ಅಮಾನವೀಯ: ಮುಸ್ಲಿಂ ಖೈದಿಗೆ ಓಂ ಚಿಹ್ನೆ ಬರೆ ಹಾಕಿದ ಜೈಲು ಅಧಿಕಾರಿ
ಮುಂಬೈ, ಏಪ್ರಿಲ್ 20: ಉತ್ತಮ ವಾತಾವರಣಕ್ಕೆ, ಖೈದಿಗಳ ಮನಃಪರಿವರ್ತನೆಗೆ ಒಂದು ಕಾಲದಲ್ಲಿ ಹೆಸರಾಗಿದ್ದ ತಿಹಾರ್ ಜೈಲಿನಲ್ಲಿ ಅತ್ಯಂತ ಅಮಾನವೀಯ ಘಟನೆಯೊಂದು ನಡೆದಿದೆ. ಅದೂ ಅಲ್ಲಿನ ಪೊಲೀಸ್ ಅಧಿಕಾರಿಯಿಂದಲೇ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜೈಲು ಅಧಿಕಾರಿಯೊಬ್ಬ ಮುಸ್ಲಿಂ ಖೈದಿಯೊಬ್ಬರಿಗೆ ಮನಸೋಇಚ್ಛೆ ಥಳಿಸಿ ಆ ನಂತರ ಆತನ ಬೆನ್ನಿನ ಮೇಲೆ ಓಂ ಚಿಹ್ನೆಯ ಬರೆ ಹಾಕಿದ್ದಾರೆ.
ಮುಸ್ಲಿಂ ಖೈದಿ ಶಬ್ಬೀರ್ ಅಲಿಯಾಸ್ ನಬೀರ್ ಅವರ ಬೆನ್ನಿನ ಮೇಲೆ ಓಂ ಚಹ್ನೆಯ ಮುದ್ರೆ ಒತ್ತಲಾಗಿದೆ. ಅವರ ಕುಟುಂಬದವರು ಜೈಲು ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದು ತನಿಖೆ ಪ್ರಗತಿಯಲ್ಲಿದೆ.

ಶಬ್ಬೀರ್ ಏಪ್ರಿಲ್ 12 ರಂದು ತಮ್ಮ ಬ್ಯಾರಕ್ ನಲ್ಲಿ ಇಂಡಕ್ಷನ್ ಒಲೆ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಅದನ್ನು ಬದಲಾಯಿಸ ಬೇಕು ಎಂದು ಜೈಲಿನ ಸೂಪರ್ಇಂಡೆಂಟ್ ಗೆ ದೂರು ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ಜೈಲು ಅಧಿಕಾರಿಗಳು ಶಬ್ಬೀರ್ನನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಚೆನ್ನಾಗಿ ಬಡಿದು ಆತನ ಬೆನ್ನಿನ ಮೇಲೆ ಓಂ ಎಂದು ಚಿಹ್ನೆ ಬರೆದಿದ್ದಾರೆ. ಅಲ್ಲದೆ ಎರಡು ದಿನ ಊಟ ನೀಡದೇ ಉಪವಾಸ ಶಿಕ್ಷೆ ನೀಡಿದ್ದಾರೆ.
ಶಬ್ಬೀರ್ನ ಕುಟುಂಬ ಸದಸ್ಯರು ಆತನನ್ನು ಕಾಣಲು ಬಂದಾಗ ಅವರಿಗೆ ವಿಷಯ ತಿಳಿದು, ನಂತರ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ತಮ್ಮ ಮಗನ ಜೀವಕ್ಕೆ ಅಪಾಯವಿದೆ ಎಂದು ದೂರು ನೀಡಿದ್ದಾರೆ.
ಪ್ರಸ್ತುತ ಶಬ್ಬೀರ್ನನ್ನು ಬೇರೆ ಜೈಲಿಗೆ ವರ್ಗಾಯಿಸಲಾಗಿದೆ. ಪ್ರಕರಣದ ಬಗ್ಗೆ ಶೀಘ್ರ ತನಿಖೆಗೆ ಆದೇಶಿಸಲಾಗಿದೆ. ಶಬ್ಬೀರ್ ನಿಯಮಿತ ಅಪರಾಧಿ ಮನೋಭಾವದನಾಗಿದ್ದು, ಆತನು ಜೈಲಿನಲ್ಲಿ ಸಹ ಅಪರಾಧ ಚಟುವಟಿಕೆ ಮಾಡುತ್ತಿದ್ದ ಎಂದು ತಿಹಾರ್ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ.












Click it and Unblock the Notifications