ಮುಷ್ಕರ ಕೈಬಿಟ್ಟ ಪೆಟ್ರೋಲಿಯಂ ಡೀಲರ್ಸ್
ಮುಂಬೈ, ನವೆಂಬರ್, 4: ಅಪೂರ್ವಚಂದ್ರ ವರದಿ ಜಾರಿಗಾಗಿ ಆಗ್ರಹಿಸಿ ಮತ್ತು ಕಮಿಷನ್ ಹೆಚ್ಚಳ, ಅಧಿಕಾರಿಗಳ ಕಿರುಕುಳ ತಡೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೆಟ್ರೋಲಿಯಂ ಡೀಲರ್ಸ್ ಗಳು ಕರೆ ನೀಡಿದ್ದ ಎರಡು ದಿನಗಳ ಮುಷ್ಕರವನ್ನು ಕೈಬಿಡಲಾಗಿದೆ.
ಕಮಿಷನ್ ಹೆಚ್ಚಳ ಕುರಿತು ಆಯಿಲ್ ಕಂಪೆನಿಗಳ ಅಸೋಷಿಯೇಶನ್ ದರ ಪರಿಷ್ಕರಣೆ ಮಾಡುವುದಾಗಿ ತಿಳಿಸಿದ್ದು, ದೇಶದಾದ್ಯಂತ ಕರೆ ನೀಡಿದ್ದ ಮುಷ್ಕರವನ್ನು ಕೈಬಿಡಲಾಗಿದೆ ಎಂದು ಪೆಟ್ರೋಲಿಯಂ ಡೀಲರ್ಸ್ ಅಸೋಷಿಯೇಶನ್ ತಿಳಿಸಿದೆ.
ಶುಕ್ರವಾರ ಸಂಜೆ ಮುಂಬೈನಲ್ಲಿ ನಡೆದ ಸಭೆಯಲ್ಲಿ ಲೀಟರ್ ಪೆಟ್ರೋಲ್ 13.8 ಪೈಸೆ. ಹಾಗೂ ಪ್ರತಿ ಲೀ. ಡೀಸೆಲ್ ಗೆ 10 ಪೈಸೆ ಕಮಿಷನ್ ಹೆಚ್ಚಳ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. [ನ.3 ಮತ್ತು 4ರಂದು ಪೆಟ್ರೋಲ್ ಬಂಕ್ ಮುಷ್ಕರ]
ಅಷ್ಟೇ ಅಲ್ಲದೆ ಪ್ರತಿ ಆರು ತಿಂಗಳಿಗೊಮ್ಮೆ ಕಮಿಷನ್ ದರದಲ್ಲಿ ಪರಿಷ್ಕರಣೆ ಮಾಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಗಿದೆ. ಪೆಟ್ರೊಲಿಯಂ ಡೀಲರ್ಸ್ ಸಂಘವು ಬೇಡಿಕೆ ಈಡೇರಿಕೆಗಾಗಿ ಕೇವಲ ಒಂದು ಪಾಳಿಯಲ್ಲಿ ಕೆಲಸ ಮಾಡಲು ಮತ್ತು ಭಾನುವಾರ ಮತ್ತು ರಜಾದಿನಗಳಲ್ಲಿ ಪೆಟ್ರೋಲ್ ಮಾರಾಟ ನಿಲ್ಲಿಸಲು ನಿರ್ಧರಿಸಿದ್ದವು.
ನವೆಂಬರ್ 3 ಮತ್ತು 4ರಂದು ಕಂಪೆನಿಗಳಿಂದ ಪೆಟ್ರೋಲ್ ಖರೀದಿಸದಿರಲು ಡೀಲರ್ಸ್ ಅಸೋಷಿಯೇಶನ್ ನಿರ್ಧರಿಸಿತ್ತು.