕ್ಷಕ್ ಜಲಾಂತರ್ಗಾಮಿ ಅವಘಡದ ಬೆನ್ನಲ್ಲೇ ಇಲ್ಲಿನ ಕರಾವಳಿ ಜಲಾಂತರ್ಗಾಮಿ ಐಎನ್ಎಸ್ ಸಿಂಧುರತ್ನ ಬುಧವಾರ ದುರಂತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ನೌಕಾಪಡೆ ಅಧಿಕಾರಿಗಳ ಶವ ಗುರುವಾರ ಪತ್ತೆಯಾಗಿದೆ. ಈ ಘಟನೆಯಲ್ಲಿ ಗಾಯಗೊಂಡಿರುವ ಏಳು ಅಧಿಕಾರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಭಾರತೀಯ ನೌಕಾಪಡೆಗೆ ಸೇರಿರುವ ಸಿಂಧುರತ್ನದಲ್ಲಿ ಸಂಭವಿಸಿದ ದುರಂತದ ಹೊಣೆ ಹೊತ್ತ ಅಡ್ಮಿರಲ್ ಡಿಕೆ ಜೋಶಿ ಅವರು ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಭಾರತೀಯ ಜಲಸೇನೆಯ ಇನ್ನಷ್ಟು ಹಿರಿಯ ಅಧಿಕಾರಿಗಳು ಹುದ್ದೆ ತೊರೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
''ಬ್ಯಾಟರಿ ಭಾಗದಲ್ಲಿ ದಟ್ಟ ಹೊಗೆ ಕಾಣಿಸಿತು. ಇದರಿಂದಾಗಿ ಐವರು ನೌಕಾ ಸಿಬ್ಬಂದಿ ಉಸಿರಾಟ ತೊಂದರೆಯಿಂದ ಬಳಲಿದರು. ಪ್ರಜ್ಞೆ ಕಳೆದುಕೊಂಡು ಅಸ್ವಸ್ಥರಾಗಿದ್ದ ಸಿಬ್ಬಂದಿಯನ್ನು ಮುಂಬಯಿನ ನೌಕಾ ಆಸ್ಪತ್ರೆ ಐಎನ್ ಎಸ್ ಅಶ್ವಿನಿಗೆ ದಾಖಲಿಸಲಾಗಿದೆ,'' ಎಂದು ನೌಕಾಪಡೆ ತಂಡದ ಸದಸ್ಯರು ಹೇಳಿದ್ದಾರೆ.

ಭಾರತೀಯ ನೌಕಾಪಡೆಗೆ ಸಂಬಂಧಿಸಿದಂತೆ ಇದು 10ನೇ ದುರಂತವಾಗಿದೆ. ಕಳೆದ ಏಳು ತಿಂಗಳ ಅವದಿಯಲ್ಲಿ ಅವಘಡಕ್ಕೀಡಾಗುತ್ತಿರುವ ಮೂರನೇ ಜಲಾಂತರ್ಗಾಮಿ ಇದಾಗಿದೆ. ಮುಂಬಯಿ ಬಂದರು ಸಮೀಪದ ಜಲಾಂತರ್ಗಾಮಿಯ ದಕ್ಷತಾ ಪರೀಕ್ಷೆ ವೇಳೆ ಅವಘಡ ಸಂಭವಿಸಿದೆ. ಇದರಿಂದಾಗಿ ಜಲಾಂತರ್ಗಾಮಿ ಗುಣಮಟ್ಟ ಮತ್ತು ಸುಧಾರಣೆ ಪ್ರಕ್ರಿಯೆಯನ್ನು ಪ್ರಶ್ನಿಸುವಂತಾಗಿದೆ.
ನೌಕಾಪಡೆಯ ಪಶ್ಚಿಮ ಕಮಾಂಡ್ನಲ್ಲಿ ಪದೇಪದೆ ಸಂಭವಿಸುತ್ತಿರುವ ದುರಂತಗಳಿಂದ ನೌಕಾಪಡೆಗೆ ಕಳವಳ ತಂದಿವೆ. ಭಾರತದ ಜಲಾಂತರ್ಗಾಮಿಗಳು ಪದೇಪದೆ ತೊಡಕಿಗೆ ಒಳಗಾಗುತ್ತಿದ್ದು, ಅವುಗಳ ಗುಣಮಟ್ಟ ಮತ್ತು ಸುರಕ್ಷತೆಯ ಆತಂಕ ತಲೆದೋರಿದೆ. ಇತ್ತ ಚೀನಾ ಬಳಿ 45 ಜಲಾಂತರ್ಗಾಮಿಗಳಿದ್ದು, ಇನ್ನೂ 15 ಜಲಾಂತರ್ಗಾಮಿಗಳನ್ನು ಹೊಂದಲು ಪ್ರಯತ್ನ ನಡೆಸಿದೆ.
ಐಎನ್ ಎಸ್ ಸಿಂಧುರತ್ನ: ರಷ್ಯಾ ಮೂಲದ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿಯಾದ ಸಿಂಧುರತ್ನದ ತೂಕ ಸುಮಾರು 3 ಸಾವಿರ ಟನ್. 238 ಅಡಿ ಉದ್ದದ ಇದರ ವೇಗ ನೀರಿನಾಳದಲ್ಲಿ ಗಂಟೆಗೆ 31 ಕಿ.ಮೀ. ದುರಂತ ಸಂಭವಿಸಿದಾಗ ಮುಂಬೈ ಬಂದರಿನಿಂದ 100 ನಾಟಿಕಲ್ ಮೈಲಿಗಳನ್ನು ದಾಟಿತ್ತು ಎಂದು ತಿಳಿದು ಬಂದಿದೆ. ಘಟನೆಯಿಂದ ನಾಪತ್ತೆಯಾಗಿದ್ದ ಡೆಪ್ಯುಟಿ ಎಲೆಕ್ಟ್ರಿಕಲ್ ಅಧಿಕಾರಿ(ಲೆಪ್ಟಿನೆಂಟ್ ಕಮಾಂಡರ್), ನಿಗಾ ಅಧಿಕಾರಿ(ಲೆಪ್ಟಿನೆಂಟ್) ಅವರ ಶವ ಪತ್ತೆಯಾಗಿದೆ.












Click it and Unblock the Notifications