ಸಂಜಯ್ ರಾವತ್ಗೆ ಇಡಿ ಆಘಾತ: ಶರದ್ ಪಾವರ್ ಮೋದಿ ಭೇಟಿ
ಮುಂಬೈ ಏಪ್ರಿಲ್ 6: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಬುಧವಾರ ಸಂಸತ್ತಿನ ಪ್ರಧಾನಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 20 ನಿಮಿಷಗಳ ಮಾತುಕತೆ ನಡೆಸಿದರು. ಕೆಲವು ಭೂ ವ್ಯವಹಾರಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಶಿವಸೇನಾ ನಾಯಕ ಸಂಜಯ್ ರಾವುತ್ ಅವರ ಪತ್ನಿ ಮತ್ತು ಅವರ ಸಹಚರರೊಬ್ಬರ 11.15 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದ ನಂತರ ಈ ಸಭೆ ನಡೆದಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್, "ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರ ಪ್ರಕರಣದ ಬಗ್ಗೆ ನಾನು ಪ್ರಧಾನಿಯೊಂದಿಗೆ ಮಾತನಾಡಿದ್ದೇನೆ. ರಾವುತ್ ಅವರಿಗೆ ಅನ್ಯಾಯವಾಗಿದೆ ಎಂದು ನಾನು ಅವರಿಗೆ ಹೇಳಿದೆ. ಸಂಜಯ್ ರಾವತ್ ಕೇವಲ ಆರ್ಎಸ್ನ ಸದಸ್ಯರಲ್ಲ, ಆದರೆ ಪತ್ರಕರ್ತ ಕೂಡ ಎಂದು ನಾನು ಪ್ರಧಾನಿಗೆ ಹೇಳಿದ್ದೇನೆ'' ಎಂದಿದ್ದಾರೆ.
11.15 ಕೋಟಿ ರೂ ಮೊತ್ತದ ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾವತ್ ಅವರಿಗೆ ಸೇರಿದ ಆಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ. ಅಲಿಬಾಗ್ನಲ್ಲಿರುವ ಎಂಟು ಭೂಮಿಗಳು ಹಾಗೂ ಮಹಾರಾಷ್ಟ ರಾಜಧಾನಿ ಮುಂಬಯಿಯ ದಾದರ್ನಲ್ಲಿ ಇರುವ ಒಂದು ಫ್ಲ್ಯಾಟ್ ಅನ್ನು ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನ್ನ ವಶಕ್ಕೆ ಪಡೆದುಕೊಂಡಿದೆ. ಸಂಜಯ್ ರಾವತ್ ಅವರ ಆತ್ಮೀಯ ಸ್ನೇಹಿತ ಎನ್ನಲಾಗಿರುವ ಪ್ರವೀಣ್ ರಾವತ್ ಎಂಬುವವರ ವಿರುದ್ಧ ಶುಕ್ರವಾರವಷ್ಟೇ ಇ.ಡಿ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿ ಆರೋಪಪಟ್ಟಿ ಸಲ್ಲಿಸಿತ್ತು.

ಏನಿದು ಹಗರಣ?
ಪತ್ರಾ ಚಾವ್ಲ್ ಭೂ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಪ್ರವೀಣ್ ರಾವತ್ ಅವರು 55 ಕೋಟಿ ರೂ ಮೊತ್ತದ ಹಣವನ್ನು ತಮ್ಮ ಪತ್ನಿಯ ಖಾತೆಯಿಂದ ಸಂಜಯ್ ರಾವತ್ ಅವರ ಪತ್ನಿ ವರ್ಷಾ ಖಾತೆಗೆ ವರ್ಗಾವಣೆ ಮಾಡಿದ್ದನ್ನು ಪತ್ತೆ ಹಚ್ಚಿತ್ತು. ಈ ಹಣ ವರ್ಗಾವಣೆ ಮೂಲಕ ಅಲಿಬಾಗ್ನಲ್ಲಿ ಭೂಮಿ ಖರೀದಿ ಮಾಡಲಾಗಿದೆ. 2010 ಮತ್ತು 2012ರ ನಡುವೆ ಭಾರಿ ಪ್ರಮಾಣದಲ್ಲಿ ನಗದು ಪಾವತಿಗಳನ್ನು ನಡೆಸಲಾಗಿದೆ ಎಂದು ಇ.ಡಿ ಹೇಳಿದೆ. ಸಂಜಯ್ ರಾವತ್ ಪತ್ನಿಗೆ ಪ್ರವೀಣ್ ರಾವತ್ ಪತ್ನಿ 55 ಲಕ್ಷ ರೂ ಸಾಲ ಕೂಡ ನೀಡಿದ್ದಾರೆ ಎಂದು ಆರೋಪಿಸಿದೆ.

ಪ್ರವೀಣ್ ರಾವತ್ ಜತೆಗೆ ಎಚ್ಡಿಐಎಲ್ನ ಸಾರಂಗ್ ವಧಾವನ್ ಮತ್ತು ರಾಕೇಶ್ ವಧಾವನ್, ಗುರು ಆಶಿಶ್ ಕನ್ಸ್ಟ್ರಕ್ಷನ್ ರಿಯಲ್ ಎಸ್ಟೇಟ್ ಸಂಸ್ಥೆ ಹಾಗೂ ಇತರರನ್ನು ಕೂಡ ಆರೋಪಪಟ್ಟಿಯಲ್ಲಿ ಇ.ಡಿ ಹೆಸರಿಸಿದೆ. ಪ್ರವೀಣ್ ಅವರನ್ನು ಫೆಬ್ರವರಿ 2ರಂದು ಇ.ಡಿ ಬಂಧಿಸಿತ್ತು. ಗೋರೆಗಾಂವ್ನಲ್ಲಿನ ಪತ್ರಾ ಚಾವ್ಲ್ನಲ್ಲಿ 11.15 ಕೋಟಿ ರೂ ಮೊತ್ತದ ಫ್ಲೂರ್ ಸ್ಪೇಸ್ ಇಂಡೆಕ್ಸ್ (ಎಫ್ಎಸ್ಐ) ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಮಹಾರಾಷ್ಟ್ರ ಹೌಸಿಂಗ್ ಆಂಡ್ ಏರಿಯಾ ಡೆವಲಪ್ಮೆಂಟ್ ಅಥಾರಿಟಿ ಕೆಲವು ವರ್ಷಗಳ ಹಿಂದೆ ಮುಂಬಯಿಯ ಉಪ ನಗರ ಗೋರೆಗಾಂವ್ ಪಶ್ಚಿಮದಲ್ಲಿನ ಪತ್ರಾ ಚಾವ್ಲ್ ಎಂಬಲ್ಲಿ ಮರು ಅಭಿವೃದ್ಧಿಗೆ ಗುರು ಆಶಿಶ್ ಕನ್ಸ್ಟ್ರಕ್ಷನ್ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ಎಂಎಚ್ಎಡಿಎ ಮತ್ತು ಎಚ್ಡಿಐಎಲ್ ನಡುವಿನ ವ್ಯವಹಾರದಲ್ಲಿ ಪ್ರವೀಣ್ ರಾವತ್ ಮಧ್ಯಸ್ಥಿಕೆ ವಹಿಸಿದ್ದರು. ಚಾವ್ಲ್ನಲ್ಲಿ ವಾಸಿಸುವ ಜನರಿಗೆ ಕಡ್ಡಾಯ ವಠಾರಗಳನ್ನು ನಿರ್ಮಿಸದೆಯೇ 11.15 ಕೋಟಿ ರೂಪಾಯಿ ಮೌಲ್ಯದ ಎಫ್ಎಸ್ಐ ಅನ್ನು ಕಂಪೆನಿಯು ಮಾರಾಟ ಮಾಡಿ ವಂಚಿಸಿದೆ ಎಂದು ಇ.ಡಿ ಆರೋಪ ಮಾಡಿದೆ.
ತಮ್ಮ ಆಸ್ತಿಗಳ ಮುಟ್ಟುಗೋಲು ಕ್ರಮದ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆಯೇ ಸಂಜಯ್ ರಾವತ್ ಅವರು, 'ಅಸತ್ಯಮೇವ ಜಯತೇ' ಎಂದು ಟ್ವೀಟ್ ಮಾಡುವ ಮೂಲಕ ಜಾರಿ ನಿರ್ದೇಶನಾಲಯದ ವಿರುದ್ಧ ಕಿಡಿಕಾರಿದ್ದಾರೆ. ರಾವತ್ ಅವರು ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಕೇಂದ್ರ ಸಂಸ್ಥೆಗಳನ್ನು ಆಡಳಿತಾರೂಢ ಬಿಜೆಪಿ ಸರ್ಕಾರ, ತನ್ನ ವಿರುದ್ಧ ಧ್ವನಿ ಎತ್ತುವವರ ಮೇಲೆ ಬಳಸಿಕೊಳ್ಳುತ್ತಿದೆ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದಾರೆ.
ಮತ್ತೊಂದು ಬೆಳವಣಿಗೆಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಎನ್ಸಿಪಿ ಮುಖಂಡ ಅನಿಲ್ ದೇಶ್ಮುಖ್ ಅವರನ್ನು ಸಿಬಿಐ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ಪ್ರತಿ ತಿಂಗಳು 100 ಕೋಟಿ ವಸೂಲಿ ಮಾಡಿ ನೀಡುವಂತೆ ಕೆಲವು ಪೊಲೀಸ್ ಅಧಿಕಾರಿಗಳಿಗೆ ಅನಿಲ್ ದೇಶ್ಮುಖ್ ಆದೇಶಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. ಇದರ ತನಿಖೆಯ ಭಾಗವಾಗಿ ಅನಿಲ್ ದೇಶ್ಮುಖ್ ಅವರನ್ನು ಸಿಬಿಐ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ.












Click it and Unblock the Notifications