ರಾಜ್ಯಸಭೆ ಚುನಾವಣೆ: ಮಹಾರಾಷ್ಟ್ರದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ
ಮುಂಬೈ, ಜೂ. 7: ಮಹಾರಾಷ್ಟ್ರ ರಾಜ್ಯದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಗೆ ಮುನ್ನ ಆಡಳಿತರೂಢ ಶಿವಸೇನೆ ಪಕ್ಷ ತನ್ನ ಶಾಸಕರನ್ನು ರೆಸಾರ್ಟ್ಗೆ ಸ್ಥಳಾಂತರಿಸಲಾಗಿದೆ.
ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರ ಮತದಾನಕ್ಕೂ ಮೊದಲು ತನ್ನ ಶಾಸಕರನ್ನು ಬಿಜೆಪಿ ಖರೀದಿ ಮಾಡಬಹುದು ಎಂಬ ಆತಂಕದಿಂದ ಶಾಸಕರನ್ನು ರೆಸಾರ್ಟ್ಗೆ ಸ್ಥಳಾಂತರಿಸಲಾಗಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಸ್ವತಂತ್ರ ಶಾಸಕರನ್ನು ಭೇಟಿ ಮಾಡಿ 6ನೇ ಸ್ಥಾನಕ್ಕೆ ಎಂವಿಎ ಅಭ್ಯರ್ಥಿಗೆ ಬೆಂಬಲಿಸುವಂತೆ ಕೋರಿದರು. ಈ ಮೂಲಕ ವಿರೋಧ ಪಕ್ಷ ಬಿಜೆಪಿಗೆ ಹಿನ್ನಡೆಯನ್ನು ಉಂಟು ಮಾಡಲು ತಂತ್ರ ರೂಪಿಸಿದ್ದರು. ಆದರೆ ಪಕ್ಷೇತರ ಶಾಸಕರು ಮುಖ್ಯಮಂತ್ರಿಗಳ ಪ್ರಸ್ತಾಪ ತಿರಸ್ಕರಿಸಿದರು. ಉದ್ದವ್ ಠಾಕ್ರೆ ಮಂಗಳವಾರ ಎಂವಿಎಯ ಎಲ್ಲಾ ಶಾಸಕರ ಸಭೆ ಕರೆದಿದ್ದಾರೆ.
29 ಸ್ವತಂತ್ರರು ಮತ್ತು ಸಣ್ಣ ಪಕ್ಷಗಳು ಒಟ್ಟಾರೆಯಾಗಿ 8 ಪಕ್ಷಗಳು ಶಿವಸೇನೆಯನ್ನು ಬೆಂಬಲಿಸುತ್ತವೆ ಎಂದು ನಂಬಲಾಗಿದೆ. ಆದರೆ ಇನ್ನೂ ಅನೇಕರು ತಮ್ಮ ಆಯ್ಕೆಯನ್ನು ಬಹಿರಂಗಪಡಿಸಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಣದಲ್ಲಿ ಗೆಲ್ಲಲು ನಿರ್ಧರಿಸಿದ ಬಿಜೆಪಿಯ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೋವಿಡ್ ಸೋಂಕಿಗೆ ಒಳಗಾಗಿದ್ದರೂ ಸಹ ಪಕ್ಷವನ್ನು ಬೆಂಬಲಿಸುವಂತೆ ಫೋನ್ ಮೂಲಕ ಶಾಸಕರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಸುದ್ದಿಗಳಿವೆ.
ಶಿವಸೇನಾ ಶಾಸಕರನ್ನು ಮುಂಬೈನ ಪಶ್ಚಿಮ ಉಪನಗರದಲ್ಲಿರುವ ಮಲಾಡ್ನಲ್ಲಿರುವ ರಿಟ್ರೀಟ್ ಹೋಟೆಲ್ಗೆ ಸ್ಥಳಾಂತರಿಸಲಾಗಿದೆ. 2019 ರಲ್ಲಿ ಎಂವಿಎ ಸರ್ಕಾರ ರಚನೆಯ ಸಮಯದಲ್ಲಿ ಶಿವಸೇನೆಯ ಶಾಸಕರನ್ನು ಅದೇ ಹೋಟೆಲ್ನಲ್ಲಿ ಇರಿಸಲಾಗಿತ್ತು. ಅಂದಹಾಗೆ ರಾಜ್ಯಸಭೆ ಚುನಾವಣೆಗೆ ಮತದಾನ ಜೂನ್ 10ಕ್ಕೆ ನಡೆಯಲಿದೆ.

ಎಐಸಿಸಿ ವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಭಾಗಿ
ರಾಜ್ಯಸಭಾ ಚುನಾವಣೆಗಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯನ್ನೂ ಕಾಂಗ್ರೆಸ್ ಕರೆದಿದೆ. ರಾಜ್ಯಸಭಾ ಚುನಾವಣೆಯ ಎಐಸಿಸಿ ವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಇದರಲ್ಲಿ ಭಾಗವಹಿಸಲಿದ್ದಾರೆ. ಜೂನ್ 10 ರಂದು ಮಹಾರಾಷ್ಟ್ರದಿಂದ ಆರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಶಾಸಕರ ಸ್ಥಳಾಂತರವು ಚುನಾವಣೆಗೆ ಮುನ್ನ ಬಿಜೆಪಿಯಿಂದ ಕುದುರೆ ವ್ಯಾಪಾರದ ಆತಂಕದ ಸಂಕೇತವೆಂದೇ ಪರಿಗಣಿಸಲಾಗಿದೆ.
ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಶನಿವಾರ ಆಡಳಿತಾರೂಢ ಮೈತ್ರಿಕೂಟದ ಎಲ್ಲಾ ನಾಲ್ವರು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದಾಗ, ಕುದುರೆ ವ್ಯಾಪಾರ ನಡೆಯದಂತೆ ಚುನಾವಣೆಯನ್ನು ಮುಂದೂಡಬೇಕೆಂದು ಅವರು ಬಯಸಿದ್ದರು ಎಂದು ಹೇಳಿದರು.

ಆರನೇ ಸ್ಥಾನಕ್ಕೆ ದೊಡ್ಡ ಪೈಪೋಟಿ
ಮಹಾರಾಷ್ಟ್ರ ರಾಜ್ಯದಲ್ಲಿ ಚುನಾವಣೆ ನಡೆಯಲಿರುವ ಆರು ಸ್ಥಾನಗಳಿಗೆ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಪಾಳಯದಲ್ಲಿ ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್ಸಿಪಿ ತಲಾ ಒಬ್ಬ ಅಭ್ಯರ್ಥಿ ಮತ್ತು ಶಿವಸೇನೆ ಇಬ್ಬರನ್ನು ಕಣಕ್ಕಿಳಿಸಿದೆ. ಆರನೇ ಸ್ಥಾನಕ್ಕೆ ದೊಡ್ಡ ಪೈಪೋಟಿ ನಡೆಯಲಿದ್ದು ಚುನಾವಣೆ ಗೆಲ್ಲಲು ಹೆಚ್ಚುವರಿ ಸ್ಥಾನ ನೀಡುವ ಎಂವಿಎ ಪ್ರಸ್ತಾಪವನ್ನು ಬಿಜೆಪಿ ತಿರಸ್ಕರಿಸಿದೆ. ಬಿಜೆಪಿಯ ಧನಂಜಯ್ ಮಹಾದಿಕ್ ಮತ್ತು ಶಿವಸೇನೆಯ ಸಂಜಯ್ ಪವಾರ್ ಮುಖಾಮುಖಿಯಾಗಲಿದೆ.

106 ಸದಸ್ಯರನ್ನು ಹೊಂದಿರುವ ಬಿಜೆಪಿ
ಎನ್ಸಿಪಿ ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದು, ಜೈಲಿನಲ್ಲಿರುವ ತನ್ನ ಇಬ್ಬರು ಶಾಸಕರಾದ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ಗೆ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ನೀಡುವಂತೆ ಮನವಿ ಮಾಡಿದೆ. ಮಲಿಕ್ ಚುನಾವಣೆಯಲ್ಲಿ ಮತ ಚಲಾಯಿಸಲು ಒಂದು ದಿನದ ಜಾಮೀನು ಕೋರಿದ್ದಾರೆ. ಸದನದಲ್ಲಿ 106 ಸದಸ್ಯರನ್ನು ಹೊಂದಿರುವ ಬಿಜೆಪಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಅನಿಲ್ ಬೋಂಡೆ ಮತ್ತು ಧನಂಜಯ್ ಮಹಾದಿಕ್ರನ್ನು ನಾಮನಿರ್ದೇಶನ ಮಾಡಿದೆ.
ಎನ್ಸಿಪಿ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ರನ್ನು ಮರು ನಾಮನಿರ್ದೇಶನ ಮಾಡಿದ್ದರೆ, ಕಾಂಗ್ರೆಸ್ ಇಮ್ರಾನ್ ಪ್ರತಾಪ್ ಘರ್ಹಿ ಕಣಕ್ಕಿಳಿಸಿದೆ. ಸಂಜಯ್ ರಾವತ್ ಮತ್ತು ಸಂಜಯ್ ಪವಾರ್ ಶಿವಸೇನೆಯ ನಾಮನಿರ್ದೇಶಿತರು.

ಎಂವಿಎ ಬಹಿರಂಗವಾಗಿ ಬೆಂಬಲ ಕೇಳಲಿ: ಅಸಾದುದ್ದೀನ್ ಓವೈಸಿ
ಆಡಳಿತಾರೂಢ ಸಮ್ಮಿಶ್ರ ಸರ್ಕಾರಕ್ಕೆ ಅಗತ್ಯಕ್ಕಿಂತ ಹೆಚ್ಚು ಮತಗಳು ಇರುವುದರಿಂದ ನಾವು ನಾಲ್ಕು ಸ್ಥಾನಗಳನ್ನು ಆರಾಮವಾಗಿ ಗೆಲ್ಲುತ್ತೇವೆ ಎಂದು ಕಂದಾಯ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೋರಟ್ ಹೇಳಿದ್ದಾರೆ.
"ಮಹಾರಾಷ್ಟ್ರದ ಎಲ್ಲಾ ಶಾಸಕರು ಒಟ್ಟಿಗೆ ಇರುತ್ತಾರೆ. ನಾವು ಸಭೆ ನಡೆಸುತ್ತೇವೆ. ಕಾಂಗ್ರೆಸ್ ಶಾಸಕರನ್ನು ಹೋಟೆಲ್ಗೆ ಸ್ಥಳಾಂತರಿಸಬೇಕೇ ಎಂದು ನಾವು ಇನ್ನೂ ಚರ್ಚಿಸುತ್ತಿದ್ದೇವೆ" ಎಂದು ಅವರು ಎನ್ಡಿಟಿವಿಗೆ ತಿಳಿಸಿದರು.
ರಾಜ್ಯದಲ್ಲಿ ಇಬ್ಬರು ಶಾಸಕರನ್ನು ಹೊಂದಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಯಾರಿಗೆ ಬೆಂಬಲ ನೀಡಲಿದ್ದಾರೆ? ಎಂದು ಸ್ಪಷ್ಟವಾಗಿ ಹೇಳಿಲ್ಲ. ಆದರೆ ಅವರು ನಿಜವಾಗಿಯೂ ಬಿಜೆಪಿಯನ್ನು ಸೋಲಿಸಲು ಬಯಸಿದರೆ ಎಂವಿಎ ಬಹಿರಂಗವಾಗಿ ಬೆಂಬಲವನ್ನು ಕೇಳಬೇಕು ಎಂದು ಹೇಳಿದ್ದಾರೆ.












Click it and Unblock the Notifications