ದೇಶಿಯ ವಿಮಾನಗಳ ಹಾರಾಟ; ಮುಂಬೈ, ದೆಹಲಿಯಲ್ಲಿ ಗೊಂದಲ
ಮುಂಬೈ, ಮೇ 25: ಕೊರೊನಾ ಹಾವಳಿಯ ನಡುವೆಯೂ ದೇಶದಲ್ಲಿ ಪ್ರಯಾಣಿಕರ ದೇಶಿಯ ವಿಮಾನಯಾನ ಆರಂಭವಾಗಿದೆ. ಹಲವಾರು ರಾಜ್ಯಗಳು ಷರತ್ತುಗಳೊಂದಿಗೆ ಪ್ರಯಾಣಿಕರಿಗೆ ವಿಮಾನ ಹಾರಾಟಕ್ಕೆ ಅವಕಾಶ ಮಾಡಿ ಕೊಟ್ಟಿವೆ.
ಸೋಮವಾರ ವಿಮಾನ ಪ್ರಯಾಣ ಆರಂಭವಾಗಿರುವುದಕ್ಕೆ ಕೆಲವು ರಾಜ್ಯಳು ಸಂಪೂರ್ಣ ಒಪ್ಪಿಗೆ ಕೊಡದಿದ್ದರಿಂದ ಗೊಂದಲಗಳೂ ಆರಂಭವಾಗಿದ್ದವು.
ಮಹಾರಾಷ್ಟ್ರದ ಮುಂಬೈನ ವಿಮಾನ ನಿಲ್ದಾಣದಲ್ಲಿ ಈ ಗೊಂದಲಗಳಿಂದ ಪ್ರಯಾಣಿಕರು ಒಂದು ರಾತ್ರಿ ಕಾಯ್ದು, ಸೋಮವಾರ ಬೆಳಿಗ್ಗೆ ಕೆಲವರು ವಿಮಾನ ಪ್ರಯಾಣ ಮಾಡಿದರೆ, ಇನ್ನೂ ಕೆಲವರು ವಿಮಾನ ಸಿಗದಿದ್ದಕ್ಕೆ ವಾಪಸ್ ಹೋಗಿರುವ ಘಟನೆ ನಡೆದಿದೆ. ದೆಹಲಿಯಲ್ಲೂ ತಡವಾಗಿ ವಿಮಾನಗಳು ಹಾರಾಟ ನಡೆಸಿವೆ.

ಮಹಾರಾಷ್ಟ್ರ ಸರ್ಕಾರ ಮೀನಾಮೇಷ
ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ ವಿಪರೀತವಾಗಿದೆ. ಹೀಗಾಗಿ ದೇಶಿ ವಿಮಾನಯಾನಕ್ಕೆ ಅವಕಾಶ ಕೊಡಲು ಮಹಾರಾಷ್ಟ್ರ ಸರ್ಕಾರ ಮೀನಾಮೇಷ ಎಣಿಸುತ್ತಿತ್ತು. ಕೇಂದ್ರ ಸರ್ಕಾರದೊಂದಿಗೆ, ಹಲವು ಸುತ್ತಿನ ಮಾತುಕತೆ ನಡೆಸಿದ ನಂತರ ಮಹಾರಾಷ್ಟ್ರ ಸರ್ಕಾರವು, ಸೋಮವಾರ ರಾಜ್ಯದಿಂದ ವಿಮಾನ ಕಾರ್ಯಾಚರಣೆಯನ್ನುಆರಂಭಿಸಲು ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಭಾನುವಾರ ಸಂಜೆ ವಿಮಾನ ನಿಲ್ದಾಣಕ್ಕೆ ಬಂದಿದ್ದವರು, ಸೋಮವಾರ ಬೆಳಿಗ್ಗೆ ತೆರಳಿದ್ದಾರೆ.

25 ವಿಮಾನಗಳಿಗೆ ಮಾತ್ರ ಅವಕಾಶ
ಮುಂಬೈಗೆ ಕೇವಲ 25 ವಿಮಾನಗಳು ಇಳಿಯಲು ಮತ್ತು ಮುಂಬೈ ವಿಮಾನ ನಿಲ್ದಾಣದಿಂದ ಹೋಗಲು 25 ವಿಮಾನಗಳಿಗೆ ಮಹಾ ಸರ್ಕಾರ ಅವಕಾಶ ನೀಡಿದೆ. ಮುಂಬೈ ನಿಲ್ದಾಣಕ್ಕೆ ಬರುವರನ್ನು ಕಡ್ಡಾಯವಾಗಿ 14 ದಿನ ಸಾಂಸ್ಥಿಕ ಕ್ವಾರಂಟೈನ್ ಇಡಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ.

ವಿಮಾನಗಳ ಸಂಖ್ಯೆಗೆ ಮಿತಿ ಹೇರಿಲ್ಲ
ದೆಹಲಿಯಲ್ಲೂ ದೇಶಿ ವಿಮಾನಯಾನ ಆರಂಭವಾಗಿದೆ. ಆದರೆ, ವಿಮಾನಗಳ ಸಂಖ್ಯೆಗೆ ಮಿತಿ ಹೇರಿಲ್ಲ.
ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಲಾಗುತ್ತದೆ ಎಂದು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಲಕ್ಷಣ ರಹಿತ ಪ್ರಯಾಣಿಕರು ಕಡ್ಡಾಯ ಸ್ಕ್ರೀನಿಂಗ್ ನಂತರ ವಿಮಾನ ನಿಲ್ದಾಣದಿಂದ ನಿರ್ಗಮಿಸಬಹುದು.

ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್
ಕೊರೊನಾದ ಸೌಮ್ಯವಾದ ರೋಗಲಕ್ಷಣಗಳಿದ್ದರೆ ಅಂತವರು ಹೋಟೆಲ್ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್ಗೆ ಹೋಗಲು ಆಯ್ಕೆ ನೀಡಲಾಗಿದೆ. ತೀವ್ರ ರೋಗಲಕ್ಷಣಗಳಿರುವವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ಗೆ ತೆಗೆದುಕೊಂಡು ಹೋಗಲಾಗುತ್ತದೆ. ಸೋಮವಾರ ಬೆಳಿಗ್ಗೆ 5:55 ಕ್ಕೆ ದೆಹಲಿಯಿಂದ ಜೈಪುರಕ್ಕೆ ಮೊದಲ ಏರ್ ಇಂಡಿಯಾ ವಿಮಾನ ಪ್ರಯಾಣಿಸಿತು.












Click it and Unblock the Notifications