ಕೋವಿಡ್ ಕಾಣಿಸಿಕೊಂಡ ಬಳಿಕ ಮೊದಲ ಬಾರಿ ಮುಂಬೈನಲ್ಲಿ 'ಜೀರೋ' ಸಾವು ಪ್ರಕರಣ
ಮುಂಬೈ, ಅಕ್ಟೋಬರ್ 17: ಕೊರೊನಾ ವೈರಸ್ ಸೋಂಕು 2020 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ಮುಂಬೈನಲ್ಲಿ ಯಾವುದೇ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿ ಆಗಿಲ್ಲ ಎಂದು ಮಾಹಿತಿ ಲಭಿಸಿದೆ.
ಕೊರೊನಾ ವೈರಸ್ ಸೋಂಕಿನ ಮೊದಲ ಅಲೆ ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ಮುಂಬೈನಲ್ಲಿ ದೈನಂದಿನ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ವರದಿ ಆಗುತ್ತಿತ್ತು. ಹಾಗೆಯೇ ಈ ಸಂದರ್ಭದಲ್ಲಿ ಪ್ರತಿ ದಿನವೂ ಕೋವಿಡ್ ಸಾವು ಪ್ರಕರಣಗಳು ಮುಂಬೈನಲ್ಲಿ ವರದಿಯಾಗಿದೆ.
42 ಲಕ್ಷ ಮಂದಿಗೆ ಸಂಪೂರ್ಣ ಲಸಿಕೆ: 'ಮುಂಬೈಗೆ ಕೋವಿಡ್ 3 ನೇ ಅಲೆ ಅಪ್ಪಳಿಸುವಂತೆ ಕಾಣಲ್ಲ'
ಆದರೆ ಭಾನುವಾರ ಯಾವುದೇ ಕೋವಿಡ್ ಸಾವು ಪ್ರಕರಣಗಳು ಮುಂಬೈನಲ್ಲಿ ವರದಿಯಾಗಿಲ್ಲ. 2020 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಯಾವುದೇ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿ ಆಗಿಲ್ಲ ಎಂದು ತಿಳಿಸಿರುವ ಬೃಹನ್ಮುಂಬೈನ ಮುನಿಸಿಪಲ್ ಕಾರ್ಪೊರೇಶನ್, ಭಾನುವಾರ ಮುಂಬೈನಲ್ಲಿ 367 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿ ಆಗಿದೆ ಎಂದು ಮಾಹಿತಿ ನೀಡಿದೆ.
ಈ ಬಗ್ಗೆ ಅಧಿಕ ಮಾಹಿತಿ ನೀಡಿರುವ ಬಿಎಂಸಿಯ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಸಿಂಗ್ ಚಹಲ್, "ಮುಂಬೈನಲ್ಲಿ ಇರುವ ನಮ್ಮೆಲ್ಲರಿಗೆ ಇದು ಒಂದು ಅತೀ ಮುಖ್ಯವಾದ ಸುದ್ದಿ. ನಾನು ಎಂಸಿಜಿಎಂ ತಂಡದ ಅದ್ಭುತ ಕಾರ್ಯನಿರ್ವಹಣೆಗಾಗಿ ಧನ್ಯವಾದ ತಿಳಿಸುತ್ತೇನೆ. ನಮಗೆ ಬೆಂಬಲ ನೀಡಿದ, ನಮ್ಮ ಮೇಲೆ ನಂಬಿಕೆ ಇರಿಸಿದ ಎಂಸಿಜಿಎಂ ತಂಡಕ್ಕೆ ನಾವು ತುಂಬು ಹೃದಯದ ಧನ್ಯವಾದವನ್ನು ತಿಳಿಸುತ್ತೇನೆ," ಎಂದು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಕೊರೊನಾ ಸೋಂಕಿನ ವಿರುದ್ಧ ಲಸಿಕೆಯನ್ನು ಪಡೆಯುವ ಬಗ್ಗೆಯೂ ಇಕ್ಬಾಲ್ ಸಿಂಗ್ ಚಹಲ್ ಒತ್ತಿ ಹೇಳಿದ್ದಾರೆ. "ಜನರು ಎಲ್ಲಾ ಮಾಸ್ಕ್ ಧರಿಸೋಣ. ಹಾಗೆಯೇ ಈವರೆಗೂ ಲಸಿಕೆಯನ್ನುಯ ಪಡೆಯದಿದ್ದರೆ ಈಗಲೇ ಹೋಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ. ಮುಂಬಯಿಯನ್ನು ಸುರಕ್ಷಿತವಾಗಿಡಲು ನಮಗೆ ಸಹಾಯ ಮಾಡುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ," ಎಂದಿದ್ದಾರೆ.
ಮುಂಬೈನಲ್ಲಿ ಕೋವಿಡ್ ಪಾಸಿಟಿವಿಟಿ ದರವು ಶೇಕಡ 1.27 ಕ್ಕೆ ಇಳಿಕೆ ಕಂಡಿದೆ. ಪ್ರಸ್ತುತ 5,030 ಸಕ್ರಿಯ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿ ಆಗಿದೆ. ಈ ನಗರದಲ್ಲಿ ಪ್ರಸ್ತುತ ಕೋವಿಡ್ ರೋಗಿಗಳ ಚೇತರಿಕೆ ಪ್ರಮಾಣವು ಶೇಕಡ 97 ಆಗಿದೆ. ಇನ್ನು ಕಳೆದ 24 ಗಂಟೆಯಲ್ಲಿ 28,600 ಮಂದಿಯ ಕೊರೊನಾ ವೈರಸ್ ಸೋಂಕು ಪರೀಕ್ಷೆಯನ್ನು ನಡೆಸಲಾಗಿದೆ ಎಂದು ವರದಿಯಾಗಿದೆ.
ಥಾಣೆ: ವ್ಯಕ್ತಿಗೆ ಕೊರೊನಾ ಲಸಿಕೆ ಬದಲು ರೇಬಿಸ್ ಲಸಿಕೆ ನೀಡಿದ ನರ್ಸ್ ಅಮಾನತು
ಮುಂಬೈ ಸೇರಿದಂತೆ ಮಹಾರಾಷ್ಟ್ರ ರಾಜ್ಯಾದಾದ್ಯಂತ ಕೊರೊನಾ ವೈರಸ್ ಸೋಂಕಿನ ಎರಡನೆಯ ಅಲೆಯ ಸಂದರ್ಭದಲ್ಲಿ ಅತೀ ಅಧಿಕ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿ ಆಗಿದೆ. ಮಹಾರಾಷ್ಟ್ರದಲ್ಲಿ ಶನಿವಾರ 1,553 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದೆ. 26 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದರು. 1,682 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದರು ಎಂದು ರಾಜ್ಯ ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.
ಇನ್ನು ರಾಜ್ಯದಲ್ಲಿ ದೀಪಾವಳಿ ಬಳಿಕ ಮತ್ತೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಅಧಿಕವಾಗುವ ಸಾಧ್ಯತೆ ಇದೆ ಎಂದು ರಾಜ್ಯದ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ. ಮೂರನೇ ಅಲೆ ಕಾಣಿಸಿಕೊಂಡಾಗ ಅದನ್ನು ಎದುರಿಸಲು ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಲಾಗಿದೆ ಎಂದು ಕೂಡಾ ರಾಜ್ಯ ಆರೋಗ್ಯ ಸಚಿವರು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)