ರಾಜ್ಯಸಭಾ ಚುನಾವಣೆ: ಒಂದು ದಿನದ ಜಾಮೀನು ಕೋರಿ ನವಾಬ್ ಮಲಿಕ್ ಅರ್ಜಿ
ಮುಂಬೈ ಜೂನ್ 6: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ)ದಿಂದ ಬಂಧಿತರಾಗಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಒಂದು ದಿನದ ಜಾಮೀನು ಕೋರಿ ಮುಂಬೈ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜೈಲು ಸೇರಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಕೂಡ ಕಳೆದ ವಾರ ಇದೇ ರೀತಿಯ ಅರ್ಜಿಯನ್ನು ಮುಂಬೈ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಅಪರೂಪದ ಪ್ರಕರಣ; ರಮ್ಮಿ ಆಡುತ್ತಿದ್ದವರಿಗೆ ಜೈಲು ಶಿಕ್ಷೆ!
ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡುವಂತೆ ಕೋರಿ ಎನ್ಸಿಪಿ ಪಕ್ಷದ ನಾಯಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಸಲ್ಲಿಸಿರುವ ಅರ್ಜಿಗಳಿಗೆ ಆಕ್ಷೇಪಣೆಗಳು ಏನಾದರು ಇದ್ದರೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ನ್ಯಾಯಾಲಯ ಸೂಚಿಸಿ, ಮುಂದಿನ ವಿಚಾರಣೆಯನ್ನು ಜೂನ್ 8 ಕ್ಕೆ ನಿಗದಿಪಡಿಸಿದೆ.
"ಇಡಿ ವತಿಯಿಂದ ಜೂನ್ 7 ರಂದೇ ಆಕ್ಷೇಪಣೆಗಳು ಸಲ್ಲಿಕೆಯಾಗಲಿವೆ. ಅದಾಗ್ಯೂ, ಜೂನ್ 8 ರಂದು ವಿಚಾರಣೆ ನಡೆಯಲಿದೆ,'' ಎಂದು ಇಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ತಿಳಿಸಿದ್ದಾರೆ. ಮಹಾರಾಷ್ಟ್ರದ ಆರು ಸ್ಥಾನಗಳಿಗೆ ಜೂನ್ 10 ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ.
Breaking; ರಾಜ್ಯಸಭೆ ಚುನಾವಣೆ, ಕಾಂಗ್ರೆಸ್ನಿಂದ ವೀಕ್ಷಕರ ನೇಮಕ
ಕ್ಲೀನ್ ಚಿಟ್ ನೀಡುವ ವಿಶ್ವಾಸವಿದೆ: "ಎನ್ಸಿಪಿ ನಾಯಕರಾದ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಜೈಲಿನಲ್ಲಿ ಇದ್ದಾರೆ. ಅನಿಲ್ ದೇಶಮುಖ್ ಕುಟುಂಬದ ಮೇಲೆ 109 ಬಾರಿ ಇಡಿ ದಾಳಿ ಮಾಡಿದ್ದು, ಇದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಸೇರಿಸಬೇಕು. ನ್ಯಾಯಾಲಯ ಅವರಿಗೆ ಕ್ಲೀನ್ ಚಿಟ್ ನೀಡುತ್ತದೆ ಎಂಬ ವಿಶ್ವಾಸ ನಮಗಿದೆ. ಕೇಂದ್ರ ಸರಕಾರದ ವಿರುದ್ಧ ಮಾತನಾಡುವವರ ಮೇಲೆ ತನಿಖಾ ತಂಡಗಳಿಂದ ದಾಳಿ ಮಾಡಿಸಲಾಗುತ್ತಿದೆ,'' ಎಂದು ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಕಿಡಿಕಾರಿದ್ದಾರೆ.
ದಾವುದ್ ಗ್ಯಾಂಗ್ ಜತೆ ನಂಟು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವಾಬ್ ಮಲಿಕ್ ಅವರನ್ನು ಫೆಬ್ರವರಿ 23ರಂದು ಇಡಿ ಅಧಿಕಾರಿಗಳು ಬಂಧಿಸಿದ್ದರು. 1993 ರ ಬಾಂಬೆ ಸ್ಫೋಟದ ಅಪರಾಧಿಗಳಾದ ಸರ್ದಾರ್ ಶಾವಾಲಿ ಖಾನ್ ಮತ್ತು ದಿವಂಗತ ಹಸೀನಾ ಪಾರ್ಕರ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರಾದ ಮೊಹಮ್ಮದ್ ಸಲೀಂ, ಇಶಾಕ್ ಪಟೇಲ್ ಅವರೊಂದಿಗೆ ನವಾಬ್ ಮಲಿಕ್ ಆಸ್ತಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಇಬ್ರಾಹಿಂ ಸೋದರಿ ಹಸೀನಾ ಪಾರ್ಕರ್, ಸಂಬಂಧಿಕರು ಹಾಗೂ ಆಪ್ತರ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲದೇ ದಾವೂದ್ ಸೋದರ ಇಕ್ಬಾಲ್ ಕಸ್ಕರ್ನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಗೋವಾಲಾ ಕಟ್ಟಡ ಖರೀದಿಸಿದ್ದ ಮಲಿಕ್: ದಾವೂದ್ ಇಬ್ರಾಹಿಂನ ಡಿ-ಕಂಪನಿಯೊಂದಿಗೆ ನವಾಬ್ ಮಲಿಕ್ ದೀರ್ಘಕಾಲದ ಸಂಪರ್ಕ ಹೊಂದಿದ್ದಾರೆ. 1996 ರಲ್ಲಿ ಕುರ್ಲಾ ವೆಸ್ಟ್ನಲ್ಲಿರುವ ಗೋವಾಲಾ ಕಟ್ಟಡದ ಕಾಂಪೌಂಡ್ ಅನ್ನು ಆಕ್ರಮಿಸಿಕೊಳ್ಳಲು ಡಿ-ಕಂಪನಿ ಪಿತೂರಿ ನಡೆಸಿದೆ. ದಾವೂದ್ ಸಂಬಂಧಿಕರಾದ ಹಸೀನಾ ಪರ್ಕರ್ ಮತ್ತು ಸಲೀಂ ಪಟೇಲ್ ಗೋವಾಲಾ ಬಿಲ್ಡಿಂಗ್ನ ವಿವಾದವನ್ನು ಬಗೆಹರಿಸಿದ್ದಾರೆ ಮತ್ತು ಅಲ್ಲಿ ಕಚೇರಿಯನ್ನು ತೆರೆಯುವ ಮೂಲಕ ಕಾಂಪೌಂಡ್ನ ಭಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಹಸೀನಾ ಪಾರ್ಕರ್ ತನ್ನ ನಿಯಂತ್ರಣದಲ್ಲಿರುವ ಗೋವಾಲಾ ಕಟ್ಟಡದ ಒಂದು ಭಾಗವನ್ನು ನವಾಬ್ ಮಲಿಕ್ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ಇಡಿ ತನ್ನ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.