'ಈ ಪ್ರಕರಣದಲ್ಲಿ ನನ್ನನ್ನು ಹರಕೆಯ ಕುರಿ ಮಾಡಲಾಗಿದೆ': ವಾಜೆ ಆರೋಪ
ಮುಂಬೈ, ಮಾರ್ಚ್ 25: ಮುಕೇಶ್ ಅಂಬಾನಿ ಅವರ ನಿವಾಸದ ಮುಂದೆ ಸ್ಫೋಟಕಗಳನ್ನು ತಾವೇ ಇರಿಸಿದ್ದಾಗಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಎನ್ಐಎ ಹೇಳಿದೆ. ಆದರೆ ಈ ಪ್ರಕರಣದಲ್ಲಿ ತಮ್ಮನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ವಾಜೆ ಆರೋಪಿಸಿದ್ದಾರೆ. ಈ ನಡುವೆ ಅವರ ಎನ್ಐಎ ವಶದ ಅವಧಿಯನ್ನು ನ್ಯಾಯಾಲಯ ಏಪ್ರಿಲ್ 3ರವರೆಗೂ ವಿಸ್ತರಿಸಿದೆ.
ತಮ್ಮನ್ನು ಪುನಃ ಎನ್ಐಎ ವಶಕ್ಕೆ ಒಪ್ಪಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಾಜೆ, ಈ ಅಪರಾಧ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ತಮ್ಮನ್ನು ಹರಕೆಯ ಕುರಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
'ನಾನು ಉಸ್ತುವಾರಿಯಾಗಿದ್ದ ಸಮಯದವರೆಗೂ ಈ ಪ್ರಕರಣವನ್ನು ತನಿಖೆ ಮಾಡಿದ್ದೇನೆ.ನಾನು ಮಾತ್ರವಲ್ಲ, ಅಪರಾಧ ವಿಭಾಗ ಹಾಗೂ ಮುಂಬೈ ಪೊಲೀಸರು ತಾವೇನು ಮಾಡಬೇಕೋ ಅದನ್ನು ಮಾಡಿದ್ದಾರೆ. ಆದರೆ ಈಗ ಇದ್ದಕ್ಕಿದ್ದಂತೆ ನನ್ನ ಮೇಲೆ ಆರೋಪಗಳು ಬಂದಿವೆ' ಎಂದು ವಾಜೆ ಗುರುವಾರ ಹೇಳಿದರು.

'ನಾನಾಗಿಯೇ ಎನ್ಐಎ ಹೋಗಿದ್ದು, ಅಲ್ಲಿ ಇದ್ದಕ್ಕಿದ್ದಂತೆ ಬಂಧಿಸಲಾಗಿದೆ. ನಾನು ಅಪರಾಧ ಒಪ್ಪಿಕೊಂಡಿದ್ದೇನೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸತ್ಯವಲ್ಲ' ಎಂದು ವಾಜೆ ತಿಳಿಸಿದರು. ತಮ್ಮ ಹೇಳಿಕೆಯನ್ನು ಲಿಖಿತ ರೂಪದಲ್ಲಿ ನೀಡುವಂತೆ ವಾಜೆಗೆ ನ್ಯಾಯಾಲಯ ಸೂಚಿಸಿತು.
'ವಿಚಾರಣೆ ವೇಳೆ ಸಚಿನ್ ವಾಜೆ, ತಾವು ಮಹಾನ್ ಪೊಲೀಸ್ ಅಧಿಕಾರಿಯಾಗಲು ಬಯಸಿದ್ದಾಗಿ ತಿಳಿಸಿದ್ದಾರೆ. ಅವರು ಈ ಸ್ಫೋಟಕಗಳನ್ನು ಇರಿಸಿದ್ದರು, ಬಳಿಕ ಅವುಗಳನ್ನು ಪತ್ತೆಹಚ್ಚಿದರು. ಈ ಪ್ರಕರಣದ ಮೂಲಕ ತಮಗಾಗಿ ಹೆಸರು ಮಾಡಿಕೊಳ್ಳಲು ಬಯಸಿದ್ದರು' ಎಂದು ತನಿಖಾಧಿಕಾರಿ ವಿಕ್ರಮ್ ಖತಾಲೆ ಹೇಳಿಕೆ ನೀಡಿದರು.
ಸಚಿನ್ ವಾಜೆಯ ಮನೆಯಲ್ಲಿ 62 ಬುಲೆಟ್ಗಳು ಪತ್ತೆಯಾಗಿವೆ. ಅವರ ಸರ್ವೀಸ್ ರಿವಾಲ್ವರ್ಗೆ ನೀಡಲಾದ 30 ಬುಲೆಟ್ಗಳಲ್ಲಿ ಕೇವಲ 5 ಬುಲೆಟ್ಗಳು ಸಿಕ್ಕಿವೆ. ಉಳಿದವು ಎಲ್ಲಿವೆ ಎಂದು ಆರೋಪಿ ಬಹಿರಂಗಪಡಿಸುತ್ತಿಲ್ಲ. ವಾಜೆ ಜತೆ ವ್ಯವಹಾರ ನಡೆಸಿದ್ದ ಆಟೊ ಬಿಡಿಭಾಗ ವ್ಯಾಪಾರಿ ಮನ್ಸುಖ್ ಹಿರೇನ್ ಸಾವಿನಲ್ಲಿಯೂ ವಾಜೆ ಪಾತ್ರ ಇದೆ ಎಂಬ ಶಂಕೆ ಇದೆ ಎಂದು ಎನ್ಐಎ ತಿಳಿಸಿದತು.












Click it and Unblock the Notifications