ಪ್ರಾದೇಶಿಕ ಪಕ್ಷಗಳು ಸ್ಪರ್ಧಿಸುವುದು ಬೇಡ: ರವಿಶಂಕರ್
ಮುಂಬೈ, ಏ.8: ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗುವ ಕನಸು ಹೊತ್ತಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರಿಗೆ ಇದನ್ನು ಅರಗಿಸಿಕೊಳ್ಳುವುದು ತುಸು ಕಷ್ಟವಾದೀತು. ಏನಪ್ಪಾ ಅಂದರೆ ಕನಕಪುರ ಆರ್ಟ್ ಆಫ್ ಲಿವಿಂಗ್ ಧಾರ್ಮಿಕ ಕ್ಷೇತ್ರದ ಗುರುಗಳಾದ ಶ್ರೀ ರವಿಶಂಕರ್ ಗುರೂಜಿ ಅವರು ಲೋಕಸಭಾ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಸ್ಪರ್ಧಿಸುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದರಿಂದ ಸಮ್ಮಿಶ್ರ ಸರಕಾರಗಳು ಕಿಚಡಿ ಸರಕಾರಗಳಾಗಿ ಅಧಿಕಾರಕ್ಕೆ ಬರುವಂತಾಗುತ್ತವೆ. ಹಾಗಾಗಿ ಪ್ರಾದೇಶಿಕ ಪಕ್ಷಗಳು ಸ್ಪರ್ಧಿಸುವುದು ಬೇಡ ಎಂದು ರವಿಶಂಕರ್ ಅವರು ರಾಷ್ಟ್ರೀಯ ಪಕ್ಷವಾದ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಂದಹಾಗೆ ಶ್ರೀ ರವಿಶಂಕರ್ ಗುರೂಜಿಗಳ ಆರ್ಟ್ ಆಫ್ ಲಿವಿಂಗ್ ಕೇಂದ್ರದ ಅಂತಾರಾಷ್ಟ್ರೀಯ ನಿರ್ದೇಶಕ ಮಹೇಶ್ ಗಿರಿ ಪೂರ್ವ ದೆಹಲಿಯ ಬಿಜೆಪಿ ಅಭ್ಯರ್ಥಿ.
ಮತ್ತೊಂದು ಅವಧಿಗೆ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದರೆ ದೇಶದ ಅರ್ಥವ್ಯವಸ್ಥೆ ದುರಂತದತ್ತ ಸಾಗುವುದು ಖಚಿತ. ಮತ್ತೆ ಅಸ್ಥಿರ ಸರಕಾರ ಸ್ಥಾಪನೆಯಾದರೆ ರೂಪಾಯಿಯ ಮೌಲ್ಯ ಡಾಲರಿನಲ್ಲಿ ಶತಕ ಬಾರಿಸುವುದು ಖಚಿತ ಎಂದು ಉಪದೇಶಿಸಿದ ಶ್ರೀ ರವಿಶಂಕರ್ ಗುರೂಜಿ ಅವರು, ಕಾಂಗ್ರೆಸ್ ಹೆಸರನ್ನು ಹೇಳದೆಯೇ ಜಾತ್ಯಾತೀತ ಎಂದು ಹೇಳುವ ಪಕ್ಷವು ಧರ್ಮದ ಜತೆ ಆಟವಾಡುತ್ತಿದೆ ಎಂದು ವಿಷಾದಿಸಿದರು.
ಜತೆಗೆ ಈ ಬಾರಿ ಮತ ಹಾಕುವಾಗ ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಬೇಕು ಎಂದು ಮತದಾರರಿಗೆ ಕರೆ ನೀಡಿದರು. ಆಮ್ ಆದ್ಮಿ ಪಕ್ಷವು ಒಂದು ವರ್ಷದ ಕೂಸಾಗಿದ್ದು, ಅದಾಗಲೇ ಚಾಲಕನ ಸೀಟಿನಲ್ಲಿ ಕುಳಿತುಕೊಳ್ಳುವ ಅವಕಾಶ ಪಡೆಯಿತು. ಆದರೆ ಅರವಿಂದ್ ಕೇಜ್ರಿವಾಲ್ ಅವರು ಪ್ರಯೋಗಗಳನ್ನು ಮಾಡುತ್ತಾ ಕೆಳಗಿಳಿದುಬಿಟ್ಟರು ಎಂದು ಅವರು ಲೇವಡಿ ಮಾಡಿದರು. (ಉತ್ತರಾಭಿಮುಖಿ ಜಯಾ ಪ್ರಧಾನಿ ಕುರ್ಚಿಯತ್ತ ದಾಪುಗಾಲು)
ಇದೇ ವೇಳೆ, ಅತಿ ಆತ್ಮವಿಶ್ವಾಸದಿಂದ ಹೆಚ್ಚು ಸ್ಥಾನಗಳು ದಕ್ಕಲಿವೆ ಎಂದು ಪ್ರಲೋಭೆಗೆ ಒಳಗಾಗದೆ ಸುಮ್ಮನೆ ಕೆಲಸ ಮಾಡುತ್ತಾ ಸಾಗಬೇಕು ಎಂದೂ ಶ್ರೀ ರವಿಶಂಕರ್ ಗುರೂಜಿ ಮೋದಿಗೆ ಸಲಹೆ ನೀಡಿದರು. (ಜಯಲಲಿತಾ ಪ್ರಧಾನಿಯಾಗಲಿ ಅಂದ್ರು ದೇವೇಗೌಡ!)