Breaking: ಮಹಾರಾಷ್ಟ್ರದಲ್ಲಿ ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಸಂಜಯ್ ರಾವತ್!
ಮುಂಬೈ, ಜೂನ್ 22: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ನಡುವೆ ವಿಧಾನಸಭೆಯನ್ನೇ ವಿಸರ್ಜನೆ ಮಾಡುವುದರ ಕುರಿತು ಶಿವಸೇನೆ ಮುಖಂಡ ಸಂಜಯ್ ರಾವತ್ ಸುಳಿವು ನೀಡಿದ್ದಾರೆ.
ಮುಂಬೈನಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸಂಪುಟ ಸಭೆ ಕರೆಯಲಾಗಿದೆ. ಬುಧವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಕ್ಯಾಬಿನೆಟ್ ಸಭೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನೊಂದು ಕಡೆಯಲ್ಲಿ ಸರ್ಕಾರದ ವಿರುದ್ಧ ತೊಡೆ ತಟ್ಟಿರುವ ಏಕನಾಥ್ ಶಿಂಧೆ ತಮ್ಮ ಪರ ಬಹುಮತವಿದೆ ಎನ್ನುವ ವಾದ ಮಂಡಿಸಿದ್ದಾರೆ. .
ಶಿವಸೇನೆಯ 55 ಶಾಸಕರ ಪೈಕಿ ಮೂರರ ಎರಡರಷ್ಟು ಶಾಸಕರು ತಮ್ಮ ಬೆಂಬಲಕ್ಕೆ ಇದ್ದಾರೆ ಎಂದು ಏಕನಾಥ್ ಶಿಂಧೆ ಹೇಳುತ್ತಿದ್ದಾರೆ. ಆ ಮೂಲಕ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ರಾಜ್ಯದಲ್ಲಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವ ಬೆಳವಣಿಗೆಗಳ ಮಧ್ಯೆ ಏಕನಾಥ್ ಶಿಂಧೆ ತಮ್ಮ ಬೆಂಬಲಿತ ಶಾಸಕೊಂದಿಗೆ ಗುಜರಾತ್ನಿಂದ ಅಸ್ಸಾಂನ ಗುವಾಹಟಿ ತಲುಪಿದ್ದಾರೆ.

ಏಕನಾಥ್ ಶಿಂಧೆಯನ್ನು ಹಾಡಿ ಹೊಗಳಿದ ರಾವತ್: ಉದ್ಧವ್ ಠಾಕ್ರೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಂಜಯ್ ರಾವತ್ ತಮ್ಮ ಪಕ್ಷದಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದು ಏಕನಾಥ್ ಶಿಂಧೆ ಕಣ್ಣು ಕೆಂಪಾಗಿಸಿದೆ. ಇದರ ಮಧ್ಯೆ ಅಭಿಯಾನ ನಡೆಸುತ್ತಿರುವ ಸಂಜಯ್ ರಾವತ್, ಬಿಕ್ಕಟ್ಟು ಶಮನಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ಏಕನಾಥ್ ಶಿಂಧೆಯನ್ನು ಶಿವಸೇನೆಯ ನಿಷ್ಠಾವಂತ ನಾಯಕ ಎಂದು ಬಣ್ಣಿಸಿದ್ದರು.
ಮಹಾರಾಷ್ಟ್ರದಲ್ಲಿ ಶಾಸಕರ ನಂಬರ್ ಗೇಮ್ ಹೇಗಿದೆ?: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಯಾವ ಪಕ್ಷವು ಎಷ್ಟು ಶಾಸಕರನ್ನು ಹೊಂದಿದೆ ಎಂಬುದರ ಮೇಲೆ ಮುಂದಿನ ಲೆಕ್ಕಾಚಾರಗಳನ್ನು ಹಾಕಿಕೊಳ್ಳಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಶಿವಸೇನೆ 55, NCP 53, ಕಾಂಗ್ರೆಸ್ 44 ಶಾಸಕರನ್ನು ಹೊಂದಿದೆ. ಈ ಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರ ಮಹಾ ವಿಕಾಸ ಅಗಾಢಿಯು ಒಟ್ಟು 152 ಶಾಸಕರ ಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಶಾಸಕರನ್ನು ಹೊಂದಿದ್ದರೆ, ಇತರೆ ಸಣ್ಣ ಪಕ್ಷಗಳು ಮತ್ತು ಪಕ್ಷೇತರ ಶಾಸಕರ ಸಂಖ್ಯೆಯು 29 ಆಗಿದೆ.












Click it and Unblock the Notifications