ಭೀಮಾ ಕೋರೆಗಾಂವ್ ಪ್ರಕರಣದ ತನಿಖೆ: ಕೇಂದ್ರ-ಮಹಾರಾಷ್ಟ್ರ ಜಟಾಪಟಿ
ಮುಂಬೈ, ಜನವರಿ 25: ತೀವ್ರ ವಿವಾದ ಸೃಷ್ಟಿಸಿದ್ದ 2018ರ ಭೀಮಾ ಕೋರೆಗಾಂವ್ ಪ್ರಕರಣದ ಕುರಿತು ಮರು ತನಿಖೆಗೆ ಒಳಪಡಿಸಲು ಮಹಾರಾಷ್ಟ್ರ ಸರ್ಕಾರ ಮುಂದಾದ ಬೆನ್ನಲ್ಲೇ, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೈಗೆತ್ತಿಕೊಂಡಿದೆ.
ಇದು ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರದಲ್ಲಿನ ವಿಕಾಸ್ ಅಘಾದಿ ಸರ್ಕಾರದ ನಡುವಿನ ತಿಕ್ಕಾಟವನ್ನು ಮತ್ತೊಂದು ಹಂತಕ್ಕೆ ಏರಿಸಿದೆ. ಈ ಘಟನೆಯಲ್ಲಿ ಬುದ್ಧಿಜೀವಿಗಳು ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಕೈಬಿಡಬೇಕೇ ಅಥವಾ ತನಿಖೆ ನಡೆಸಲು ಒಂದು ವಾರದೊಳಗೆ ವಿಶೇಷ ತನಿಖಾ ತಂಡ ಸ್ಥಾಪಿಸಬೇಕೇ ಎಂಬ ಬಗ್ಗೆ ಮಹಾರಾಷ್ಟ್ರದ ತ್ರಿಪಕ್ಷೀಯ ಮೈತ್ರಿ ಸರ್ಕಾರ ಚಿಂತನೆ ನಡೆಸಿತ್ತು.
ಆದರೆ ಈ ಪ್ರಕರಣದ ತನಿಖೆಯನ್ನು ಹೊರರಾಜ್ಯಗಳಲ್ಲಿಯೂ ಮಾಡಬೇಕಿರುವುದರಿಂದ ತಾನು ಇದನ್ನು ವಹಿಸಿಕೊಳ್ಳುತ್ತಿರುವುದಾಗಿ ಎನ್ಐಎ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿದೆ. ಇದು ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರದ ಅನುಮತಿ ಇಲ್ಲದೆಯೇ ಕೇಂದ್ರ ಸರ್ಕಾರವು 2018ರ ಭೀಮಾ-ಕೋರೆಗಾಂವ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಿದೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಆರೋಪಿಸಿದ್ದಾರೆ.
ಈ ಪ್ರಕರಣದ ಕುರಿತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಅನಿಲ್ ದೇಶಮುಖ್ ಗುರುವಾರ ಪೊಲೀಸ್ ಮಹಾನಿರ್ದೇಶಕ ಸೊಬೋಧ್ ಜೈಸ್ವಾಲ್ ಮತ್ತು ರಾಜ್ಯ ಗುಪ್ತಚರ ಆಯುಕ್ಕೆ ರಶ್ಮಿ ಶುಕ್ಲಾ ಜತೆ ಪರಾಮರ್ಶನಾ ಸಭೆ ನಡೆಸಿದ್ದರು. ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಸಿದ್ಧಾಂತವನ್ನು ವಿರೋಧಿಸಿದವರನ್ನು ನಗರ ನಕ್ಸಲರೆಂಬ ಹಣೆಪಟ್ಟಿ ಕಟ್ಟಿ ಜೈಲಿಗೆ ಅಟ್ಟುತ್ತಿದೆ ಎಂದು ಆರೋಪಿಸಲಾಗಿತ್ತು.
ಈ ಘಟನೆಯಲ್ಲಿ ಕೆಲವು ಜನರನ್ನು ಸಿಲುಕಿಸುವುದರಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ವಿವಿಧ ಪ್ರಕರಣಗಳ ತನಿಖೆಗೆ ಎಸ್ಐಟಿ ರಚಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಎನ್ಸಿಪಿ ನಾಯಕ ಶರದ್ ಪವಾರ್ ಪತ್ರ ಬರೆದಿದ್ದರು.












Click it and Unblock the Notifications