ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಗ್ಯಾ ಸಿಂಗ್ ಗೆ ಜಾಮೀನಿಲ್ಲ
ಮುಂಬೈ, ಜೂನ್ 28: ಮಾಲೆಗಾಂವ್ ಸ್ಫೋಟ 2008ರ ಆರೋಪಿಯಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ರಾಷ್ಟ್ರೀಯ ತನಿಖಾ ದಳ ಕೋರ್ಟಿನಿಂದ ಮಂಗಳವಾರ ಕಹಿ ಸುದ್ದಿ ಸಿಕ್ಕಿದೆ. ಸಾಧ್ವಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ದಳವು ಕೋರ್ಟಿಗೆ ನೀಡಿರುವ ವರದಿಯಂತೆ ಸಾಧ್ವಿ ಅವರಿಗೆ ರಿಲೀಫ್ ಸಿಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ವಿಶೇಷ ನ್ಯಾ. ಶ್ರೀಪಾದ್ ತೆಕಾಲೆ ಅವರು ಮಂಗಳವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿ ಜಾಮೀನು ನೀಡಲು ತಿರಸ್ಕರಿಸಿದ್ದಾರೆ.
ಮಾಲೆಂಗಾವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬದವರು ಸಾಧ್ವಿ ವಿರುದ್ಧ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಿದೆ.[ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ರಿಲೀಫ್?]
ಸಾಧ್ವಿ ಅವರ ವಿರುದ್ಧ ಹಾಕಿರುವ ಚಾರ್ಚ್ ಶೀಟ್ ಪೇಲವವಾಗಿದ್ದು, ಯಾವುದೇ ರೀತಿಯಲ್ಲೂ ಆಕೆ ವಿರುದ್ಧ ಸಾಕ್ಷಿ ಸಿಕ್ಕಿಲ್ಲ. 2008ರ ಮಾಲೆಗಾಂವ್ ಸ್ಫೋಟಕ್ಕೆ ಕಾರಣವಾದ ಮೋಟರ್ ಸೈಕಲ್ ಸಾಧ್ವಿಗೆ ಸೇರಿದ್ದು ಎಂಬ ಕಾರಣಕ್ಕೆ ಮಹಾರಾಷ್ಟ್ರ ಉಗ್ರ ನಿಗ್ರಹ ದಳ (ಎಟಿಎಸ್) ದವರು ಸಾಧ್ವಿಯನ್ನು ಬಂಧಿಸಿದ್ದರು.
ಈ ಪ್ರಕರಣದ ಆರೋಪಿಗಳಾಗಿ ಸಾಧ್ವಿ ಪ್ರಗ್ಯಾ ಸಿಂಗ್, ಪುಣೆಯ ಅಭಿನವ್ ಭರತ್, ಸೇನಾಧಿಕಾರಿ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರನ್ನು ಮೋಕಾ ಕಾಯ್ದೆಯಡಿ ಪೊಲೀಸರು ಬಂಧಿಸಿ, ಜೈಲಿಗೆ ಕಳಿಸಿದ್ದರು. ಆದರೆ, Maharashtra Control of Organised Crimes Act (ಮೋಕಾ) ಕಾಯ್ದೆ ಅಡಿಯಲ್ಲಿ ಸಾಧ್ವಿ ವಿರುದ್ಧ ಹಾಕಲಾದ ಆರೊಪಗಳೆಲ್ಲವೂ ತಿರಸ್ಕರಿಸಲ್ಪಟ್ಟಿದೆ.
ತನಿಖೆ ಕೈಗೆತ್ತಿಕೊಂಡ ಎಟಿಎಸ್ ಆರಂಭದಲ್ಲೇ ಸಾಧ್ವಿಯೇ ಈ ಸ್ಫೋಟ ಹಿಂದಿನ ರೂವಾರಿ ಎಂದು ಹೇಳಿಕೆ ನೀಡಿತ್ತು. ನಂತರ ಎನ್ ಐಎ ತನಿಖೆ ನಡೆಸಿ, ಈ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದಿದೆ. ಸ್ಫೋಟಕ್ಕೆ ಕಾರಣವಾದ ಮೋಟರ್ ಸೈಕಲ್ ಸಾಧ್ವಿ ಹೆಸರಿನಲ್ಲಿ ನೋಂದಣಿಯಾಗಿತ್ತು, ರಾಮಚಂದ್ರ ಕಲಸಂಘ್ರ ಅವರು ಘಟನೆಗೂ ಮುನ್ನ ಎರಡು ವರ್ಷಗಳಿಂದ ಈ ಬೈಕನ್ನು ಬಳಸುತ್ತಿದ್ದರು.
ಹೀಗಾಗಿ ಸಾಧ್ವಿ ಅವರ ವಿರುದ್ಧ ಸಾಕ್ಷಿಗಳಿಲ್ಲ ಎಂದು ಕೋರ್ಟಿಗೆ ಎನ್ ಐಎ ತಿಳಿಸಲಿದೆ. ಇದರಿಂದಾಗಿ 8 ವರ್ಷಗಳ ನಂತರ ಜೈಲಿನಿಂದ ಸಾಧ್ವಿ ಹೊರಬರುವ ಸಾಧ್ಯತೆ ಹೆಚ್ಚಿದೆ (ಒನ್ಇಂಡಿಯಾ ಸುದ್ದಿ)