Breaking; ವಕೀಲ ಗುಣರತ್ನ ನಿವಾಸದಲ್ಲಿ ನೋಟು ಎಣಿಸುವ ಯಂತ್ರ ಪತ್ತೆ
ಮುಂಬೈ, ಏಪ್ರಿಲ್ 20; ವಕೀಲ ಗುಣರತ್ನ ಸದಾವರ್ತೆ ನಿವಾಸದಲ್ಲಿ ಪರಿಶೀಲನೆ ನಡೆಸಿದ ಮುಂಬೈ ಪೊಲೀಸರು ನೋಟು ಎಣಿಸುವ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಣರತ್ನ ಸದಾವರ್ತೆ ಬಂಧನವಾಗಿದೆ.
ಏಪ್ರಿಲ್ 8ರಂದು ಶರದ್ ಪವಾರ್ ನಿವಾಸದ ಮುಂದೆ ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಸಲು ಶರದ್ ಪವಾರ್ ಪ್ರಯತ್ನ ನಡೆಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಗುಣರತ್ನ ಸದಾವರ್ತೆ ಬಂಧನವಾಗಿದ್ದು, 14 ದಿನ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಪ್ರತಿಭಟನೆಗೆ ಗುಣರತ್ನ ಸದಾವರ್ತೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಗುಣರತ್ನ ಸದಾವರ್ತೆ ಪತ್ನಿ ಜಯಶ್ರೀ ಪಾಟೀಲ್ ಅವರನ್ನು ಸಹ ಪ್ರಕರಣದಲ್ಲಿ ಆರೋಪಿಯಾಗಿ ಉಲ್ಲೇಖಿಸಲಾಗಿದೆ. ಈಗ ಮುಂಬೈ ಪೊಲೀಸರು ಗುಣರತ್ನ ಸದಾವರ್ತೆ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

ಶರದ್ ಪವಾರ್ ನಿವಾಸದ ಮುಂದೆ ನಡೆಸಿದ ಪ್ರತಿಭಟನೆ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿಭಟನೆ ನಡೆಸುತ್ತಿದ್ದವರು ಕಲ್ಲಿ, ಚಪ್ಪಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ನೌಕರರ ಪರವಾದ ವಕೀಲ ಗುಣರತ್ನ ಸದಾವರ್ತೆ ಈ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವಿದೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಸುಮಾರು 100 ನೌಕರರು ದಕ್ಷಿಣ ಮುಂಬೈನಲ್ಲಿರುವ ಶರದ್ ಪವಾರ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಎಂಎಸ್ಆರ್ಟಿಸಿಯನ್ನು ಪೂರ್ಣ ಪ್ರಮಾಣದ ಸರ್ಕಾರಿ ಘಟಕವನ್ನಾಗಿ ಮಾಡುವಂತೆ ಬೇಡಿಕೆ ಇಡಲಾಗಿದೆ. ಆದರೆ ಬೇಡಿಕೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಎಂಎಸ್ಆರ್ಟಿಸಿ ನೌಕರರನ್ನು ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಮತ್ತು ಹಣದ ಕೊರತೆ ಎದುರಿಸುತ್ತಿರುವ ಸಾರಿಗೆ ಸಂಸ್ಥೆಯನ್ನು ಸರ್ಕಾರದ ಜೊತೆ ವಿಲೀನಗೊಳಿಸಬೇಕು ಎಂಬ ಬೇಡಿಕೆ ಇಟ್ಟುಕೊಂಡು 2021ರ ನವೆಂಬರ್ನಿಂದಲೂ ನೌಕರರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.












Click it and Unblock the Notifications