ಮೋದಿ, ಬಿಜೆಪಿ ವಿರುದ್ಧ ಶಿವಸೇನೆ ಅಸಮಾಧಾನ
ಮುಂಬೈ, ನ.6 : ಅಲ್ಪ ಸಂಖ್ಯಾತರನ್ನು ಓಲೈಸಲು ನರೇಂದ್ರ ಮೋದಿ ಮತ್ತು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಎನ್ ಡಿಎ ಮಿತ್ರಪಕ್ಷ ಶಿವಸೇನೆ ವಾಗ್ದಾಳಿ ನಡೆಸಿದೆ. ಬುಧವಾರ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಅಧಿಕಾರ ಪಡೆಯಲು ಬಿಜೆಪಿ ಮುಸ್ಲಿಂಮರನ್ನು ಓಲೈಸುತ್ತಿದೆ ಎಂದು ಶಿವಸೇನೆ ಗಂಭೀರ ಆರೋಪ ಮಾಡಿದೆ.
ನರೇಂದ್ರ ಮೋದಿ ಮತ್ತು ಬಿಜೆಪಿಯ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡೇ ಶಿವಸೇನೆ ಈ ಲೇಖವನ್ನು ಬರೆದಿದೆ. ರಾಮಮಂದಿರ ನಿರ್ಮಾಣ, ಗುಜರಾತ್ ಗಲಭೆ ಮುಂತಾದ ವಿಚಾರಗಳನ್ನು ಮರೆತಿರುವ ಬಿಜೆಪಿ, ಅಲ್ಪ ಸಂಖ್ಯಾತರನ್ನು ಓಲೈಸಲು ಯತ್ನಿಸುತ್ತಿದೆ ಎಂದು ದೂರಿದೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶಗಳಲ್ಲಿ ಬುರ್ಕಾ ಧರಿಸಿದ ಮಹಿಳೆಯರು ಮೊದಲ ಸಾಲಿನಲ್ಲಿ ಕಾಣುವಂತೆ ಬಿಜೆಪಿ ತಂತ್ರ ರೂಪಿಸುತ್ತಿದೆ. ಪಕ್ಷದಲ್ಲಿ ಪ್ರತಿ ನಾಯಕರು ಅಧಿಕಾರ ಪಡೆಯುವ ಕನಸಿನಿಂದಾಗಿ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಎಂದು ಬರೆದಿದೆ.
ಬಿಜೆಪಿಯವರು ಕಾಂಗ್ರೆಸ್ ವಿರೋಧಿಸುವುದನ್ನು ಮರೆತು ಅಧಿಕಾರ ಪಡೆಯಲು ಅಲ್ಪಸಂಖ್ಯಾತರನ್ನು ಓಲೈಸುತ್ತಿವೆ. ಹಿಂದಿನ ಚುನಾವಣೆಯಲ್ಲಿದ್ದ ರಾಮ ಮಂದಿರ ನಿರ್ಮಾಣ ವಿಚಾರವನ್ನು ಬಿಜೆಪಿ ಮರೆತಿದೆ ಎಂದು ಸಾಮ್ನಾ ಪತ್ರಿಕೆಯ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಮುಂಬರುವ ಲೋಕಸಭೆ ಚುನಾವಣೆಯ ಮತ್ತು ಐದು ರಾಜ್ಯಗಳ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡುವ ಯತ್ನ ನಡೆಸಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಗದ್ದುಗೆ ಮೇಲೆ ಕೂರಿಸಲು ಬಿಜೆಪಿ ಇಂತಹ ಪ್ರಯತ್ನ ನಡೆಸಿದೆ ಎಂದು ಸೇನೆ ದೂರಿದೆ.
ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡಿ ಮತ ಪಡೆಯುವುದು ಬಹಳ ಹಿಂದಿನ ಚುನಾವಣಾ ಕಾರ್ಯತಂತ್ರ. ಆದರೆ, ದೇಶದ ಭವಿಷ್ಯದ ದೃಷ್ಠಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ ಎಂದು ಸೇನೆ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.












Click it and Unblock the Notifications