ಭೀಮಾ-ಕೊರೆಗಾಂವ್ ದಾಳಿಯ ಹಿಂದೆ ರಾಜಕೀಯ ದುರುದ್ದೇಶ: ಶಿವಸೇನೆ
ಮುಂಬೈ, ಜನವರಿ 03: ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿರುವ ಭೀಮಾ-ಕೊರೆಗಾಂವ್ ದಾಳಿಯ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಶಿವಸೇನೆ ದೂರಿದೆ.
ಈ ಗಲಭೆಯನ್ನು ಕೆಲವರು ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವಂತಿದೆ. ಈ ಉತ್ಸವಕ್ಕೆ 200 ವರ್ಷಗಳ ಇತಿಹಾಸವಿದೆ. ಯಾವಾಗಲೂ ಇಂಥ ಘಟನೆ ನಡೆದಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದಂತೆ ಗಲಭೆ ನಡೆಯುತ್ತಿರುವುದಕ್ಕೆ ಕಾರಣ, ಕೆಲವರು ಜಾತಿ ವಿಷಯವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್ ಹೇಳಿದ್ದಾರೆ.
"ಇದು ಖಂಡಿತವಾಗಿಯೂ ಇಲ್ಲಿ ಸರ್ಕಾರದ ದೌರ್ಬಲ್ಯ. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕಾಯ್ದುಕೊಳ್ಳುವುದು ಸರ್ಕಾರದ ಕರ್ತವ್ಯ. ರಾಜ್ಯಕ್ಕೆ ಹೊರ ರಾಜ್ಯದಿಂದ ಬಂದು, ಪ್ರಚೋದನಾಕಾರಿ ಭಾಷಣ ಮಾಡುವವರಿಗೆ ಅನುಮತಿ ನೀಡಿದ್ದೇ ತಪ್ಪು" ಎಂದವರು ಹೇಳಿದ್ದಾರೆ.

"ಯಾವುದೇ ನಾಯಕ, ತನ್ನ ರಾಜ್ಯವಲ್ಲದೆ ಬೇರೆ ರಾಜ್ಯಕ್ಕೆ ಹೋಗಿ ಭಾಷಣ ಮಾಡುವುದಾದರೆ ಕೆಲವು ಶಿಷ್ಟಾಚಾರ ಅನುಸರಿಸಬೇಕು. ಆ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕದಡುವ ಹಕ್ಕು ಆತನಿಗೆ ಎಂದಿಗೂ ಇಲ್ಲ. ಉರಿವ ಬೆಂಕಿಗೆ ತುಪ್ಪ ಸುರಿವ ಕೆಲಸವನ್ನು ಮಾಡಬಾರದು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಭಾರತದ ವಾಣಿಜ್ಯ ರಾಜಧಾನಿಯಾದ ಮಹಾರಾಷ್ಟ್ರದಲ್ಲಿ ಇಂಥ ಘಟನೆ ನಡೆದಿದ್ದು ದುರದೃಷ್ಟ. ಇಂಥ ಘಟನೆಗಳು ಕೇವಲ ಮಹಾರಾಷ್ಟ್ರದ ಹಿತದ ದೃಷ್ಟಿಯಿಂದ ಮಾತ್ರವಲ್ಲ, ಇಡೀ ದೇಶದ ಹಿತದೃಷ್ಟಿಯಿಂದಲೂ ಉತ್ತಮ ಬೆಳವಣಿಗೆಯಲ್ಲ" ಎಂದಿದ್ದಾರೆ.












Click it and Unblock the Notifications